×
Ad

ಕುಡುಪುವಿನಲ್ಲಿ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಫೇಸ್‌ಬುಕ್‌ ಪೋಸ್ಟ್| ನನ್ನ ತೇಜೋವಧೆ ಮಾಡಲಾಗಿದೆ: ಸಜಿತ್ ಶೆಟ್ಟಿ ಆರೋಪ

Update: 2025-06-20 19:09 IST

(ಸಜಿತ್ ಶೆಟ್ಟಿ)

ಮಂಗಳೂರು, ಜೂ. 20: ‘ಕುಡುಪುವಿನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯ ಕೇಳಿ ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್ ನೆಪವಾಗಿರಿಸಿಕೊಂಡು ನನ್ನ ತೇಜೋವಧೆ ಮಾಡುವ ಕೃತ್ಯ ನಡೆದಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ. ನೂತನ ಪೊಲೀಸ್ ಕಮಿಷನರ್ ಮೇಲೆ ಭರವಸೆ ಇದೆ. ಮಾನಸಿಕವಾಗಿ ತೊಳಲಾಟಕ್ಕೆ ಕಾರಣವಾಗಿ ನನ್ನ ಈ ಸ್ಥಿತಿಗೆ ಎಸಿಪಿ ಪ್ರಕಾಶ್ ಹಾಗೂ ವಾಮಂಜೂರು ಎಸ್‌ಐ ಅರುಣ್ ನೇರ ಕಾರಣ’ ಎಂದು ಮಂಗಳೂರಿನ ಸಜಿತ್ ಶೆಟ್ಟಿ ಎಂಬವರು ಫೇಸ್‌ಬುಕ್ ಲೈವ್‌ನಲ್ಲಿ ಆರೋಪಿಸಿದ್ದಾರೆ.

‘ಕುಡುಪುವಿನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂದಿಸಿ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿಲ್ಲ ಎಂಬುದಾಗಿ ನಾನು ಕಳೆದ ಹಲವು ಸಮಯದಿಂದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕುತ್ತಿದ್ದೆ. ಈ ಬಗ್ಗೆ ನಿನ್ನೆ ಸಂಜೆ ಉರ್ವಾ ಠಾಣೆಯಿಂದ ಕರೆ ಬಂದಿದ್ದು, ಹೇಳಿಕೆ ದಾಖಲಿಸಿಕೊಳ್ಳಲು ಠಾಣೆಗೆ ಬರುವಂತೆ ತಿಳಿಸಿದ್ದರು. ಅದರಂತೆ ನಾನು ಬೆಳಗ್ಗೆ ಠಾಣೆಗೆ ನನ್ನ ಕರ್ತವ್ಯದ ಸ್ಥಳದಿಂದ ತೆರಳಿದ್ದೆ. ಅಲ್ಲಿದ್ದ ಎಸಿಪಿ ರವೀಶ್ ನಾಯಕ್‌ರವರು ಪ್ರಕರಣದ ತನಿಖೆಯ ಬಗ್ಗೆ ಸಂಶಯದ ರೀತಿಯಲ್ಲಿ ನೀವು ಪೋಸ್ಟ್ ಮಾಡಿದ್ದು, ಆ ಬಗ್ಗೆ ಹೇಳಿಕೆ ನೀಡುವಂತೆ ತಿಳಿಸಿದ್ದರು. ನಾನು ಪ್ರಕರಣದ ಬಗ್ಗೆ ಆರಂಭದಿಂದಲೂ ವಹಿಸಿರುವ ಮುತುವರ್ಜಿಯ ಬಗ್ಗೆ ಹೇಳಿಕೆ ನೀಡಿ ವಾಪಾಸಾಗಿದ್ದೆ. ಸಂಜೆ ಮತ್ತೆ ನನಗೆ ಪೊಲೀಸ್ ಠಾಣೆಗೆ ಬರುವಂತೆ ತಿಳಿಸಲಾಯಿತು. ಆ ಸಂದರ್ಭ ಅಲ್ಲಿದ್ದ ಎಸಿಪಿ ಪ್ರಕಾಶ್ ಹಾಗೂ ವಾಮಂಜೂರು ಎಸ್‌ಐ ಅರುಣ್ ನಿಮ್ಮ ಬೆಳಗಿನ ಹೇಳಿಕೆ ಸರಿಯಾಗಿಲ್ಲ. ನಿನ್ನಲ್ಲಿ ಸಾಕ್ಷಿ ಇದೆಯೇ ಸಾಕ್ಷಿ ಇಲ್ಲದಿದ್ದರೆ ಎಫ್‌ಐಆರ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ನನ್ನ ಜತೆ ಕೊಲೆ ಆರೋಪಿಯಂತೆ ನಡೆದುಕೊಂಡಿದ್ದಾರೆ. ನನ್ನ ಮೊಬೈಲ್‌ನಿಂದ ಕ್ಷಮಾಪಣೆ ವೀಡಿಯೋ ಮಾಡಿಸಿ ಪೋಸ್ಟ್ ಮಾಡಿಸಿದ್ದಾರೆ. ಇದನ್ನು ಬಿಜೆಪಿಯ ಕಾರ್ಯಕರ್ತರು ವೈರಲ್ ಮಾಡಿದ್ದು, ಇದರಿಂದ ನನ್ನ ತೇಜೋವಧೆಯಾಗಿದೆ. ನನ್ನ ಹಾಗೂ ಕುಟುಂಬದವರಿಗೆ ಅವಾಚ್ಯ ರೀತಿ ಯಿಂದ ಹಲವರು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇದರಿಂದ ನಾನು ಮಾನಸಿಕವಾಗಿ ಜರ್ಝರಿತ ನಾಗಿದ್ದೇನೆ. ನನ್ನ ಈ ಪರಿಸ್ಥಿತಿಗೆ ಎಸಿಪಿ ಪ್ರಕಾಶ್ ಹಾಗೂ ಎಸ್‌ಐ ಅರುಣ್ ಹಾಗೂ ಬಿಜೆಪಿ ಕಾರ್ಯಕರ್ತರು ಕಾರಣರಾಗಿದ್ದು, ನೊಂದು ಈ ಬಗ್ಗೆ ಲೈವ್ ಬಂದು ಮಾತನಾಡಿದ್ದೇನೆ’ ಎಂದು ಸಜಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.’

ಸಜಿತ್ ಶೆಟ್ಟಿ ಅವರ ಫೇಸ್‌ಬುಕ್ ವೀಡಿಯೊ ಕುರಿತು ಪೊಲೀಸ್ ಕಮಿಷನರ್ ಸ್ಪಷ್ಟೀಕರಣ

ಸಜಿತ್ ಶೆಟ್ಟಿ ಅವರು ಫೇಸ್‌ಬುಕ್ ಲೈವ್‌ನಲ್ಲಿ ಪೊಲೀಸರ ವಿರುದ್ಧ ಮಾಡಿರುವ ಆರೋಪ ಕುರಿತಂತೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಈ ಕೆಳಗಿನ ಸ್ಪಪ್ಟೀಕರಣ ನೀಡಿದ್ದಾರೆ.

ಸಜಿತ್ ಶೆಟ್ಟಿ ನಿನ್ನೆ ಫೇಸ್‌ಬುಕ್‌ನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದು, ಪ್ರಕರಣದಲ್ಲಿ ಪ್ರಮುಖ ಆರೋಪಿಯೊಬ್ಬನಿದ್ದು, ಆತನ ಜತೆ ಪೊಲೀಸರಿಗೆ ಏನೋ ಸಂಪರ್ಕವಿರುವ ಕಾರಣ ಆತನನ್ನು ಬಂಧಿಸಿಲ್ಲ ಎಂದಿದ್ದರು. ಆ ಪೋಸ್ಟ್ ಆಧರಿಸಿ, ಪ್ರಕರಣದಲ್ಲಿ ಪ್ರಮುಖ ಆರೋಪಿ ಇರುವ ಸಾಧ್ಯತೆಯನ್ನು ಪೊಲೀಸರು ಅರಿತು, ಆರೋಪಿಯ ಗುರುತು ಖಚಿತಪಡಿಸಿಕೊಳ್ಳಲು ಹಾಗೂ ಹೇಳಿಕೆಗೆ ಪೂರಕವಾಗಿ ಸಾಕ್ಷ್ಯ ಹೊಂದಿದ್ದಾರೆಯೇ ಎಂದು ತಿಳಿಯಲು ತನಿಖಾಧಿಕಾರಿ (ಐಒ) ಸಜಿತ್ ಶೆಟ್ಟಿಯವರನ್ನು ತಪಾಸಣೆಗೊಳಪಡಿಸಲು ನಿರ್ಧರಿಸಿದರು.

ತನಿಖಾ ಪ್ರಕ್ರಿಯೆಯ ಭಾಗವಾಗಿ, ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹೊಂದಿರುವ ಯಾವುದೇ ವ್ಯಕ್ತಿಯ ಹೇಳಿಕೆಗಳನ್ನು ಸಮನ್ಸ್ ಮತ್ತು ದಾಖಲಿಸುವ ಅಧಿಕಾರವನ್ನು ಐಒ ಹೊಂದಿದೆ. ಇದಕ್ಕಾಗಿ ಸಜಿತ್ ಶೆಟ್ಟಿಯನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆಯಲಾಯಿತು.

ವಿಚಾರಣೆಯ ಸಮಯದಲ್ಲಿ, ಅವರು ಯಾರ ವಿರುದ್ಧವೂ ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲ ಎಂದು ಹೇಳಿದರು ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಪೋಸ್ಟ್ ಮಾಡಿರುವುದಾಗಿ ಒಪ್ಪಿಕೊಂಡರು. ಅವರ ಹೇಳಿಕೆಯನ್ನು ಸರಿಯಾಗಿ ದಾಖಲಿಸಿ, ಅವರನ್ನು ವಾಪಾಸು ಕಳುಹಿಸಲಾಯಿತು.

ಯಾವುದೇ ವ್ಯಕ್ತಿ ಕಾನೂನಿಗಿಂತ ಮೇಲಲ್ಲ. ಸಾಮಾಜಿಕ ಮಾಧ್ಯಮವನ್ನು ಅನುಸರಿಸುವವರು ಅಥವಾ ಸಾರ್ವಜನಿಕ ಪ್ರೊಫೈಲ್ ಏನೇ ಇರಲಿ, ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ಯಾರಾದರೂ - ಸಾಕ್ಷಿಯಾಗಿ ಅಥವಾ ಇನ್ಯಾವುದೇ ರೀತಿಯಲ್ಲಿ ಕಾನೂನಿನಡಿಯಲ್ಲಿ ತನಿಖೆಗೆ ಸಹಕರಿಸುವುದು ಕಡ್ಡಾಯವಾಗಿದೆ.

ಈ ವಿಷಯದಲ್ಲಿ ಪೊಲೀಸರು ತೆಗೆದುಕೊಳ್ಳುವ ಎಲ್ಲಾ ಕ್ರಮಗಳು ಕಾನೂನು ಕಾರ್ಯವಿಧಾನಗಳು ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ನ ನಿಬಂಧನೆಗಳಿಗೆ ಅನುಗುಣವಾಗಿರುತ್ತವೆ.

ಈ ದಿನ ಸಜಿತ್ ಶೆಟ್ಟಿಯವರು ಮತ್ತೊಂದು ವೀಡಿಯೊವನ್ನು ಬಿಡುಗಡೆ ಮಾಡಿ, ಅದರಲ್ಲಿ ಅವರು ಮಾನಸಿಕ ತೊಂದರೆಯನ್ನು ಅನುಭವಿಸುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ನ್ಯಾಯವ್ಯಾಪ್ತಿಯೊಳಗೆ ಎಲ್ಲಾ ವ್ಯಕ್ತಿಗಳ ಯೋಗಕ್ಷೇಮ ಪೊಲೀಸರ ಕಾಳಜಿಯಾಗಿದ್ದು, ಅವರ ಇತ್ತೀಚಿನ ಹೇಳಿಕೆಗಳು ಮತ್ತು ವೀಡಿಯೊಗಳನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ಅಗತ್ಯ ಮನೋವೈದ್ಯಕೀಯ ಮತ್ತು ಸಮಾಲೋಚನೆಗೆ ಒಳಪಡಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.

Full View


Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News