ಸುರತ್ಕಲ್ : ಸಿಪಿಎಂ ಹಾಗೂ ಡಿವೈಎಫ್ಐ ನೇತೃತ್ವದಲ್ಲಿ ಪ್ರತಿಭಟನೆ
ಸುರತ್ಕಲ್ : ನಿರ್ಮಾಣ ಹಂತದಲ್ಲೇ ಸ್ಥಗಿತಗೊಂಡಿರುವ ಸುರತ್ಕಲ್ ಇಡ್ಯಾ ಗ್ರಾಮದ ಜನತಾ ಕಾಲನಿ ಯಲ್ಲಿನ ವಸತಿ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ವಿತರಿಸಬೇ ಕೆಂದು ಒತ್ತಾಯಿಸಿ ಸಿಪಿಎಂ ಮಂಗಳೂರು ನಗರ ಉತ್ತರ ಸಮಿತಿ ಹಾಗೂ ಡಿವೈಎಫ್ ಐ ಸುರತ್ಕಲ್ ವಲಯ ಸಮಿತಿಯ ನೇತೃತ್ವದಲ್ಲಿ ಫಲಾನುಭವಿಗಳು ಸೋಮವಾರ ಜನತಾಕಾಲನಿಯ ನಿರ್ಮಾಣ ಹಂತದ ವಸತಿ ಸಮುಚ್ಚಯದ ವಠಾರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಮನೆ, ನಿವೇಶನ ರಹಿತ ಬಡವರಿದ್ದಾರೆ. ನಗರ ಪಾಲಿಕೆ ಬಡವರಿಗೆ ನಿವೇಶನ ವಿತರಿಸಲು ಪಾಲಿಕೆಯಲ್ಲಿ ಯಾವುದೇ ಯೋಜನೆಯಿಲ್ಲ. ಇರುವಂತಹಾ ಒಂದು ಜಿ+4 ವಸತಿ ಸಮುಚ್ಚಯ ಜನಪ್ರತಿನಿದಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಯೋಜನೆ ನನೆಗುದಿಗೆ ಬಿದ್ದಿದೆ. ಶ್ರೀಮಂತ ಬಿಲ್ಡರುಗಳ ವಸತಿ ಸಂಕೀರ್ಣದ ಭೂಮಿ ಪೂಜೆಗೆ ಹೋಗುವ ಶಾಸಕರುಗಳು ಕಳೆದ 25ವರ್ಷಗಳಿಂದ ಬಡವರಿಗೆ ವಸತಿ ಸೌಕರ್ಯಗಳು ದೊರಕಿಸಿ ಕೊಡಲು ವಿಫಲರಾಗಿದ್ದಾರೆ ಎಂದು ಟೀಕಿಸಿದರು. ಬಡವರಿಗೆ ಕೂಡಲೇ ಮನೆ ವಿತರಿಸದಿದ್ದರೆ ವಸತಿ ಸಮುಚ್ಚಯಕ್ಕೆ ಅಕ್ರಮ ಪ್ರವೆಶ ಮಾಡಿ ಫಲಾನುಭವಿಗಳೊಂದಿಗೆ ವಾಸ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಮಾಜಿ ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ ಮಾತನಾಡಿ, ಜನರಿಗೆ ವಸತಿ ನೀಡುವುದು ಭಿಕ್ಷೆಯಲ್ಲ ಅದು ನಮ್ಮ ಸಂವಿಧಾನ ಬದ್ದ ಹಕ್ಕಾಗಿದೆ. ನಗರಪಾಲಿಕೆ ವ್ಯಾಪ್ತಿಯೊಳಗಿನ ನಿವೇಶನ ರಹಿತರ ಸಮಸ್ಯೆ ಗಂಭೀರವಾಗಿದೆ. ಧ್ವೇಷ ರಾಜಕೀಯದಲ್ಲಿ ತೊಡಗಿರುವ ಶಾಸಕರ ನೇತೃತ್ವದ ಆಶ್ರಯ ಸಮಿತಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಅವರು ಆರೋಪಿಸಿದರು.
ಸಿಪಿಎಂ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡಿ, ನಗರಪಾಲಿಕೆ ವ್ಯಾಪ್ತಿಯ ಎಲ್ಲಾ ನಿವೇಶನ ರಹಿತರನ್ನು ಸಂಘಟಿಸಿ ಮೇ 4ರಂದು ಸಮಾವೇಶ ನಡೆಸಲು ಸಿದ್ಧತೆಗಳು ನಡೆಯುತ್ತಿವೆ. ನಮ್ಮ ಪ್ರತಿಭಟನೆಗಳಿಗೆ ಮನಪಾ ಮತ್ತು ಜನಪ್ರತಿನಿಧಿಗಳು ಬಗ್ಗದೇ ಇದ್ದಲ್ಲಿ ಫಲಾನುಭವಿಗಳೊಂದಿಗೆ ಮನಪಾ ಮತ್ತು ಜನಪ್ರತಿನಿಧಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ವರಿಕೆ ನೀಡಿದರು.
ಈ ಸಂದರ್ಭ ಐ. ಮುಹಮ್ಮದ್, ಸಲೀಮ್ ಶಾಡೋ, ಡಿವೈಎಫ್ಐ ಮುಖಂಡರಾದ ಬಿ.ಕೆ. ಮಕ್ಸೂದ್, ನವಾಝ್ ಕುಳಾಯಿ, ಇಲ್ಯಾಸ್ ಕೃಷ್ಣಾಪುರ, ಇಮ್ತಿಯಾಝ್ ಕುಳಾಯಿ, ಹನೀಫ್ ಕುಳಾಯಿ, ಸಾದಿಕ್ ಕಿಲ್ಪಾಡಿ, ಆಟೋ ರಿಕ್ಷಾ ಚಾಲಕರ ಸಂಘದ ಮುಖಂಡರಾದ ಲಕ್ಷ್ಮೀಶ್ ಅಂಚನ್, ಬಷೀರ್ ಕಾನ, ನಿವೇಶನ ರಹಿತರ ಹೋರಾಟ ಸಮಿತಿಯ ಮುಖಂಡರಾದ ಬಾಲಾಕೃಷ್ಣ ಕುಳಾಯಿ, ಭವ್ಯಾ ಪಂಜಿ ಮೊಗರು, ಜೈನಾಬ್, ದಿಲ್ ದಾರ್, ಹಸೀನಾ, ನೌಸೀನಾ, ಮರಿಯಮ್ಮ ಮೊದಲಾದವರು ಉಪಸ್ಥಿತರಿದ್ದರು.
ಸಿಪಿಎಂ ಮುಖಂಡರಾದ ಶ್ರೀನಾಥ್ ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.