ಅಬ್ಬಕ್ಕ ಉತ್ಸವದಲ್ಲಿ ಇಬ್ಬರು ಮಹಿಳೆಯರಿಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ: ಜಯರಾಮ ಶೆಟ್ಟಿ
ಉಳ್ಳಾಲ: ಉಳ್ಳಾಲದಲ್ಲಿ ಪೆ.24 ರಂದು ನಡೆಯಲಿರುವ ಅಬ್ಬಕ್ಕ ಉತ್ಸವದಲ್ಲಿ ಇಬ್ಬರು ಮಹಿಳೆಯರಿಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಡಿ.ಪ್ರಮೀಳ ಮಾಧವ್ ಹಾಗೂ ಕ್ರೀಡಾ ಕ್ಷೇತ್ರ ದಲ್ಲಿ ಪದ್ಮಶ್ರೀ ಡಾ.ಮಾಲತಿ ಹೊಳ್ಳ ಅವರಿಗೆ ನೀಡಲಾಗುವುದು.
2023-24ನೇ ಸಾಲಿನಲ್ಲಿ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಆಯ್ಕೆ ಸಮಿತಿ ಯಲ್ಲಿ ಅಧ್ಯಕ್ಷ ರಾಗಿ ಡಾ.ಕೆ.ಚೆನ್ನಪ್ಪಗೌಡ, ಸದಸ್ಯರಾದ ಪ್ರೊ ಎಂ.ವಿ.ನಾವಡ, ಡಾ.ಗಣೇಶ್ ಅಮೀನ್ ಸಂಕಮಾರ್, ಡಾ.ನಾ.ದಾಮೋದರ ಶೆಟ್ಟಿ, ಬಿ.ಎಂ.ರೋಹಿಣಿ ಉಪಸ್ಥಿತಿ ಯಲ್ಲಿ ಈ ಆಯ್ಕೆ ನಡೆದಿದೆ ಎಂದು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಸ್ವಾಗತಾ ಅಧ್ಯಕ್ಷ, ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದರು.
ಅವರು ಕುತ್ತಾರ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಹಿತ್ಯ ಕ್ಷೇತ್ರ ಪ್ರಶಸ್ತಿ ಗೆ ಆಯ್ಕೆ ಆಗಿರುವ ಡಾ.ಪ್ರಮೀಳ ಮಾಧವ್ ಮೂಲತಃ ಕಾಸರಗೋಡು ನಿವಾಸಿ. ಹಿರಿಯ ಲೇಖಕಿ ಆಗಿರುವ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಆರು ವರ್ಷ ಹಾಗೂ ಬೆಂಗಳೂರಿನ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ 30 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಿಕೆಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು 'ಕುಮಾರ ಸಂಭವ ಹಾಗೂ ಗಿರಿಜಾ ಕಲ್ಯಾಣ - ಒಂದು ತೌಲನಿಕ ಅಧ್ಯಯನ ' ಎಂಬ ಸಂಶೋಧನೆಗೆ ಬೆಂಗಳೂರು ವಿವಿ ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ ಎಂದು ಹೇಳಿದರು.
ಕ್ರೀಡಾ ಕ್ಷೇತ್ರ ದಲ್ಲಿ ಆಯ್ಕೆ ಆಗಿರುವ ಪದ್ಮಶ್ರೀ ಡಾ. ಮಾಲತಿ ಹೊಳ್ಳ ಅವರು ಉಡುಪಿ ಜಿಲ್ಲೆ ಕೋಟಾ ನಿವಾಸಿ ಆಗಿದ್ದು, ಸಣ್ಣ ವಯಸ್ಸಿನಲ್ಲೇ ಪೊಲಿಯೋ ಕಾಯಿಲೆ ಗೆ ತುತ್ತಾಗಿದ್ದರು.ಅನಾರೋಗ್ಯದ ನಡುವೆ ಅವರು ಚಲ ಬಿಡದೆ ಪದವಿ ತರಗತಿಗಳಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದರು. ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಅವರು ಚಾವೆಲಿನ್, ಶಾಟ್ ಪುಟ್, ಡಿಸ್ಕಸ್ ತ್ರೊ, ವೀಲ್ ಚೇರ್ ರೇಸಿಂಗ್ ಗಳಲ್ಲಿ ಕಠಿಣ ಅಭ್ಯಾಸ ಮಾಡಿ ಅಂತಾರಾಷ್ಟ್ರೀಯ ಮಟ್ಟದ ವಿಕಲಚೇತನರಿಗಾಗಿ ಇರುವ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದರು. ಇವರ ಕ್ರೀಡಾ ಸಾಧನೆ ಗಳಿಂದಾಗಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಕ್ಲಾರ್ಕ್, ಮೆನೇಜರ್ ಆಗಿ 35 ವರ್ಷ ದುಡಿದಿದ್ದರು ಎಂದು ಹೇಳಿದರು.
ಸುದ್ದಿ ಗೋಷ್ಠಿ ಯಲ್ಲಿ ದಿನಕರ್ ಉಳ್ಳಾಲ, ಸದಾನಂದ ಬಂಗೇರ, ಆನಂದ ಅಸೈಗೋಳಿ, ದೇವಕಿ ಆರ್ ಉಳ್ಳಾಲ, ಕೆಎಂಕೆ ಮಂಜನಾಡಿ, ಧನಲಕ್ಷ್ಮಿ ಗಟ್ಟಿ ಉಪಸ್ಥಿತರಿದ್ದರು.