ಫ್ಲೈಓವರ್ ಅಡಿಯಲ್ಲಿರುವ ಮಾರುಕಟ್ಟೆ ಪರಿಹಾರದಲ್ಲಿ ತಾರತಮ್ಯ ಆರೋಪ: ಸಭೆಯಲ್ಲಿ ಆಕ್ರೋಶ
ಉಳ್ಳಾಲ: ಫ್ಲೈಓವರ್ ಅಡಿಯಲ್ಲಿ ಇರುವ ಮಾರುಕಟ್ಟೆ, ಬಾಡಿಗೆ ಕಟ್ಟಡದ ನಿವಾಸಿಗಳಿಗೆ ನೀಡದ ಪರಿಹಾರ, ಕಟ್ಟಡ ಪರವಾನಿಗೆ, ಕುಡಿಯುವ ನೀರಿನ ಕಾಮಗಾರಿ ಬಗ್ಗೆ ಪರ,ವೀರೋಧ ಚರ್ಚೆ ಉಳ್ಳಾಲ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.
ನಗರ ಸಭೆ ಅಧ್ಯಕ್ಷ ಶಶಿ ಕಲ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾ ಡಿದ ಕೌನ್ಸಿಲರ್ ದಿನಕರ್ ಉಳ್ಳಾಲ ಅವರು ರಾಷ್ಟ್ರೀಯ ಹೆದ್ದಾರಿ ತೊಕ್ಕೊಟ್ಟುವಿನ ಫ್ಲೈಓವರ್ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಮಾರುಕಟ್ಟೆ ಯಿಂದ ತೊಂದರೆ ಆಗುತ್ತಿದೆ. ಒಂದೆಡೆ ದ್ವಿಮುಖ ಸಂಚಾರ ಇದೆ. ಇನ್ನೊಂದಡೆ ಮಳೆ ನೀರು ಬ್ಲಾಕ್ ಆಗಿ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈ ಬಗ್ಗೆ ಕ್ರಮ ಅಗತ್ಯ ಇದೆ ಎಂದು ಸಭೆಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ನವೀನ್ ಹೆಗ್ಡೆ ಅವರು, ಮಾರುಕಟ್ಟೆ ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಎನ್ ಒಸಿ ನೀಡಿದೆ. ಈ ಆಧಾರದಲ್ಲಿ ಅಂಗಡಿಗಳು ಕಾರ್ಯಾಚರಿಸುತ್ತಿದೆ. ಇದರಿಂದ ಆಗುತ್ತಿರುವ ತೊಂದರೆ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಗಮನ ಹರಿಸುತ್ತೇನೆ ಎಂದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಖಲೀಲ್ ಅವರು ನಗರ ಸಭೆ ಯ ಗಮನಕ್ಕೆ ಬಾರದೆ ಹೆದ್ದಾರಿ ಇಲಾಖೆ ಎನ್ ಒಸಿ ನೀಡಲು ಸಾಧ್ಯವಿಲ್ಲ. ಒಂದು ವೇಳೆ ನೀಡಿದರೆ ತೊಂದರೆ ಆಗುವುದು ನಮಗೆ. ಇದನ್ನು ತೆರವು ಮಾಡುವ ಕೆಲಸ ಆಗಬೇಕು ಈ ಮಾರುಕಟ್ಟೆ ಗೆ ನಗರಸಭೆ ಪರವಾನಿಗೆ ನೀಡಿದೆ. ಇದನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.
ಕೌನ್ಸಿಲರ್ ಅಯ್ಯೂಬ್ ಮಂಚಿಲ ಅವರು ,ಮಳೆ ಹಾನಿ ಪರಿಹಾರ 5000 ನೀಡಲಾಗಿದೆ. ಆದರೆ ಬಾಡಿಗೆ ಕೊಠಡಿ ಯಲ್ಲಿ ವಾಸವಿರುವ ಕುಟುಂಬ ಕ್ಕೆ ಪರಿಹಾರ ಯಾಕೆ ನೀಡಿಲ್ಲ. ಇದರಲ್ಲಿ ತಾರತಮ್ಯ ಯಾಕೆ ಎಂದು ಗ್ರಾಮಕರಣಿಕ ಸುರೇಶ್ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಕರಣಿಕ ಸುರೇಶ್ ಅವರು, ಮಳೆ ಹಾನಿ ಪರಿಹಾರ ಬಾಡಿಗೆ ಕಟ್ಟಡದಲ್ಲಿ ವಾಸವಿರುವವರಿಗೆ ಅನ್ವಯಿಸುವುದಿಲ್ಲ.ಅವರಿಗೆ ತೊಂದರೆ ಆದರೆ ಕಟ್ಟಡ ಮಾಲೀಕರೇ ಜವಾಬ್ದಾರಿ ಎಂದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೌನ್ಸಿಲರ್ ಜಬ್ಬಾರ್ ಅವರು ಬಾಡಿಗೆ ಮನೆಯಲ್ಲಿ ಬಡವರು ಇರುವುದು. ಕೆಲವು ಕಡೆ,ಮನೆಯ ಅಗತ್ಯ ವಸ್ತುಗಳು , ವಾಹನಗಳು ಹಾನಿಯಾಗಿದೆ. ಅವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದಾಗ ಸದಸ್ಯರು ಸಹಮತ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಕರಣಿಕ ಸುರೇಶ್ ಅವರು ಬಾಡಿಗೆ ಮನೆಯವರು ನೀಡಿದ ಅರ್ಜಿ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು.
ಕಟ್ಟಡ ಪರಿಶೀಲನೆ ಮಾಡುವ ಮೊದಲು ಪರವಾನಿಗೆ ನೀಡುವ ಬಗ್ಗೆ ಕೌನ್ಸಿಲರ್ ಜಬ್ಬಾರ್ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಯ್ಯೂಬ್ ಅವರು ಕೆಲವು ಕಡೆ ರಸ್ತೆ ಕಬಳಿಸಿ, ಚರಂಡಿಯಲ್ಲಿ ಕಟ್ಟಡ ಕಟ್ಟಿದ್ದಾರೆ.ಇವರಿಗೆ ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿದರು.
ದಿನಕರ್ ಉಳ್ಳಾಲ ಮಾತನಾಡಿ, ಈ ಹಿಂದೆ ಈ ವಿಚಾರದಲ್ಲಿ ಚರ್ಚೆ ಆಗಿದೆ.ಇತ್ಯರ್ಥ ಆಗಿಲ್ಲ. ಪರಿಶೀಲನೆ ನಡೆಸಿದರೆ 500 ಕ್ಕೂ ಅಧಿಕ ಅನಧಿಕೃತ ಮನೆಗಳು ಸಿಗಬಹುದುಎಂದು ಸಭೆಗೆ ತಿಳಿಸಿದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತ ನವೀನ್ ಹೆಗ್ಡೆ ಅವರು, ಕಟ್ಟಡ ಅಕ್ರಮ ಇದ್ದರೆ ಪರವಾನಿಗೆ ನೀಡಲಾಗು ವುದಿಲ್ಲ. ಇದನ್ನು ಪರಿಶೀಲನೆ ಮಾಡುವಾಗ ಸದಸ್ಯರು ಜತೆಗಿರಬೇಕು. ಮೊದಲು ನಿವೇಶನ ಪರಿಶೀಲನೆ ನಡೆಸಿ ಪರವಾನಿಗೆ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಧರ್ಮ ನಗರ ರಾಜಕಾಲುವೆ ಮುಚ್ಚಿದೆ. ಕೆಲವು ಕಡೆ ಚರಂಡಿ ಇಲ್ಲ.ರಸ್ತೆ ಗೆ 16 ಫೀಟ್ ಜಾಗ ಬಿಟ್ಟು ಕಟ್ಟಡ ಕಟ್ಟಬೇಕು ಎಂಬ ನಿಯಮ ಇದೆ. ಇದನ್ನು ಪಾಲನೆ ಮಾಡಬೇಕಲ್ಲವೇಎಂದು ಕೌನ್ಸಿಲರ್ ಜಬ್ಬಾರ್ ಪ್ರಶ್ನಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ನವೀನ್ ಹೆಗ್ಡೆ ಅವರು ಮುಚ್ಚಿದ ಚರಂಡಿಯ ಹೂಳೆತ್ತುವ ಕಾಮಗಾರಿ ಮಾಡಲಾಗುವುದು.ಚರಂಡಿಯಲ್ಲೇ ಕೆಲವು ಕಡೆ ಮನೆ ನಿರ್ಮಾಣ ಆಗಿದೆ. ಈ ರೀತಿ ಆದರೆ ಮಳೆ ನೀರು ಮನೆಗೆ ಬಾರದೆ ಇರುತ್ತದೆಯೇ ? ಚರಂಡಿ, ರಸ್ತೆ ಬಿಟ್ಟು ಕಟ್ಟಡ ಇರಬೇಕು ಎಂದರು.
ಇದೇ ವೇಳೆ ಮಾತನಾಡಿದ ಕೌನ್ಸಿಲರ್ ಖಲೀಲ್ ಅವರು,ಉಳ್ಳಾಲ ದಲ್ಲಿರುವ ಅಪಾರ್ಟ್ ಮೆಂಟ್ ಗಳ ನೀರು ಡ್ರೈನೇಜ್ ಗೆ ಬಿಡಲಾಗುತ್ತಿದೆ. ಇದರಿಂದ ಮಳೆ ನೀರು ಹೋಗಲು ಜಾಗ ಸಿಗದೇ ಕೃತಕ ನೆರೆ ಆವರಿಸುತ್ತದೆ. ಈ ವಿಚಾರದಲ್ಲಿ ನಾವು ಮಾತನಾಡಿದರೆ ಕೆಲಸ ಆಗುವುದಿಲ್ಲ.ನಮಗಿಂತ ಜಾಸ್ತಿ ಬ್ರೋಕರ್ ಗಳಿಗೆ ನಗರ ಸಭೆ ಯಲ್ಲಿ ಸ್ಥಾನ ಮಾನ, ಮರ್ಯಾದೆ , ಪರವಾನಿಗೆ ಎಲ್ಲಾ ನೀಡುತ್ತಾರೆ ಎಂದು ತನ್ನ ನೋವು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ನವೀನ್ ಹೆಗ್ಡೆ ಅವರು ನನಗೂ ಜನರ ಮೇಲೆ ಕಾಳಜಿ ಇದೆ. ನಮ್ಮ ಕೆಲಸದಲ್ಲಿ ಯಾರಿಗೂ ತೊಂದರೆ ಆಗಬಾರದು. ಪರವಾನಿಗೆ ನೀಡಬೇಕೋ ಬೇಡವೋ ಎಂದು ತೀರ್ಮಾನ ನಾವು ಮಾಡುತ್ತೇವೆ. ಸರ್ಕಾರದ ನಿಯಮ ಪ್ರಕಾರ ಕೆಲಸ ಆಗುತ್ತದೆ ಎಂದರು.
ಮಳೆ ಗಾಲದಲ್ಲಿ ವಿದ್ಯುತ್ ಸಮಸ್ಯೆ ಬಹಳಷ್ಟು ಇರುತ್ತದೆ. ಮೆಸ್ಕಾಂ ನ ಸ್ಛಿರ ದೂರವಾಣಿ ಗೆ ಕರೆ ಮಾಡಿ ದರೆ ಸ್ವೀಕರಿಸುವವರು ಇಲ್ಲ. ಲೈನ್ ಮ್ಯಾನ್ ಕೂಡ ಕರೆ ಸ್ವೀಕರಿಸುವುದಿಲ್ಲ. ಹೀಗೆ ಆದರೆ ವಿದ್ಯುತ್ ಸಮಸ್ಯೆ ಇತ್ಯರ್ಥ ಪಡಿಸುವವರು ಯಾರು ಎಂದು ಕೌನ್ಸಿಲರ್ ದಿನಕರ್ ಉಳ್ಳಾಲ ಮೆಸ್ಕಾಂ ಅಧಿಕಾರಿ ಯನ್ನು ತರಾಟೆಗೈದರು. ಇದಕ್ಕೆ ಧ್ವನಿ ಗೂಡಿಸಿದ ಸದಸ್ಯರು ಮೆಸ್ಕಾಂ ಸಿಬ್ಬಂದಿ ಬೇಜವಾಬ್ದಾರಿ ತನಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಅಮೃತ್ 2.0 ಕುಡಿಯುವ ನೀರಿನ ಯೋಜನೆ ಕಾಮಗಾರಿ ಮಾಡುವಾಗ ರಸ್ತೆ ಅಗೆದು ಹಾಕುತ್ತಾರೆ. ಅದನ್ನು ಮುಚ್ಚದ ಕಾರಣ ಪಂಡಿತ್ ಹೌಸ್ ಬಳಿ ಒಂದು ಜೀವ ಹೋಗಿದೆ.ಮೊನ್ನೆ ಹೊಂಡಕ್ಕೆ ಬಿದ್ದು ಪೊಲೀಸ್ ಸಿಬ್ಬಂದಿಯ ಕಾಲು ತುಂಡಾಗಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಕೌನ್ಸಿಲರ್ ದಿನಕರ್ ಉಳ್ಳಾಲ ಅಮೃತ್ 2.0 ಕುಡಿಯುವ ನೀರು ಯೋಜನೆ ಸಹಾಯಕ ಇಂಜಿನಿಯರ್ ಶ್ರೀಕಾಂತ್ ಅವರನ್ನು ತರಾಟೆಗೈದರು.
ಇದೇ ವೇಳೆ ಕೌನ್ಸಿಲರ್ ಜಬ್ಬಾರ್ ಅವರು ರಸ್ತೆ ಅಗೆದು ಹಾಕಿರುವುದನ್ನು ದುರಸ್ತಿ ಮಾಡಬೇಕು.ಹೊಸ ರಸ್ತೆ ಅಗೆದು ಹಾಳು ಮಾಡುವುದು ಬೇಡ. ಈ ಸಮಸ್ಯೆ ಶೀಘ್ರ ಇತ್ಯರ್ಥ ಪಡಿಸುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಕಾಂತ್ ಅವರು ರಸ್ತೆ ಅಗೆದು ಹಾಕಿದ್ದನ್ನು ಸರಿಪಡಿಸುತ್ತೇವೆ. ಮಳೆಗಾಲದಲ್ಲಿ ಸ್ವಲ್ಪ ಸಮಯ ಬೇಕಾಗುತ್ತದೆ ಎಂದಾಗ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಇದೇ ವೇಳೆ ಒಳಚರಂಡಿ ಹಾಗೂ ಕುಡಿಯುವ ನೀರು ವಿಭಾಗದ ಶೋಭಾ ಅವರು ಅಗೆದ ರಸ್ತೆಯನ್ನು ತಾತ್ಕಾಲಿಕ ಮುಚ್ಚಲಾಗಿದೆ. ಮಳೆಗಾಲ ಮುಗಿದ ಕೂಡಲೇ ಸಮಸ್ಯೆ ಇತ್ಯರ್ಥ ಆಗುತ್ತದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಉಪಸ್ಥಿತರಿದ್ದರು.