×
Ad

ಮಂಗಳೂರು: ತ್ಯಾಜ್ಯ ವಿಂಗಡನೆ ಪರಿಶೀಲನೆ; ಅಂಬೇಡ್ಕರ್ ವೃತ್ತದ ಸುತ್ತ ಮುತ್ತಲಿನ ಹೊಟೇಲ್‌ಗಳಿಗೆ ದಾಳಿ

Update: 2025-04-22 13:30 IST

ಮಂಗಳೂರು, ಎ. 22: ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಸುತ್ತಮುತ್ತಲಿನ ಹೊಟೇಲ್‌ಗಳಿಗೆ ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿ ತ್ಯಾಜ್ಯ ವಿಂಗಡನೆಗೆ ಸಂಬಂಧಿಸಿ ನಿರ್ಲಕ್ಷ್ಯ ವಹಿಸುತ್ತಿರುವರಿಗೆ ದಂಡ ವಿಧಿಸಿದೆ.

ಪಾಲಿಕೆ ಆಯುಕ್ತ ರವಿಚಂದ್ರ ನಾಯ್ಕ್ ಅವರ ನೇತೃತ್ವದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ದಿಢೀರ್ ಭೇಟಿ ನೀಡಿ ನಿಯಮ ಪಾಲಿಸದ ಹೊಟೇಲ್‌ಗವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು.

ಮನೆಗಳು, ಹೊಟೇಲ್‌ಗಳು, ಅಪಾರ್ಟ್‌ಮೆಂಟ್ ಸೇರಿದಂತೆ ತ್ಯಾಜ್ಯ ಉತ್ಪತ್ತಿಯಾಗುವಲ್ಲಿ ಹಸಿ, ಒಣ ಹಾಗೂ ಸ್ಯಾನಿಟರಿ ಪ್ಯಾಡ್‌ಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡುವಂತೆ ಈಗಾಗಲೇ ಪಾಲಿಕೆಯಿಂದ ಸೂಚನೆ ನೀಡಲಾಗಿದೆ. ಸೂಚನೆ ಪಾಲನೆಯಾಗುತ್ತಿರುವ ಕುರಿತಂತೆ ಇಂದು ನಗರದ ಕುಡ್ಲ ಕ್ವಾಲಿಟಿ ರೆಸ್ಟೋರೆಂಟ್, ಫುಡ್ ಜಂಕ್ಷನ್, ಸಮಕ್ ಡೈನ್, ಕೈರಲಿ ಸೇರಿದಂತೆ ಕೆಲ ಹೊಟೇಲ್‌ಗಳಿಗೆ ಭೇಟಿ ನೀಡಿ ತ್ಯಾಜ್ಯ ವಿಂಗಡನೆಯಾಗುತ್ತಿರುವ ಕುರಿತಂತೆ ಪಾಲಿಕೆ ಆಯುಕ್ತರು ಪರಿಶೀಲನೆ ನಡೆಸಿದರು.

ನಾಲ್ಕು ಹೊಟೇಲ್‌ಗಳ ಭೇಟಿಯ ವೇಳೆ ತ್ಯಾಜ್ಯ ವಿಂಗಡನೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ತಲಾ 5,000 ರೂ.ನಂತೆ ದಂಡ ವಿಧಿಸಲಾಗಿದೆ.

ಸಾರ್ವಜನಿಕರು ಸೇರಿದಂತೆ ತ್ಯಾಜ್ಯ ಉತ್ಪತ್ತಿಯಾಗುವ ಇತರ ಎಲ್ಲಾ ಸ್ಥಳಗಳಿಂದ ಹಸಿ, ಒಣ ಹಾಗೂ ಸ್ಯಾನಿಟರಿ ಪ್ಯಾಡ್‌ಗಳನ್ನು ಪ್ರತ್ಯೇಕವಾಗಿ ವಿಂಗಡಿಸಿಯೇ ವಾಹನದಲ್ಲಿ ಬರುವ ಪೌರ ಕಾರ್ಮಿಕರಿಗೆ ಒದಗಿಸಬೇಕು. ಈ ಬಗ್ಗೆ ಈಗಾಗಲೇ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಇಂದು ನಗರದ ಅಂಬೇಡ್ಕರ್ ವೃತ್ತ ಸಮೀಪದ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿದ್ದು, ತ್ಯಾಜ್ಯ ವಿಂಗಡನೆಯಲ್ಲಿ ಸೂಚನೆ ಪಾಲಿಸದವರಿಗೆ ತಲಾ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಒಟ್ಟು 20000 ರೂ. ದಂಡ ಸಂಗ್ರಹಿಸಲಾಗಿದೆ. ತ್ಯಾಜ್ಯ ವಿಂಗಡನೆಯ ಅಗತ್ಯತೆ ಬಗ್ಗೆಯೂ ಈ ಸಂದರ್ಭ ಪಾಲಿಕೆ ಆಯುಕ್ತ ರವಿಚಂದ್ರ ನಾಯ್ಕ್‌ರವರು ಜಾಗೃತಿಯನ್ನು ಮೂಡಿಸಿದರು.

‘ತ್ಯಾಜ್ಯ ವಿಂಗಡನೆಯಲ್ಲಿ ಮುಂದೆಯೂ ಈಗಾಗಲೇ ದಂಡ ವಿಧಿಸಿರುವ ಸಂಸ್ಥೆಗಳವರು ನಿರ್ಲಕ್ಷ್ಯ ವಹಿಸಿದರೆ ದಂಡದ ಮೊತ್ತವನ್ನು ಹೆಚ್ಚಿಸಲಾಗುವುದು. ಈ ದಿಢೀರ್ ಭೇಟಿ ಪಾಲಿಕೆಯ ಇತರ ವಾರ್ಡ್‌ಗಳಲ್ಲಿಯೂ ನಿರಂತರವಾಗಿ ಮುಂದುವರಿಯಲಿದೆ. ಸಾರ್ವಜನಿಕರು ಹಾಗೂ ಸಂಬಂಧಪಟ್ಟವರು ಈ ಬಗ್ಗೆ ಸಹಕರಿಸಬೇಕು. ತ್ಯಾಜ್ಯ ವಿಂಗಡನೆ ಮಾಡಿಯೇ ವಿಲೇವಾರಿಗೆ ನೀಡಬೇಕು’ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯ್ಕ್ ತಿಳಿಸಿದ್ದಾರೆ.

ನಿಷೇಧಿತ ಪ್ಲಾಸ್ಟಿಕ್ ಬಳಕೆಗೂ ದಂಡ

ಸುರತ್ಕಲ್ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಕುರಿತಂತೆಯೂ ವಲಯ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿ ದಂಡ ವಿಧಿಸಿದರು. ಮಂಗಳವಾರ ಈ ಸಂಬಂಧ ನಡೆಸಲಾದ ದಾಳಿಯಲ್ಲಿ ಒಟ್ಟು 3500 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಪಾಲಿಕೆ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News