ಬಹುರೂಪಿ ಚಿಂತನೆಗಳನ್ನು ಕಟ್ಟಿಕೊಡುವ ಕೃತಿ ಅವಿಭಜಿತ ದಕ್ಷಿಣ ಕನ್ನಡದ ಮಹಿಳಾ ಚಿಂತನೆ: ಪ್ರೊ. ಸಬಿಹಾ ಭೂಮಿಗೌಡ
ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡದ ಬಹುರೂಪಿ ಚಿಂತನೆಗಳನ್ನು ಒಂದೆಡೆ ಕಟ್ಟಿಕೊಡುವ ಕೃತಿಯೇ ’ಅವಿಭಜಿತ ದಕ್ಷಿಣ ಕನ್ನಡದ ಮಹಿಳಾ ಚಿಂತನೆ’ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಹೇಳಿದರು.
ಬಹು ಓದು ಬಳಗ ಹಾಗೂ ಆಕೃತಿ ಆಶಯ ಪಬ್ಲಿಕೇಶನ್ನ ಸಹಯೋಗದೊಂದಿಗೆ ನಗರದ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ರವಿವಾರ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
1995ರಿಂದ 2023ರವರೆಗಿನ ಮೂರು ದಶಕಗಳ ಕಾಲದ ಈ ಭಾಗದ ಲೇಖಕ-ಲೇಖಕಿಯರು ಸಾಹಿತಿ, ಸಾಹಿತ್ಯ, ಸಂಸ್ಕೃತಿ ಮತ್ತು ಸ್ತ್ರೀ ವಾದಿ ತಾತ್ವಿಕತೆಯ ಬಗ್ಗೆ ಏನನ್ನು ಯೋಚನೆ ಮಾಡಿದ್ದಾರೆ? ಕಾಲಕ್ಕೆ ಅನುಗುಣವಾಗಿ ಅದನ್ನು ಹೇಗೆ ಅಭಿವ್ಯಕ್ತಿಗೊಳಿಸಿದ್ದಾರೆ ಎಂಬುದು ಈ ಪುಸ್ತಕದ ಓದಿನಿಂದ ತಿಳಿದುಕೊಳ್ಳಬಹುದು ಎಂದು ಪ್ರೊ. ಸಬೀಹಾ ಭೂಮಿಗೌಡ ಹೇಳಿದರು.
ಕೃತಿ ವಿಮರ್ಶೆ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ರಾಜಲಕ್ಷ್ಮಿ ಎನ್.ಕೆ. ಮಾತನಾಡಿ ಈ ಕೃತಿಯನ್ನು ಮಾತು-ಮಂಥನ-ಚಿಂತನ ಈ ಮೂರು ಕ್ರಮದಲ್ಲಿ ವಿಮರ್ಶೆಗೆ ಒಳಪಡಿಸಬಹುದು. ಓದಿಸಿಕೊಂಡು ಹೋಗುವ ಲೇಖನಗಳು ಮಾತು, ಮನನ ಮಾಡಿಕೊಳ್ಳುವ ಲೇಖನಗಳು ಮಂಥನ ಹಾಗೂ ಚಿಂತನೆಗೆ ಹಚ್ಚುವ ಲೇಖನಗಳು ಚಿಂತನ ಎಂದು ವಿವರಿಸಿಕೊಳ್ಳಬಹುದು ಎಂದರು.
ಮುಖ್ಯ ಅತಿಥಿಯಾಗಿದ್ದ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ಪಿ. ಬಹು ಓದು ಬಳಗ ಹಾಗೂ ಆಕೃತಿ ಆಶಯ ಪ್ರಕಾಶನದ ಕಾರ್ಯವನ್ನು ಶ್ಲಾಘಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಸೋಮಣ್ಣ ಹೊಂಗಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಸಂಪಾದಕ ಡಾ. ಸತೀಶ್ ಚಿತ್ರಾಪು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್ ಸ್ವಾಗತಿಸಿದರು. ಇನ್ನೋರ್ವ ಸಂಪಾದಕ ಸೋಮಶೇಖರ್ ಹಾಸನಡ್ಕ ವಂದಿಸಿದರು. ಡಾ. ಆಶಾಲತಾ ಚೇವಾರು ಕಾರ್ಯಕ್ರಮ ನಿರೂಪಿಸಿದರು.