ಸೈಬರ್ ವಂಚನೆಗಳಿಂದ ರಕ್ಷಿಸಿಕೊಳ್ಳಲು ಜಿಪಂ ಸಿಇಒ ಸೂಚನೆ
ಮಂಗಳೂರು: ಆನ್ಲೈನ್ ಜಗತ್ತನ್ನು ಸುರಕ್ಷಿತ ಹಾಗೂ ಉತ್ತಮ ಸ್ಥಳವನ್ನಾಗಿ ಮಾಡುವಲ್ಲಿ ಪ್ರತಿಯೊಬ್ಬ ಬಳಕೆದಾರನ ಪಾತ್ರವಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರವರಿ ಎರಡನೇ ಮಂಗಳವಾರದಂದು ವಿಶ್ವ ಸುರಕ್ಷಿತ ಅಂತರ್ಜಾಲ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ವಿಶ್ವ ಸುರಕ್ಷಿತ ಅಂತರ್ಜಾಲ ದಿನದ ಜೊತೆ ಉತ್ತಮ ಇಂಟರ್ನೆಟ್ ಕಡೆಗೆ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ದ.ಕ.ಜಿಪಂ ಸಿಇಒ ಡಾ. ಆನಂದ ಕೆ. ಹೇಳಿದರು.
ಗ್ರಾಪಂ ಮತ್ತು ಇತರ ಇಲಾಖಾ ಅಧಿಕಾರಿಗಳಿಗೆ ದ.ಕ.ಜಿಪಂ ಸಭಾಂಗಣದಲ್ಲಿ ನಡೆದ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಎನ್ಐಸಿ ಅಧಿಕಾರಿ ಅಶ್ವಿನ್ ಕುಮಾರ್ ರೈ, ಮಂಗಳೂರು ಸೈಬರ್ ಪೋಲಿಸ್ ವಿಭಾಗದ ಎಸಿಪಿ ರವೀಶ್ ನಾಯ್ಕ್ ಮತ್ತು ಎಸ್ಸೈ ಮಾರುತಿ ಪಿ. ವೈಯಕ್ತಿಕ ಮಾಹಿತಿಯ ಸುರಕ್ಷತೆ ಮತ್ತು ಸಾಮಾನ್ಯ ಸೈಬರ್ ಬೆದರಿಕೆಗಳಾದ ಡಿಜಿಟಲ್ ಬಂಧನ, ವಂಚನೆ ಕರೆಗಳು, ಲಾಟರಿ, ಹೂಡಿಕೆ ಹಗರಣ ಇತ್ಯಾದಿ ವಂಚನೆಗಳ ಕಾರ್ಯವಿಧಾನ ಹಾಗೂ ಅವುಗಳಿಂದ ರಕ್ಷಿಸಲು ಮುಂಜಾಗ್ರತಾ ಕ್ರಮದ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ದ.ಕ.ಜಿಪಂ ಉಪ ಕಾರ್ಯದರ್ಶಿ, ಯೋಜನಾ ನಿರ್ದೇಶಕರು, ಮುಖ್ಯಯೋಜನಾಅಧಿಕಾರಿ ಉಪಸ್ಥಿತರಿದ್ದರು.