×
Ad

ಆಳ್ವಾಸ್ ನಲ್ಲಿ ಕನ್ನಡ ನುಡಿ ಹಬ್ಬ| ಅನ್ಯಭಾಷಿಕರಿಗೆ ಕನ್ನಡ ಕಲಿಸಿಲು ಧನಂಜಯ ಕುಂಬ್ಳೆ ಕರೆ

Update: 2024-11-28 21:45 IST

ಮೂಡುಬಿದಿರೆ: ಉದ್ಯೋಗ ನಿಮಿತ್ತ ವಲಸೆ ಇಂದು ಸಾರ್ವತ್ರಿಕವಾಗಿದ್ದು ಬ್ಯಾಂಕ್ ಗಳು, ಖಾಸಗಿ ಕಂಪೆನಿಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಅನ್ಯಭಾಷಿಕರು ಹೆಚ್ಚಿದ್ದಾರೆ. ಅವರಿಗೆ ಕನ್ನಡವನ್ನು ಕಲಿಸಿಕೊಟ್ಟು ಕನ್ನಡ ಮಣ್ಣಿನ ಬಗೆಗೆ ಪ್ರೀತಿ ಹುಟ್ಟುವಂತೆ ಮಾಡಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಹೇಳಿದ್ದಾರೆ.

ಅವರು ಮಿಜಾರಿನ ಆಳ್ವಾಸ್ ಹೋಮಿಯೋಪಥಿಕ್ ಕಾಲೇಜಿನ ಕನ್ನಡ ವೇದಿಕೆ ವತಿಯಿಂದ ಬುಧವಾರ ನಡೆದ ಕನ್ನಡ ನುಡಿಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ, ನೆಲಕ್ಕೆ ಪ್ರಾಚೀನ ಪರಂಪರೆಯಿದೆ. ರಾಮಾಯಣ ಮಹಾಭಾರತ, ಬೌದ್ಧ, ಜೈನ ಕೃತಿಗಳಲ್ಲಿ ಕನ್ನಡ ನಾಡಿನ ಉಲ್ಲೇಖವಿದೆ. ತನ್ನ ಸಂಸ್ಕೃತಿಯನ್ನು ಪ್ರೀತಿಸುತ್ತಾ ಎಲ್ಲರ ವಿಚಾರಗಳನ್ನು ಗೌರವಿಸುವ ಸೌಹಾರ್ದದ ನಾಡು ಕರ್ನಾಟಕ ಎಂದರು.

ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಮಾತನಾಡಿ, ಮಾತೃಭಾಷೆಯಲ್ಲಿ ಶಿಕ್ಷಣ ಅಗತ್ಯ. ಇಂಗ್ಲಿಷ್ ಮಾಧ್ಯಮದ ಓದು ನಮಗೆ ನಮ್ಮ ನೆಲದ ಸಂಸ್ಕೃತಿಯ ಜೊತೆಗಿನ ಸಂಬಂಧವನ್ನು ದೂರಮಾಡುತ್ತದೆ. ಜಪಾನಿನಲ್ಲಿ ಅವರ ಮಾತೃಭಾಷೆಯಲ್ಲಿಯೇ ಶಿಕ್ಷಣ ವ್ಯವಹಾರಗಳು ನಡೆಯುತ್ತವೆ. ಕನ್ನಡದಲ್ಲೂ ಅದು ಸಾಧ್ಯವಾಗಬೇಕು ಎಂದರು.

ಸಮಾರಂಭದಲ್ಲಿ ಆಳ್ವಾಸ್ ಹೋಮಿಯೋಪಥಿಕ್ ಕಾಲೇಜಿನ ಪ್ರಾಂಶುಪಾಲ ಡಾ. ರೋಶನ್ ಪಿಂಟೋ, ಡೀನ್ ಡಾ. ಪ್ರವೀಣ್ ರಾಜ್, ಸಹ ಆಡಳಿತಾಧಿಕಾರಿ ಡಾ. ಪ್ರಜ್ಞಾ ಆಳ್ವ ಎಂ., ಉಪನ್ಯಾಸಕರಾದ ಡಾ. ಶಿವಕುಮಾರ್ ಎಂ.ಕೆ., ಡಾ. ದೀಪಕ್ ಆರ್., ಡಾ. ಮಹಾಲಸಾ, ಕನ್ನಡ ವೇದಿಕೆ ಅಧ್ಯಕ್ಷ ಸಿದ್ಧಾರ್ಥ್, ಉಪಾಧ್ಯಕ್ಷೆ ನಿತ್ಯಾ ಬಿ. ಮತ್ತಿತರರು ಉಪಸ್ಥಿತರಿ ದ್ದರು. ವಿದ್ಯಾರ್ಥಿನಿ ಇಂಪು ಕಾರ್ಯಕ್ರಮ ನಿರೂಪಿಸಿದರು. ಡೊಳ್ಳುಕುಣಿತ, ಹುಲಿವೇಷ, ಕಂಸಾಳೆ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News