×
Ad

ಉಪ್ಪಿನಂಗಡಿ| ಶಿವರಾತ್ರಿ ಹೆಸರಲ್ಲಿ ಕಿಡಿಗೇಡಿಗಳಿಂದ ವಿಕೃತಿ: ರಸ್ತೆಗೆ ಅಡ್ಡವಾಗಿಟ್ಟ ಮೋರಿ ಢಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯ

Update: 2025-02-27 22:05 IST

ಉಪ್ಪಿನಂಗಡಿ: ಶಿವರಾತ್ರಿ ದಿನವಾದ ಬುಧವಾರ ರಾತ್ರಿ ರಸ್ತೆ ಬದಿಯಲ್ಲಿ ಇದ್ದ ಬೃಹತ್ ಗಾತ್ರದ ಸಿಮೆಂಟ್ ಮೋರಿಯೊಂದನ್ನು ಕಿಡಿಗೇಡಿಗಳು ರಸ್ತೆಗೆ ಅಡ್ಡವಾಗಿ ಇರಿಸಿದ್ದು, ಮುಂಜಾನೆ ಬೈಕ್‍ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಇದರ ಅರಿವಾಗದೆ ಬೈಕ್ ನೇರವಾಗಿ ಮೋರಿಗೆ ಢಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹಿರೇಬಂಡಾಡಿಯಲ್ಲಿ ನಡೆದಿದೆ.

ರಸ್ತೆಯಲ್ಲಿ ಅಡ್ಡವಾಗಿ ಇರಿಸಿದ್ದ ಮೋರಿಗೆ ಢಿಕ್ಕಿಯಾಗಿ ಗಾಯಗೊಂಡಿರುವ ವ್ಯಕ್ತಿ ಹಿರೇಬಂಡಾಡಿ ಗ್ರಾಮದ ಸರೋಳಿ ನಿವಾಸಿ, ಪತ್ರಿಕಾ ವಿತರಕ ರೋಹಿತಾಕ್ಷ ಎಂದು ಗುರುತಿಸಲಾಗಿದೆ.

ಮೋರಿಗೆ ಢಿಕ್ಕಿಯಾಗಿ ರಸ್ತೆಗೆ ಎಸೆಯಲ್ಪಟ್ಟ ರೋಹಿತಾಕ್ಷ ಅವರ ಕೈ, ಕಾಲು, ಬುಜಕ್ಕೆ ಗಂಭೀರ ಸ್ವರೂಪದ ಗಾಯವಾಗಿದೆ. ಇವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ರಿಕೆ ವಿತರಕರಾಗಿರುವ ರೋಹಿತಾಕ್ಷ ಎಂದಿನಂತೆ ಬೆಳಗ್ಗೆ 5 ಗಂಟೆಯ ಹೊತ್ತಿಗೆ ತನ್ನ ಮನೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದಾಗ ಹಿರೇಬಂಡಾಡಿ ಗ್ರಾಮದ ಪಟಾರ್ತಿ ಎಂಬಲ್ಲಿ ಕಿಡಿಗೇಡಿಗಳು ರಸ್ತೆ ಬದಿ ಇದ್ದ ಬೃಹತ್ ಸಿಮೆಂಟ್ ಮೋರಿಯನ್ನು ರಸ್ತೆಗೆ ಅಡ್ಡವಾಗಿ ಇರಿಸಿದ್ದು, ಇದು ಅವರ ಅರಿವಿಗೆ ಬಾರದೆ ಬೈಕ್ ನೇರವಾಗಿ ಮೋರಿಗೆ ಢಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ್ಪಿನಂಗಡಿ-ಹಿರೇಬಂಡಾಡಿ-ಕೊಯಿಲ ಸಂಪರ್ಕ ರಸ್ತೆಯಲ್ಲಿ ಹಿರೇಬಂಡಾಡಿ ಗ್ರಾಮದ ದಾಸರಮೂಲೆ ಬಳಿಯಿಂದ ಶಾಖೆಪುರದ ತನಕ ಅಲ್ಲಲ್ಲಿ ರಸ್ತೆಯಲ್ಲಿ ಬೃಹತ್ ಕಲ್ಲು, ಸೀಯಾಳದ ತೊಪ್ಪೆ, ಮರದ ಗೆಲ್ಲುಗಳನ್ನು ಇರಿಸಿ ಕುಕೃತ್ಯ ಎಸೆದಿದ್ದು, ಬೆಳಗ್ಗೆ ಬೇಗನೇ ರಸ್ತೆಯಲ್ಲಿ ಓಡಾಟ ನಡೆಸಿದ ಬಹಳಷ್ಟು ವಾಹನ ಚಾಲಕರು ತೊಂದರೆ ಅನುಭವಿಸುವಂತಾಗಿದೆ ಎಂಬ ದೂರು ವ್ಯಕ್ತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News