ಬಂಟ್ವಾಳ | ಉದ್ಯಮಿಗಳಿಗೆ ಬೆದರಿಕೆ ಆರೋಪ ; ಮೂವರ ವಿರುದ್ಧ ಪ್ರಕರಣ ದಾಖಲು
Update: 2024-07-27 22:22 IST
ಬಂಟ್ವಾಳ : ಮೂವರು ವ್ಯಕ್ತಿಗಳು ಹಫ್ತಾಕ್ಕಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಉದ್ಯಮಿಗಳು ನ್ಯಾಯಾಲಯದ ಮೂಲಕ ಖಾಸಗಿ ದೂರು ದಾಖಲಿಸಿರುವುದು ವರದಿಯಾಗಿದೆ.
ಖಾಲಿದ್ ನಂದಾವರ, ಇಕ್ಬಾಲ್ ಮತ್ತು ಮತ್ತೋರ್ವ ಹಫ್ತಾಕ್ಕಾಗಿ ಬೆದರಿಕೆಯೊಡ್ಡಿರುವ ಆರೋಪಿಗಳು ಎಂದು ತಿಳಿದು ಬಂದಿದೆ.
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಲ್ಲಿ ಉದ್ಯಮಿಗಳು ಗಣಿ ಇಲಾಖೆಯ ಪರವಾನಿಗೆ ಪಡೆದು ಕಾನೂನು ಬದ್ಧವಾಗಿ ಗಣಿಗಾರಿಕೆ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿದ ಆರೋಪಿಗಳು ಲಾರಿ ಚಾಲಕ, ಹಿಟಾಚಿ ಚಾಲಕ, ಮಾಲಕರಿಗೆ ಪ್ರತೀ ಟ್ರಿಪ್ ಲಾರಿಗೆ 500 ರೂ. ಇಲ್ಲವೇ ಒಂದು ಸಾವಿರ ರೂ. ಕೊಡಬೇಕು, ಇಲ್ಲದಿದ್ದಲ್ಲಿ ಗಣಿ ಇಲಾಖೆ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಇಡೀ ಉದ್ಯಮವನ್ನೇ ನಿಲ್ಲಿಸುವುದಾಗಿ ಖಾಲಿದ್ ನಂದಾವರ ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮೊಬೈಲ್ನಲ್ಲಿ ವಾಯ್ಸ್ ಮೆಸೇಜ್ ಮೂಲಕವೂ ಆರೋಪಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ಗಣಿ ಉದ್ಯಮಿ ದೂರಿನಲ್ಲಿ ತಿಳಿಸಿದ್ದಾರೆ.