×
Ad

ಶಿಕ್ಷಣದ ಜೊತೆಗೆ ಭಾಷೆ, ಸಂಸ್ಕೃತಿಯ ಮೇಲೆ ಅಭಿಮಾನಪಡಿ: ಅಬ್ದುಲ್ ರಹ್ಮಾನ್

Update: 2025-05-10 18:47 IST

ಮಂಗಳೂರು: ಸ್ವಾಭಿಮಾನದ ಬದುಕಿಗೆ ಹೆಸರುವಾಸಿಯಾದ ಬ್ಯಾರಿಗಳು ಶಿಕ್ಷಣದ ಜೊತೆಗೆ ಭಾಷೆ, ಸಂಸ್ಕೃತಿಯ ಮೇಲೆ ಅಭಿಮಾನಪಡಬೇಕಿದೆ. ಆವಾಗ ಮಾತ್ರ ಭಾಷೆಯ ಅಭಿವೃದ್ಧಿ ಮತ್ತು ಸಂಸ್ಕೃತಿಯ ಉಳಿವು ಸಾಧ್ಯ ಎಂದು ಕಣಚೂರು ಅಕಾಡಮಿ ಆಫ್ ಜನರಲ್ ಎಜುಕೇಶನ್‌ನ ಸಂಚಾಲಕ ಅಬ್ದುಲ್ ರಹ್ಮಾನ್ ಹೇಳಿದರು.

ಮಂಗಳೂರು ವಿವಿ ಅಧೀನದಲ್ಲಿರುವ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ದೇರಳಕಟ್ಟೆಯ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈನ್ಸ್‌ನ ಸಹಯೋಗದಲ್ಲಿ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈನ್ಸ್‌ನ ಸಭಾಂಗಣದಲ್ಲಿ ಶನಿವಾರ ನಡೆದ ಱಬ್ಯಾರಿ: ಭಾಷಾ ಸೌಹಾರ್ದ ಸೊಬಗು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಹಿರಿಯರು ಶ್ರಮಜೀವಿಗಳಾಗಿದ್ದರು. ನಾವು ಸಮಾಜದಲ್ಲಿ ತಲೆ ಎತ್ತಿ ನಡೆಯುವಂತೆ ಮಾಡಿದ್ದರು. ಆದರೆ ನಮಗೆ ಬ್ಯಾರಿ ಭಾಷೆಯ ಬಗ್ಗೆ ಅರಿವು ಇರಲಿಲ್ಲ. ಹಾಗಾಗಿ ಜನಗಣತಿ ಸಂದರ್ಭ ನಾವು ಬ್ಯಾರಿ ಭಾಷೆಯ ಬದಲು ಮಲಯಾಳಂ ಎಂದು ಬರೆಸುತ್ತಿದ್ದೆವು. ಬ್ಯಾರಿ ಆಂದೋಲನದ ಬಳಿಕ ನಮಗೆ ಭಾಷಾ ಪ್ರಜ್ಞೆ ಮೂಡಿತು. ಆದಾಗ್ಯೂ ನಮ್ಮ ಮುಂದಿನ ಪೀಳಿಗೆಯು ಈ ನಿಟ್ಟಿನಲ್ಲಿ ಹಿರಿಯರು ನಮಗಾಗಿ ಏನೂ ಮಾಡಿಲ್ಲ ಎಂದು ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗವಾರದು. ಅದಕ್ಕಾಗಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದು ಅಬ್ದುಲ್ ರಹ್ಮಾನ್ ಹೇಳಿದರು.

ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈನ್ಸ್‌ನ ಪ್ರಾಂಶುಪಾಲ ಪ್ರೊ. ಇಕ್ಬಾಲ್ ಅಹ್ಮದ್ ಯು.ಟಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಯಾಗಿ ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ತುಳು ಅಕಾಡಮಿಯ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಭಾಗವಹಿಸಿ ಮಾತನಾಡಿದರು.

ಬ್ಯಾರಿ: ಭಾಷಾ ಸೌಹಾರ್ದ ಸೊಬಗು ವಿಚಾರಗೋಷ್ಠಿಯಲ್ಲಿ ಬ್ಯಾರಿ ಅಕಾಡಮಿಯ ಮಾಜಿ ಸದಸ್ಯ ಅಬ್ದುಲ್ ರಹ್ಮಾನ್ ಕುತ್ತೆತ್ತೂರು (ಬ್ಯಾರಿ-ಕನ್ನಡ), ಲೇಖಕಿ ಅತ್ರಾಡಿ ಅಮೃತಾ ಶೆಟ್ಟಿ (ಬ್ಯಾರಿ-ತುಳು), ಅಖಿಲ ಭಾರತ ಬ್ಯಾರಿ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಶಮೀಮಾ ಕುತ್ತಾರ್ (ಬ್ಯಾರಿ-ಮಲಯಾಳಂ), ಪತ್ರಕರ್ತ ಮುಹಮ್ಮದ್ ಯೂನುಸ್ (ಬ್ಯಾರಿ-ಕೊಡವ), ಇಕ್ರಾ ಅರಬಿಕ್ ಸ್ಕೂಲ್‌ನ ಉಪನ್ಯಾಸಕ ಮುಹಮ್ಮದ್ ಫರ್ಹಾನ್ ನದ್ವಿ (ಬ್ಯಾರಿ-ಅರಬಿಕ್) ವಿಷಯ ಮಂಡಿಸಿದರು. ಮದನಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಇಸ್ಮಾಯೀಲ್ ಟಿ. ವಿಚಾರಗೋಷ್ಠಿಯ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದರು.

ಬ್ಯಾರಿ ಅಧ್ಯಯನ ಪೀಠದ ಸದಸ್ಯರಾದ ಬಿ.ಎ. ಮುಹಮ್ಮದ್ ಹನೀಫ್, ಖಾಲಿದ್ ತಣ್ಣೀರುಬಾವಿ, ಬಶೀರ್ ಬೈಕಂಪಾಡಿ, ಬಾದ್‌ಷಾ ಸಾಂಬರ್‌ತೋಟ, ಹಂಝ ಮಲಾರ್ ಉಪಸ್ಥಿತರಿದ್ದರು.

ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಬ್ಯಾರಿ ಅಧ್ಯಯನ ಪೀಠದ ಸದಸ್ಯ ಡಾ. ಇಸ್ಮಾಯೀಲ್ ವಂದಿಸಿದರು. ವಿದ್ಯಾರ್ಥಿನಿ ನಿಲೂಷಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News