ಪುತ್ತೂರು| ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರ, ವಂಚನೆ ಪ್ರಕರಣ: ಶಾಸಕ ಅಶೋಕ್ ರೈ ಸ್ಪಷ್ಟನೆ
ಶಾಸಕ ಅಶೋಕ್ ರೈ
ಪುತ್ತೂರು, ಜೂ 30: ಬಿಜೆಪಿ ಮುಖಂಡನ ಪುತ್ರನೊಬ್ಬ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ ಬಳಿಕ ನಾಪತ್ತೆಯಾಗಿರುವ ಪ್ರಕರಣದಲ್ಲಿ ಸಂತ್ರಸ್ತ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದು, ಸಂತ್ರಸ್ತೆಯ ತಾಯಿ ನ್ಯಾಯ ಕೊಡಿಸುವಂತೆ ಕೋರಿದ್ದಾರೆ.
ನಾವು ಆತನ ವಿರುದ್ಧ ದೂರು ನೀಡಲು ಪುತ್ತೂರು ಮಹಿಳಾ ಠಾಣೆಗೆ ಹೋಗಿದ್ದೆವು. ಆ ಸಂದರ್ಭದಲ್ಲಿ ಆರೋಪಿಯ ತಂದೆ ಪಿ.ಜಿ.ಜಗನ್ನಿವಾಸ್ ಕೂಡಾ ಠಾಣೆಗೆ ಬಂದಿದ್ದರು. ಆರೋಪಿಯ ತಂದೆ ಠಾಣೆಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮೊಬೈಲ್ ನಲ್ಲಿ ಕರೆ ಮಾಡಿ ಮಾತನಾಡಿದ ಬಳಿಕ ನನ್ನ ಕೈಗೆ ಮೊಬೈಲ್ ನೀಡಿದ್ದರು. ನನ್ನ ಬಳಿ ಮಾತನಾಡಿದ ಶಾಸಕರು. ಅವರು ಮದುವೆ ಮಾಡಿಸಲು ಒಪ್ಪಿದ್ದಾರೆ. ಹುಡುಗನ ಭವಿಷ್ಯದ ಪ್ರಶ್ನೆ ಇರುವ ಕಾರಣ ಪೊಲೀಸ್ ದೂರು ನೀಡಬೇಡಿ ಎಂದು ಹೇಳಿದರು. ಇಬ್ಬರನ್ನೂ ಮದುವೆ ಮಾಡಿಸಿ ಕೊಡುವುದಕ್ಕೆ ಪ್ರಯತ್ನಿಸುವುದಾಗಿಯೂ ಹೇಳಿದ್ದರು. ಅಲ್ಲದೆ ಮದುವೆ ಮಾಡಿಕೊಡುವುದಾಗಿ ಠಾಣೆಯಲ್ಲಿ ಆರೋಪಿಯ ತಂದೆ ಜಗನ್ನಿವಾಸ್ ರಾವ್ ಮುಚ್ಚಳಿಕೆಯನ್ನೂ ಬರೆದು ಕೊಟ್ಟಿದ್ದಾರೆ ಎಂದು ಹೇಳಿದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಪುತ್ತೂರು ಶಾಸಕ ಅಶೋಕ್ ರೈ ಅವರು "ಕಳೆದ ಕೆಲವು ದಿನಗಳ ಹಿಂದೆ ನನಗೆ ಪಿಜಿ ಜಗನ್ನಿವಾಸ್ ರಾವ್ ಕರೆ ಮಾಡಿ ಅವರ ಮಗನ ವಿಷಯವನ್ನು ನನ್ನ ಬಳಿ ಹೇಳಿದ್ದರು. ನಂತರ ನಾವು ಠಾಣೆಯಲ್ಲಿದ್ದೇವೆ. ಯುವತಿಯ ತಾಯಿಯೂ ನಮ್ಮ ಜೊತೆಯೇ ಇದ್ದಾರೆ. ಘಟನೆ ನಡೆದು ಹೋಗಿದೆ ನನ್ನ ಮಗ ಆಕೆಯನ್ನು ಮದುವೆಯಾಗುವುದಾಗಿ ಒಪ್ಪಿದ್ದಾನೆ. ಈಗ ಅವನಿಗೆ 21 ವರ್ಷ ಪೂರ್ತಿಯಾಗದ ಕಾರಣ ಎರಡು ತಿಂಗಳು ಬಿಟ್ಟು ಆಕೆಯನ್ನು ಮದುವೆಯಾಗುತ್ತಾನೆ ಎಂದು ಹೇಳಿದ್ದರು. ಆ ಬಳಿಕ ಯುವತಿಯ ತಾಯಿ ಕರೆ ಮಾಡಿ ಇದೇ ವಿಚಾರವನ್ನು ಹೇಳಿ ಜಗನ್ನಿವಾಸ್ ರಾವ್ ಅವರ ಮಗ ನನ್ನ ಮಗಳನ್ನು ಮದುವೆಯಾಗುವುದಾಗಿ ಹೇಳಿದ್ದಾರೆ. 21 ವರ್ಷ ಪ್ರಾಯ ಪೂರ್ತಿಯಾಗಿಲ್ಲ ಆದ ಕೂಡಲೇ ಮದುವೆಯಾಗುತ್ತಾರೆ ಎಂದು ನನ್ನಲ್ಲಿ ಹೇಳಿದ್ದರು.
ಈ ವೇಳೆ ನಾನು ಅವರಲ್ಲಿ "ಮದುವೆಯಾಗುವುದಾಗಿ ಒಪ್ಪಿಕೊಂಡಲ್ಲಿ ಕೇಸು ಯಾಕೆ ? ನಿಮ್ಮೊಳಗೆ ರಾಜಿ ಮಾತುಕತೆ ನಡೆಸಿದ್ದೀರಲ್ಲ ಮದುವೆಯಾಗುವುದಾದರೆ ಸಮಸ್ಯೆ ಇತ್ಯರ್ಥವಾಯಿತಲ್ಲ ಎಂದು ಹೇಳಿದಾಗ ಮಹಿಳೆ ಹೌದು ಎಂದು ಹೇಳಿದ್ದರು. ಆ ನಂತರ ಕೆಲವು ವಾರಗಳ ಬಳಿಕ ಇತ್ತೀಚೆಗೆ ಮಹಿಳೆ ಕರೆ ಮಾಡಿ ಅವನು ಮದುವೆಯಾಗುದಿಲ್ವಂತೆ ಏನು ಮಾಡುವುದು ಎಂದು ಹೇಳಿದ್ದರು. ಮದುವೆಯಾಗದೇ ಇದ್ದಲ್ಲಿ ಕಾನೂನು ಪ್ರಕಾರ ಪ್ರಕ್ರಿಯೆ ನಡೆಯಲಿ ಎಂದು ಹೇಳಿದ್ದೆ, ವಿನಾಃ ನಾನು ಬೇರೇನು ಹೇಳಿಲ್ಲ. ನಾನು ಯಾವುದೇ ಅನ್ಯಾಯ ಯಾರಿಗೂ ಮಾಡಿಲ್ಲ, ಅನ್ಯಾಯ ಮಾಡಿ ನಾನು ಗಳಿಸುವಂತದ್ದೇನಿಲ್ಲ. ಈಗ ಪ್ರಕರಣ ದಾಖಲಾಗಿದೆ, ಮುಂದೆ ಕಾನೂನು ಪ್ರಕಾರವೇ ನಡೆಯಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರು ತಿಳಿಸಿದ್ದಾರೆ.