ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಕಚೇರಿ ಉದ್ಘಾಟನೆ
ಸುರತ್ಕಲ್: ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಕಚೇರಿಯನ್ನು ಕರ್ನಾಟಕ ಸರ್ಕಾರದ ಇಂಧನ ಇಲಾಖೆ ಸಚಿವರಾದ ಕೆ.ಜೆ. ಜಾರ್ಜ್ ಅವರು ರವಿವಾರ ಉದ್ಘಾಟಿಸಿದರು.
ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತರು ಮನಸು ಮಾಡಿ ದರೆ ಟಿ.ಎಂ.ಪೈ ಅವರನ್ನೇ ಸೋಲಿಸಿರುವ ನಿದರ್ಶನ ಇರುವಾಗ ನಳಿನ್ ಕುಮಾರ್ ಅವರನ್ನು ಸೋಲಿಸುವುದು ದೊಡ್ಡ ವಿಚಾರವೇ ಅಲ್ಲ. ದ.ಕ. ಜಿಲ್ಲೆ ಕಾಂಗ್ರೆಸ್ ಪಕ್ಷದ ಕೋಟೆಯಾಗಿತ್ತು. ಎಲ್ಲರೂ ಒಗ್ಗಟ್ಟು ಪ್ರದರ್ಶಿದರೆ ಮತ್ತೆ ನಮ್ಮ ಕೋಟೆಯನ್ನು ಹಿಂಪಡೆದುಕೊಳ್ಳಬಹುದು ಎಂದರು.
ಸುಳ್ಳು ಪರಂಪರೆಯಲ್ಲಿ ಹುಟ್ಟಿ, ಸುಳ್ಳನ್ನೇ ಬಂಡವಾಳವಾಗಿಸಿಕೊಂಡು ಅದರೊಂದಿಗೇ ಜೀವನ ಸಾಗಿಸುತ್ತಿರುವವರು ನವು ಗ್ಯಾರಂಟಿ ಘೋಷಿದ ವೇಳೆ ಅದು ಸುಳ್ಳು ಆಶ್ವಾಸನೆ ಎಂದು ಹೇಳಿದ್ದರು. ಈಗ ಅವರ ಪ್ರಧಾನಿಯವರೇ ಗ್ಯಾರಂಟಿ ಯೋಜನೆಗಳ ಪ್ರಕಚಾರದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿಯ ವಿರುದ್ಧ ಕಿಡಿಕಾರಿದರು.
ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಶಾಸಕ ಭರತ್ ಶೆಟ್ಟಿ ಅವರು ಅಭಿವೃದ್ಧಿ ಮಾಡುತ್ತಿಲ್ಲ ಎಂಬುವುದಕ್ಕೆ ಕಳೆದ 6 ವರ್ಷಗಳಿಂದ ಇಲ್ಲೇ ಪಕ್ಕದಲ್ಲಿರುವ ಮಾರುಕಟ್ಟೆ ಸಂಕೀರ್ಣವೇ ಸಾಕ್ಷಿ ಎಂದು ಸಚಿವರಿಗೆ ತೋರಿಸಿದ ಇನಾಯತ್ ಅಲಿ, ಜನತಾಕಾಲನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಆಶ್ರಯ ಯೋಜನೆಯ 900 ಮನೆಗಳನ್ನು ಇನ್ನು ಪೂರ್ಣಗೊಳಿಸಲಾಗಿಲ್ಲ ಎಂದು ಶಾಸಕ ಭರತ್ ಶೆಟ್ಟಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ ಎಂದು ದೂರಿದರು.
ಉತ್ತರದ ಶಾಸಕರು ಅಭಿವೃದ್ಧಿಯ ಬಗ್ಗೆ ಮಾತನಾಡುವ ಬದಲು ಜನ ಸಾಮಾನ್ಯರನ್ನು ಬೇರ್ಪಡಿಸುವ ಮಾತುಗಳನ್ನಾಡು ತ್ತಿರುತ್ತಾರೆ. ಇನ್ನಾದರೂ ಧ್ವೇಷದ ಮಾತುಗಳನ್ನು ಬಿಟ್ಟು ಪ್ರೀತಿಯ ಮಾತುಗಳೊಂದಿಗೆ ಸಮಾಜ ಸಮಾಜ ಕಟ್ಟುವ ಕೆಲಸ ಮಾಡಿ ಎಂದು ಇನಾಯತ್ ಅಲಿ ಹೇಳಿದರು.
ಇದೇ ಸಂದರ್ಭ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ರಮಾನಾಥ ರೈ ಮಾತನಾಡಿದರು. ಸಮಾರಂಭದಲ್ಲಿ ಐವಾನ್ ಡಿಸೋಜಾ, ಮಂಜುನಾಥ ಭಂಡಾರಿ, ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಶಶಿಧರ ಹೆಗಡೆ, ಜೆ.ಆರ್. ಲೋಬೊ, ಭಾಸ್ಕರ ಕೆ., ಸಾಹುಲ್ ಹಮೀದ್ ಬಜ್ಪೆ, ಸುಹಾನ್ ಆಳ್ವ, ಸದಾಶಿವ ಶೆಟ್ಟಿ, ಶಾಲೆಟ್ ಪಿಂಟೊ, ಗಫೂರ್, ಶುಬೋದತ್ತ ಆಳ್ವ, ಜಾಕಿಬ್ ಪಿಂಟೊ, ಸುರೇಂದ್ರ ಕಂಬಳಿ, ಅನಿಲ್ ಕುಮಾರ್, ಮೋಹನ್ ಕೋಟ್ಯಾನ್ , ಗುಲ್ಝಾರ್ ಬಾನು ಮೊದಲಾದವರು ಉಪಸ್ಥಿತರಿದ್ದರು. ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಸ್ವಾಗತಿಸಿ, ಮಾತನಾಡಿದರು.
ಸಮಾರಂಭದ ಬಳಿಕ ಇನಾಯತ್ ಅಲಿ ಅಭಿಮಾನಿ ಬಳಗದ ವತಿಯಿಂದ ನಡೆಸಲಾಗಿದ್ದ ಕಣ್ಣು ತಪಾಸಣಾ ಶಿಬಿರದ ಫಲಾನುಭವಿಗಳಿಗೆ ಉಚಿತ ಕನ್ನಡಕಗಳನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ವಿತರಿಸಿದರು.
ಗ್ಯಾರಂಟಿಗಳು ಅನುಷ್ಠಾನವಾದರೆ ತಲೆ ಬೋಳಿಸುವುದಾಗಿ ವಿಧಾನ ಸಭೆ ಚುನಾವಣೆಗೂ ಮುನ್ನ ಬಿಜೆಪಿಯವರು ಸವಾಲು ಹಾಕಿದ್ದರು. ಇದನ್ನು ಬಿಟ್ಟಿ ಗ್ಯಾರಂಟಿ ಎಂದೂ ವಿರೋಧಿಗಳು ಲೇವಡಿ ಮಾಡಿದ್ದರು. ಆದರೆ ಈಗ ಪ್ರಧಾನಿಯವರೇ ಗ್ಯಾರಂಟಿಗಳ ಪ್ರಚಾರದಲ್ಲಿ ತೊಡಗಿದ್ದಾರೆ. ಚುನಾವಣೆಗೂ ಮುನ್ನ ಸವಾಲು ಹಾಕಿದ್ದ ಬಿಜೆಪಿಗರಿಗೆ ತಲೆ ಬೋಳಿಸಲು ಕಾಂಗ್ರೆಸ್ ವತಿಯಿಂದ ಬ್ಲೇಡ್ ಗಳನ್ನು ಕಳುಹಿಸಲಾಗಿದೆ ಎಂದು ಮಾಜಿ ಸಚಿವ ಸೊರಕೆಯವರು ವಿರೋಧ ಪಕ್ಷದ ವಿರುದ್ಧ ಸಮಾರಂಭದಲ್ಲಿ ಹರಿಹಾಯ್ದರು.