ಛಾಯಾಚಿತ್ರಗಳ ಮೂಲಕ ಇತಿಹಾಸಕಟ್ಟುವ ಕೆಲಸ : ಡಾ.ತುಕರಾಮ ಪೂಜಾರಿ
ಮಂಗಳೂರು : ಛಾಯಚಿತ್ರಗಳ ಮೂಲಕ ಇತಿಹಾಸವನ್ನು ಕಟ್ಟಿಕೊಡುವ ಅಪೂರ್ವ ಕೆಲಸ ಮಾಡಲು ಸಾಧ್ಯವಿದೆ. ಇಂತಹ ಪರಿಶ್ರಮ ಸಾರ್ವಕಾಲಿಕ ದಾಖಲೆಯಾಗಿ ಉಳಿಯಲಿದೆ ಎಂದು ರಾಣಿ ಅಬ್ಬಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಮ ಪೂಜಾರಿ ಹೇಳಿದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯದ ಆಶ್ರಯದಲ್ಲಿ ಮಂಗಳವಾರ ನಡೆದ ‘ಛಾಯಾ ಲೋಕ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ನಿಟ್ಟಿನಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಹಾಗೂ ಜಿನೇಶ್ ಪ್ರಸಾದ್ ಅವರ ಸಾಧನೆ ಅನನ್ಯ ವಾದುದು. ವಿಶ್ವನಾಥರ ಕೋಟೆಗಳ ದಾಖಲೀಕರಣ ಕೃತಿ ಅಪೂರ್ಣ ದಾಖಲೆಯಾಗಿದೆ ಎಂದು ಡಾ.ತುಕರಾಮ ಪೂಜಾರಿ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಪ್ರಾಂಶುಪಾಲ ಪ್ರೊ. ಉದಯ ಕುಮಾರ್ ಇರ್ವತ್ತೂರು ಮಾತನಾಡಿ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಅವರ ಕರ್ನಾಟಕದ ಕೋಟೆಗಳು ಹಾಗೂ ಪಕ್ಷಿಗಳ ಸಮಗ್ರ ಛಾಯಾಚಿತ್ರ ಕೃತಿ ಒಬ್ಬ ಸೃಜನಶೀಲ ಹಾಗೂ ಸೂಕ್ಷ್ಮಪ್ರಜ್ಞೆಯ ಪ್ರತೀಕವಾಗಿದೆ. ಇದೊಂದು ಅತ್ಯುತ್ತಮ ದಾಖಲೀಕರಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಹಾಗೂ ಜಿನೇಶ್ ಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿ ಸಲಾಯಿತು. ಯುವ ವಕೀಲ ನವನೀತ್ ಬಿ.ಹಿಂಗ್ಹಾಣಿ ಪೊಟೋಗ್ರಾಪಿ ಮತ್ತು ಕಾಪಿರೈಟ್ ಕಾಯ್ದೆ ಬಗ್ಗೆ ಮಾತನಾಡಿದರು. ಉಪನ್ಯಾಸಕಿ ಹಾಗೂ ಪಕ್ಷಿ ವೀಕ್ಷಕಿ ವೈಭವಿ ಜಿ. ಕರ್ನಾಟಕದ ಪಕ್ಷಿಗಳ ಕೃತಿ ಬಗ್ಗೆ ಮಾತನಾಡಿದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಹಾಗೂ ರೋಶನಿ ನಿಲಯದ ಕುಲಸಚಿವೆ ಪ್ರೊ. ವಿನುತಾ ರೈ ಮಾತನಾಡಿದರು.
ಕೋಶಾಧಿಕಾರಿ ಗಿರಿಧರ್ ಶೆಟ್ಟಿ ಉಪಸ್ಥಿತರಿದ್ದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಕೆನ್ಯೂಟ್ ಪಿಂಟೋ ಸ್ವಾಗತಿಸಿದರು. ಸುಳ್ಯ ತಾಲೂಕು ಅಧ್ಯಕ್ಷ ಈಶ್ವರ್ ವಾರಾಣಾಸಿ ವಂದಿಸಿದರು.