×
Ad

ಸಂಸದ ಬ್ರಿಜೇಶ್ ಚೌಟರಿಂದ ಕೇಂದ್ರ ರಕ್ಷಣಾ ಸಚಿವರ ಭೇಟಿ

Update: 2025-01-04 21:48 IST

ಮಂಗಳೂರು: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಸಂಸದ ಬ್ರಿಜೇಶ್ ಚೌಟ ಶನಿವಾರ ಹೊಸದಿಲ್ಲಿಯಲ್ಲಿ ಭೇಟಿಯಾಗಿ ಮಂಗಳೂರಿನಲ್ಲಿ ಸೈನಿಕ ಶಾಲೆ ಹಾಗೂ ಮಿಲಿಟರಿ ನೆಲೆ ಸ್ಥಾಪಿಸುವುದು ಸೇರಿದಂತೆ ಜಿಲ್ಲೆಗೆ ಸಂಬಂಧಿಸಿದ ಪ್ರಮುಖ ರಕ್ಷಣಾ ಮೂಲಸೌಕರ್ಯ ಒದಗಿಸುವ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಿದ್ದಾರೆ.

ಮಂಗಳೂರಿನಲ್ಲಿ ಸೈನಿಕ ಶಾಲೆಯನ್ನು ಆರಂಭಿಸುವುದರ ಜತೆಗೆ ಈ ಭಾಗದಲ್ಲಿ ಮಿಲಿಟರಿ ಬೇಸ್‌ನ್ನು ಸ್ಥಾಪಿಸುವುದರಿಂದ ಯುವ ಜನತೆಯನ್ನು ದೇಶ ಸೇವೆಯತ್ತ ಪ್ರೇರೇಪಿಸುವುದಕ್ಕೆ ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ ವಿಶ್ವದರ್ಜೆ ಶಿಕ್ಷಣ ಸಂಸ್ಥೆಗಳು ಇರುವ ಹಿನ್ನಲೆಯಲ್ಲಿ ಸೈನಿಕ ಶಾಲೆ ಸ್ಥಾಪಿಸುವುದು ಶೈಕ್ಷಣಿಕವಾಗಿಯೂ ಹೆಚ್ಚಿನ ಅನುಕೂಲ ಒದಗಿಸಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ದೇಶದ ರಕ್ಷಣಾ ಕ್ಷೇತ್ರಕ್ಕೆ ಮಂತ್ರಿಯಾಗಿ ಗಮನಾರ್ಹ ಕೊಡುಗೆ ನೀಡಿರುವ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಕ್ಯಾಪ್ಟನ್ ಪ್ರಾಂಜಲ್ ಹಾಗೂ ಕಮಾಂಡರ್ ಜಾರ್ಜ್ ಮಾರ್ಟಿಸ್ ಅವರ ಬಲಿದಾನವನ್ನು ಸದಾ ಸ್ಮರಿಸುವಂತಹ ಕೆಲಸ ಕಾರ್ಯಗಳು ಮಂಗಳೂರಿನಲ್ಲಿ ರಕ್ಷಣಾ ಇಲಾಖೆಯಿಂದ ಆಗಬೇಕು ಎಂದು ಬ್ರಿಜೇಶ್ ಚೌಟ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News