×
Ad

ಕರಾವಳಿಯಲ್ಲಿ ಸೌಹಾರ್ದ- ಶಾಂತಿ ಕಾಪಾಡಲು ತಾಲೂಕು ಸಮಿತಿ ರಚನೆ: ಜಯಶ್ರೀಕೃಷ್ಣ ಪರಿಸರ ಪ್ರೇಮ ಸಮಿತಿ

Update: 2025-06-16 16:14 IST

ಮಂಗಳೂರು, ಜೂ.16: ಅವಿಭಜಿತ ದ.ಕ. ಜಿಲ್ಲೆಯ ಕರಾವಳಿಯಲ್ಲಿ ಸೌಹಾರ್ದ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪ್ರತೀ ತಾಲೂಕಿನಿಂದ 8ರಿಂದ 10 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲಾಗುವುದು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮ ಸಮಿತಿ ತಿಳಿಸಿದೆ.

ನಗರದ ಪ್ರೆಸ್ ಕ್ಲಬ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಗೃಹಸಚಿವ ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಹಿಂದೆ ಸ್ಪೆಷಲ್ ಆ್ಯಕ್ಷನ್ ಫೋರ್ಸ್ (ಎಸ್ ಎಎಫ್) ಸ್ಥಾಪನೆ ಮಾಡಿರುವ ನಿರ್ಧಾರ ಶ್ಲಾಘನೀಯ, ಇದನ್ನು ಸಮಿತಿ ಸ್ವಾಗತಿಸುವುದಾಗಿ ಅವರು ಹೇಳಿದರು.

2001ರ ನಂತರ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಯೊಂದಿಗೆ ಕೈಗಾರಿಕೋದ್ಯಮಕ್ಕೆ ಒತ್ತು ನೀಡುತ್ತಾ ಬಂದಿರುವ ಸಮಿತಿಯು ಜಿಲ್ಲೆಯ ಅನೇಕರಿಗೆ ಉದ್ಯೋಗ ದೊರಕುವಂತೆ ಶ್ರಮಿಸಿದೆ. ಇದೀಗ ಅವಿಭಜಿತ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಉಂಟಾಗಿರುವ ಹಿನ್ನಡೆಯನ್ನು ತೊಡೆದು ಹಾಕಿ ಹೂಡಿಕೆಗೆ ಉತ್ತೇಜನ ದೊರೆಯಬೇಕಿದೆ. ಈ ನಿಟ್ಟಿನಲ್ಲಿ ಸಮಿತಿ ಶ್ರಮಿಸಲಿದೆ. ಪ್ರತೀ ತಾಲೂಕಿನಿಂದ ಸಮಾನಮನಸ್ಕರ 8ರಿಂದ 10 ಮಂದಿ ಸದಸ್ಯರನ್ನು ಒಳಗೊಂಡು ಸಮಿತಿ ರಚಿಸಿ ಶಾಂತಿಗೆ ಭಂಗ ಉಂಟು ಮಾಡುವವರ ವಿರುದ್ಧ ನಿಗಾ ಇಡುವ ಜತೆಗೆ ಶಾಂತಿಗೆ ಪೂರಕವಾದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಿದೆ ಎಂದವರು ಹೇಳಿದರು.

ಜಿಲ್ಲೆಯಲ್ಲಿ ಕೇವಲ 20ರಿಂದ 25 ಜನರಷ್ಟು ಕೆಲ ವ್ಯಕ್ತಿಗಳು ಅಥವಾ ಪ್ರಮುಖರಿಂದ ಮಾತ್ರವೇ ಸೌಹಾರ್ದಕ್ಕೆ ಭಂಗ ಉಂಟಾಗುತ್ತಿದೆ. ಇದರಿಂದ ಉಂಟಾಗುವ ಅಹಿತಕರ ಘಟನೆಗಳನ್ನು ನಿಯಂತ್ರಿಸಲು ಸರಕಾರ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಅವಿಭಜಿತ ಜಿಲ್ಲೆಯಲ್ಲಿ ಧರ್ಮ ಭೇದವಿಲ್ಲದೆ ಅನ್ಯೋನತೆಯಿಂದ ಬಾಳಿದವರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವವರು, ದ್ವೇಷ ಭಾಷಣಗಳ ಮೂಲಕ ಅಶಾಂತಿಗೆ ಕಾರಣವಾಗುತ್ತಿದ್ದು, ನಮ್ಮ ರಾಜಕೀಯೇತರ ಸಂಘಟನೆಯ ಮೂಲಕ ಶಾಂತಿ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಸಮಿತಿಯ ರಾಜ್ಯ ಸಂಯೋಜಕ ಕೆ.ಪಿ.ಜಗದೀಶ್ ಅಧಿಕಾರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ, ಜಡಿಲ್ಲಾ ಉಪಾಧ್ಯಕ್ಷರಾದ ಅನುಪ್ರಕಾಶ್ ಶೆಟ್ಟಿ, ನಾಗೇಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ಸುರೇಂದ್ರ ಮೆಂಡನ್,ಜಿ.ಟಿ. ಆಚಾರ್ಯ, ಸದಸ್ಯರಾದ ಶಂಕರ್ ಸುವರ್ಣ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News