ಬೆಳ್ತಂಗಡಿ| ತುಂಬು ಗರ್ಭಿಣಿಗೆ ಸಹಾಯ, ಕಾರಿನಲ್ಲೇ ಹೆರಿಗೆ
ಜಮಾಲ್ ಕರಾಯ
ಬೆಳ್ತಂಗಡಿ: ಅಗತ್ಯ ಕೆಲಸದ ನಿಮಿತ್ತ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜಮಾಲ್ ಕರಾಯ ಎಂಬವರು ಹೆರಿಗೆ ಬೇನೆಯಿಂದ ಚಡಪಡಿಸುತ್ತಿದ್ದ ಮಹಿಳೆಯೊಬ್ಬರಿಗೆ ಸ್ಪಂದಿಸುವ ಮೂಲಕ ಅವರ ಕಾರಿನಲ್ಲೇ ಮಹಿಳೆಗೆ ಹೆರಿಗೆಯಾದ ಘಟನೆ ಮಂಗಳವಾರ ನಡೆದಿದೆ.
ಜಮಾಲ್ ಅವರ ಕಾರಿನಲ್ಲೇ ಹೆರಿಗೆಯಾಗಿರುವ ಮಹಿಳೆ ಮತ್ತು ಮಗು ಇಬ್ಬರೂ ಆರೋಗ್ಯವಂತರಾಗಿದ್ದು ಬೆಳ್ತಂಗಡಿ ಸಾರ್ವಜನಿಕ ಸಮುದಾಯ ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದಾರೆ.
ಸುನ್ನತ್ಕೆರೆ ನಿವಾಸಿ ಇಕ್ಬಾಲ್ ಎಂಬವರ ಪತ್ನಿ ಸಫಿಯಾ ಅಳದಂಗಡಿ ಅವರು ಹೆರಿಗೆ ನೋವಿನೊಂದಿಗೆ ರಸ್ತೆ ಬದಿನಿಂತುಕೊಂಡಿದ್ದರು. ಇದನ್ನು ಗಮನಿಸಿದ ಜಮಾಲ್ ತನ್ನ ಕಾರನ್ನು ತಿರುಗಿಸಿ ಬಂದು ವಿಚಾರಿಸಿದರು. ದಂಪತಿಯ ಸಂಕಷ್ಟ ಅರಿತ ಅವರು ತನ್ನ ಪ್ರಯಾಣ ಮೊಟಕುಗೊಳಿಸಿ ತಕ್ಷಣ ಮಹಿಳೆಯನ್ನು ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅದಾಗಲೇ ಸಫಿಯಾ ಅವರಿಗೆ ಕಾರಿನಲ್ಲೇ ಹೆರಿಗೆಯಾಗಿದೆ.
ಪ್ರಸವದ ವೇಳೆ ಪತಿ ಇಕ್ಬಾಲ್ ಮತ್ತು ಜಮಾಲ್ ಮಹಿಳೆಗೆ ತುರ್ತು ಸ್ಪಂದಿಸಿದ್ದು ಬಳಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಇದೀಗ ಜಮಾಲ್ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.