ಪರಿಶಿಷ್ಟ ಜಾತಿ ಹೆಸರಿನಲ್ಲಿ ಪಡೆದಿರುವ ಸುಳ್ಳು ಜಾತಿ ಪ್ರಮಾಣ ಪತ್ರದ ಬಗ್ಗೆ ತನಿಖೆ ನಡೆಸಲು ಒತ್ತಾಯ
ಮಂಗಳೂರು: ಉತ್ತರ ಕನ್ನಡ ಜಿಲ್ಲೆಯ ಪ್ರವರ್ಗ 1ರಲ್ಲಿರುವ ಮೀನುಗಾರ ಮೊಗೇರರಪರಿಶಿಷ್ಟ ಜಾತಿಯ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದು ಪರಿಶಿಷ್ಟರ ಸಾಂವಿಧಾನಿಕ ಮೀಸಲಾತಿ ಹಕ್ಕನ್ನು ಕಸಿದುಕೊಂಡಿದ್ದು ಮಾತ್ರವಲ್ಲದೆ ರಾಜಕೀಯ ಒತ್ತಡವನ್ನು ಹೇರಿ ತಾವು ಪಡೆದ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಮತ್ತೆ ಸಕ್ರಮಗೊಳಿಸುವ ವಿರೋಧಿಸಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಹಾಗೂ ಪರಿಶಿಷ್ಟರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮೊಗೆರ ಸಂಘ ಮತ್ತು ವಿವಿಧ ದಲಿತ ಸಂಘಟನೆಗಳಿಂದ ಇಂದು ರಾಷ್ಟ್ರೀಯ ಅನುಸೂಚಿತ ಜಾತಿ ಆಯೋಗದ ಅಧ್ಯಕ್ಷರಾದ ಕಿಶೋರ್ ಬಾಯಿ ಮಖ್ವಾನ ಅವರಿಗೆ ವಿಸ್ತೃತವಾದ ಮನವಿಯನ್ನು ಸಲ್ಲಿಸಲಾಯಿತು.
ರವಿವಾರ ಮಂಗಳೂರಿನ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಸಭೆಯಲ್ಲಿ ಈ ಕೆಳಗಿನಂತೆ ಮನವಿ ಸಲ್ಲಿಸಲಾಗಿದೆ
* ಪ್ರಮುಖವಾಗಿ ಕರಾವಳಿಯ ಜಿಲ್ಲೆಯಲ್ಲಿರುವ ಸುಳ್ಳು ಜಾತಿ ಪ್ರಮಾಣಪತ್ರ, ಅದರಲ್ಲು ವಿಶೇಷವಾಗಿ ಪರಿಶಿಷ್ಟರಲ್ಲದ ಹಿಂದುಳಿದ ವರ್ಗದ ಪಟ್ಟಿಯ ಮೀನುಗಾರ ಮೊಗೇರ ಜಾತಿಯವರು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದುಕೊಂಡು ಸಂವಿಧಾನಿಕ ಮೀಸಲಾತಿ ಸೌಲಭ್ಯ ಹಗಲು ದರೋಡೆ ಮಾಡಿರುವ ಕುರಿತು ಸೂಕ್ಷ್ಮವಾಗಿ ತಿಳಿಸಿ, ಡಾ॥ ಬಿ. ಆರ್ ಅಂಬೇಡ್ಕರರು ಸಂವಿಧಾನದ ಮೂಲಕ ಪರಿಶಿಷ್ಟರಿಗೆ ನೀಡಿದ ಸೌಲಭ್ಯ ನೈಜ ಪರಿಶಿಷ್ಟರಿಗೇ ಸಿಗುವಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು.
ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮಂತ್ರಾಲಯದಿಂದ ನಡೆಸಲಾದ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣ ಇತ್ಯರ್ಥಕ್ಕೆ ವಿಳಂಬದ ಸಮೀಕ್ಷೆಯಲ್ಲಿ ಕಾರಣ ತಿಳಿದು, ಸದರಿ ಸಮಿತಿಯ ಅಧ್ಯಕ್ಷರಾದ ಕರಿಯಾ ಮುಂಡಾ ವರದಿಯನ್ನು ಮಾನ್ಯ ಕೇಂದ್ರ ಸಚಿವರ ಶಿಫಾರಸ್ಸಿನ ಮೇರೆಗೆ ಪ್ರತಿ ರಾಜ್ಯದಲ್ಲಿಯೂ ಅನುಭವಿ ಹಾಗೂ ಹಿರಿಯ ವಕೀಲರರೊಬ್ಬರಿಗೆ ಎಡಿಷನಲ್ ಎಡ್ವೊಕೇಟ್ ಜನರಲ್ ಎಂದು ನಾಮಕರಣ ಮಾಡುವ ಮೂಲಕ ಪರಿಶಿಷ್ಟರ ಮೇಲಿನ ದೌರ್ಜನ್ಯ ಸಂಬಂಧಿಸಿದ ಪ್ರಕರಣಗಳ ಸೂಕ್ತ ಹಾಗೂ ತ್ವರಿತ ವಿಲೇವಾರಿಗೆ ಕ್ರಮ ಜರುಗಿಸುವ ಪ್ರಕ್ರಿಯೆ ಜಾರಿಗೊಳಿಸುವಂತೆ ಒತ್ತಾಯಿಸಲಾಯಿತು. ಸಂವಿಧಾನಿಕವಾಗಿ ಯಾರಾದರೂ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಕೊಂಡಲ್ಲಿ, ಅದರ ಪುನರ್ ಪರಿಶೀಲನೆಗೆ ಕಾನೂನಿನಲ್ಲಿ ಅವಕಾಶವಿದ್ದು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಯವರ ಅಧ್ಯಕ್ಷತೆಯಲ್ಲಿ ಜಾತಿ ಪ್ರಮಾಣಪತ್ರ ಪರಿಶೀಲಿಸಿ ಅದರ ಸಿಂಧುತ್ವ ಪ್ರಮಾಣಪತ್ರ ನಂತರವೇ ಪರಿಶಿಷ್ಟ ಅಭ್ಯರ್ಥಿಗೆ ಉಚ್ಛ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಖಚಿತ ಪಡೆಯಲಾಗುತ್ತಿದೆ .
*ಆದರೆ ಈ ಪ್ರಕ್ರಿಯೆಯು ಮೀಸಲು ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅನ್ವಯಿಸು ವುದಿಲ್ಲದ ಕಾರಣ ಅನೇಕ ಪರಿಶಿಷ್ಟರಲ್ಲದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುವವರ ಪಾಲಾಗು ತ್ತದೆ. ಇದನ್ನು ತಪ್ಪಿಸಿ ನೈಜ ಪರಿಶಿಷ್ಟರಿಗೆ ಅವರ ಹಕ್ಕು ದೊರಕಿಸಿಕೊಡಲು ಮೀಸಲಾತಿ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರದ ಪುನರ್ ಪರಿಶೀಲನೆ ಮಾಡಿಸುವಂತೆ ಒತ್ತಿ ಹೇಳಲಾಯಿತು. ಕರ್ನಾಟಕ ರಾಜ್ಯ ಸರ್ಕಾರದ ಬಜೆಟ್ ಅಧಿವೇಶನದಲ್ಲಿ ಮೀನುಗಾರಿಕೆ ಮಾಡುವ ಪರಿಶಿಷ್ಟರಿಗೆ ವಾಹನ ಖರೀದಿ ಸಾಲ, ಮೀನುಗಾರಿಕೆಯ ಬೋಟ್ ರಿಪೇರಿಗೆ ಸಬ್ಸಿಡಿ ಹಣ/ ಸಾಲ ನೀಡುವ ಯೋಜನೆ ಹಿಂದಿನ ಷಡ್ಯಂತ್ರ ತೀರ ಆಘಾತಕರವಾದದ್ದು. ಈಗಾಗಲೆ ಮೊಗೇರ ಜಾತಿಯ ಹೆಸರಿನಲ್ಲಿ ಮೀನುಗಾರ ಮೊಗೇರರು ಮೋಸದಿಂದ ಪಡೆದುಕೊಂಡ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಅಕ್ರಮವನ್ನು ಸಕ್ರಮೊಳಿಸುವ ಹುನ್ನಾರ ಇದಾಗಿದೆ. ಈಗಾಗಲೆ ರಾಜ್ಯದಾದ್ಯಂತ ನೈಜ ಪರಿಶಿಷ್ಟ ಜಾತಿಯವರಿಗೆ ಸಂವಿಧಾನಿಕ ಮೀಸಲಾತಿ ಸಾಲ ಸೌಲಭ್ಯ ಅವರವರ ವೃತ್ತಿಗನುಗುಣವಾಗಿ ನೀಡಲಾಗುತ್ತಿದ್ದು, ಈ ಮೀನುಗಾರಿಕೆಗೆ ನೀಡುವ ಸೌಲಭ್ಯ ತಕ್ಷಣ ನಿಲ್ಲಿಸಲು ಆದೇಶಿಸುವಂತೆ ಒತ್ತಾಯಿಸಿ ಮನವಿಪತ್ರವನ್ನು ಆಯೋಗದ ಅಧ್ಯಕ್ಷರಾದ ಶ್ರೀ ಕಿಶೋರ ಭಾಯಿ ಮಖ್ವಾನಾ ಅವರಿಗೆ ನೀಡಲಾಯಿತು ಎಂದುಕರ್ನಾಟಕ ರಾಜ್ಯ ಮೊಗೇರ ಸಂಘದ ಮುಖಂಡ ಅಶೋಕ್ ಕೊಂಚಾಡಿ ತಿಳಿಸಿದ್ದಾರೆ.
ಸಭೆಯಲ್ಲಿ ಕರ್ನಾಟಕ ರಾಜ್ಯ ಮೊಗೇರ ಸಂಘದ ಮುಖಂಡರಾದ ಸುಂದರ್ ಮೇರಾ, ಸೀತಾರಾಮ ಕೊಂಚಾಡಿ,ಅಶೋಕ್ ಕೊಂಚಾಡಿ, ತುಳಸಿದಾಸ ಪಾವಸ್ಕರ, ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿಯ ವಿವಿಧ ಸಂಘಟನೆಗಳ ಮುಖಂಡರಾದ ಸುಭಾಷ್ ಕಾನಡೆ, ತುಳಸಿದಾಸ್ ಪಾವಸ್ಕರ್, ರವೀಂದ್ರ ಮಂಗಳ, ಕಿರಣ ಶಿರೂರು, ಸಂತೋಷ ಚಂದಾವರ, ಹಾಗೂ ರಾಮ ಕೊಳಂಬೆ, ಸದಾನಂದ ಉಳ್ಳಾಲ್, ತಾರಾನಾಥ ಹರೀಶ್ ಮೂಡಬಿದ್ರೆ, ಸಂದೇಶ್ ಕೋಟೆಕಾರ್, ಸುಭಾಷ್ ಕುದ್ರಿ ಪಧವು, ಕೃಷ್ಣಪ್ರಸಾದ್ ಇತರರು ಈ ಸಮಯದಲ್ಲಿ ಹಾಜರಿದ್ದು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಭೆಯ ನಂತರ ಕಿಶೋರ್ ಬಾಯಿ ಮಖ್ವಾನಾ ಅವರು ಸಕಾರಾತ್ಮಕವಾಗಿ ಸ್ಪಂದಿಸುವ ವಾಗ್ಧಾನ ನೀಡಿದರು.