ದ.ಕ. ಜಿಲ್ಲೆಯ ಅಭಿವೃದ್ಧಿ ಅನುದಾನದ ಶ್ವೇತಪತ್ರ ಹೊರಡಿಸಲಿ: ಶಾಸಕ ಭರತ್ ಶೆಟ್ಟಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಭಿವೃದ್ಧಿಗೆ ಸರಿಯಾದ ಅನುದಾನ ಬಿಡುಗಡೆ ಮಾಡದೆ ರಾಜ್ಯ ಸರ್ಕಾರ ತಾರತಮ್ಯ ತೋರುತ್ತಿದೆ. ಭಾಷಣಗಳಲ್ಲಿ ಮಾತ್ರ ಜಿಲ್ಲೆಯ ಅಭಿವೃದ್ಧಿಯ ಮಾತುಗಳನ್ನು ಕಾಂಗ್ರೆಸ್ ನಾಯಕರು ಆಡುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಎಷ್ಟು ಅನುದಾನ ಬಿಡುಗಡೆ ಮಾಡಿದೆ ಎಂಬುದರ ಕುರಿತು ಶ್ವೇತ ಪತ್ರ ಹೊರಡಿಸಲಿ ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಎಷ್ಟು ಅನುದಾನ ಬಿಡುಗಡೆಗೊಳಿಸಿದ್ದಾರೆ ಎಂಬುದು ಜನತೆಗೆ ತಿಳಿಯಬೇಕು. ಈ ಕುರಿತಂತೆ ಕಾಂಗ್ರೆಸ್ ನಾಯಕರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ರಾಜ್ಯ ಸರ್ಕಾರ ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗೆ ಮುಂದಾಗುತ್ತಿದೆ. ಆದರೆ ಇದು ಯಾವ ಪುರುಷಾರ್ಥಕ್ಕೆ? ದ.ಕ.ಜಿಲ್ಲೆಯಲ್ಲಿ ಅಭಿವೃದ್ಧಿ ನೆಲಕಚ್ಚಿದೆ. ಅಹಿತಕರ ಘಟನೆಗಳಿಂದ ಕಂಗೆಟ್ಟಿದೆ. ಸುಹಾಸ್ ಶೆಟ್ಟಿ ಸೇರಿದಂತೆ ಹಲವು ಮಂದಿ ಹಿಂದೂ ನಾಯಕರ ಕೊಲೆಯಾಗಿದೆ. ಸರ್ಕಾರದ ನಡೆ ಪ್ರಶ್ನಿಸಿದ ಶಾಸಕರು ಸೇರಿದಂತೆ ಹತ್ತಾರು ಮಂದಿಯ ಮೇಲೆ ಕೇಸು ಹಾಕಲಾಗಿದೆ. ಸರ್ಕಾರ ಜನ ಸಾಮಾನ್ಯರು ಮತ್ತು ಜನಪ್ರತಿನಿಧಿಗಳ ಧ್ವನಿ ಅಡಗಿಸುವ ಪ್ರಯತ್ನ ಮಾಡಿದ್ದಕ್ಕೆ ಸಂಭ್ರಮಾಚರಣೆಯೇ ಎಂದು ಭರತ್ ಶೆಟ್ಟಿ ಪ್ರಶ್ನಿಸಿದರು.
ಹಾಲು, ನೀರು, ವಿದ್ಯುತ್, ಪೆಟ್ರೋಲ್ ಸೇರಿದಂತೆ ಜನೋಪಯೋಗಿ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಬಂದಿದೆ. ಜನತೆಯ ನೆಮ್ಮದಿ ಹಾಳಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಸೇರಿದಂತೆ ಹಲವು ಹಗರಣಗಳು ಸರ್ಕಾರದ ನಿಜ ಬಣ್ಣ ಬಯಲು ಮಾಡಿವೆ. ಕಾಂಗ್ರೆಸ್ ನಾಯಕರ ಹಣದ ದಾಹಕ್ಕೆ ಅಧಿಕಾರಿಗಳು ಬಲಿಯಾಗಿದ್ದಾರೆ. ರೈತರ ಆತ್ಮಹತ್ಯೆಯಾಗಿದೆ. ವಕ್ಫ್ ನಿಂದ ಆಸ್ತಿ ಕಬಳಿಕೆ ಹೆಚ್ಚಿದೆ. ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ನಾಯಕರು ಸರ್ಕಾರಿ ಇಲಾಖೆಗಳಲ್ಲಿ ತಮ್ಮ ಹಸ್ತಕ್ಷೇಪ ಮಾಡುತ್ತಿ ದ್ದಾರೆ. ಇವೆಲ್ಲದರ ಸಂಭ್ರಮವನ್ನು ಆಚರಿಸಲು ರಾಜ್ಯ ಸರ್ಕಾರ ಮುಂದಾಗುತ್ತಿರುವುದೇ?. ಸರ್ಕಾರದ ಕಾರ್ಯವೈಖರಿ ಜನತೆಗೆ ಅರ್ಥವಾಗಿದೆ ಎಂದವರು ಹೇಳಿದರು.
ಕಾಂಗ್ರೆಸ್ನದ್ದು ಕೇವಲ ಓಟ್ ಬ್ಯಾಂಕ್ ರಾಜಕೀಯ. ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಸ್ಮಾರ್ಟ್ ಸಿಟಿಯಿಂದ 20 ಕೋಟಿ ರೂ. ನೀಡಲಾಗಿದೆ. ಸ್ಮಾರ್ಟ್ ಸಿಟಿಯಡಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆಂದು ಹಣ ಒದಗಿಸಿದ ಉದಾಹರಣೆ ದೇಶದಲ್ಲಿಯೇ ಇಲ್ಲ. ಆದರೆ ಕಾಂಗ್ರೆಸ್ ಇದರ ಉಲ್ಲೇಖವನ್ನೂ ಎಲ್ಲೂ ಮಾಡುವುದಿಲ್ಲ. ಮಂಗಳೂರಿನ ಹಲವೆಡೆ ಫ್ಲೆಕ್ಸ್ಗಳಲ್ಲಿ ರಾಜ್ಯ ಸರ್ಕಾರದ ಕಾರ್ಯದ ಬಗ್ಗೆ ಉಲ್ಲೇಖವಾ ಗಿದೆಯೇ ಹೊರತು ಸ್ಮಾರ್ಟ್ ಸಿಟಿಯ ಸಹಕಾರದ ಬಗ್ಗೆ ಎಲ್ಲೂ ಉಲ್ಲೇಖವಾಗದಿರುವುದು ದುರದೃಷ್ಟಕರ ಎಂದು ಶಾಸಕ ಭರತ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮುಡಾ ಮಾಜಿ ಅಧ್ಯಕ್ಷ ರವಿಶಂಕರ ಮಿಜಾರು, ಬಿಜೆಪಿ ಪ್ರಮುಖರಾದ ನಿತಿನ್ ಕುಮಾರ್, ವಸಂತ ಪೂಜಾರಿ ಉಪಸ್ಥಿತರಿದ್ದರು.