ಅಂಚೆ ಇಲಾಖೆಯ ಸಿಬ್ಬಂದಿಗಳಿಗೆ ಪ್ರಶಸ್ತಿ ವಿತರಣೆ
ಮಂಗಳೂರು : ಭಾರತೀಯ ಅಂಚೆ ಇಲಾಖೆಯ ಮಂಗಳೂರು ಅಂಚೆ ವಿಭಾಗದಿಂದ ವಿಭಾಗೀಯ ಮಟ್ಟದಲ್ಲಿ ವಿಶೇಷ ಸಾಧನೆಗೈದ 70 ಅಂಚೆ ಸಿಬ್ಬಂದಿಗಳಿಗೆ ಗುರುವಾರ ಮಂಗಳೂರು ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅತ್ಯಧಿಕ ಅಂಚೆ ಉಳಿತಾಯ ಖಾತೆ, ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ, ಅಂಚೆ ಜೀವ ವಿಮೆ, ಐಪಿಪಿಬಿ ಖಾತೆ, ತ್ವರಿತ ಅಂಚೆ, ಆಧಾರ್ ನೋಂದಣೆ/ತಿದ್ದುಪಡಿ ಸೇವೆ, ಸಾವರಿನ್ ಗೋಲ್ಡ್ ಬಾಂಡ್ ಹಾಗೂ ಇನ್ನೂ ಅನೇಕ ಸೇವೆಗಳ ಮೂಲಕ ಗರಿಷ್ಠ ವ್ಯವಹಾರಗೈದ ಸಾಧಕರಿಗೆ ನಿವೃತ್ತ ಹಿರಿಯ ಅಂಚೆ ಅಧೀಕ್ಷಕ ಗೋಪಾಲ್ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭ ವಿವಿಧ ಅಂಚೆ ಉಳಿತಾಯ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡ ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು. ಮಂಗಳೂರು ಹಿರಿಯ ಅಂಚೆ ಅಧೀಕ್ಷಕ ಸುಧಾಕರ ಮಲ್ಯ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.
ಅಂಚೆ ಇಲಾಖೆಯ ಸಿಬ್ಬಂದಿ ಪ್ರತಿಭಾ ಶೇಟ್ ಪ್ರಾರ್ಥಿಸಿದರು. ದಿವಾಕರ ಪ್ರಶಸ್ತಿ ವಿಜೇತರ ಪಟ್ಟಿ ವಾಚಿಸಿದರು. ಮಂಗಳೂರು ಉಪ ಅಂಚೆ ಅಧೀಕ್ಷಕ ದಿನೇಶ ಪಿ. ಸ್ವಾಗತಿಸಿದರು. ಮಂಗಳೂರು ಪೂರ್ವ ಉಪ ವಿಭಾಗದ ಸಹಾಯಕ ಅಂಚೆ ನಿರೀಕ್ಷಕ ಸಿ.ಪಿ ಹರೀಶ್ ವಂದಿಸಿದರು. ವಿಲ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.