ಮನಪಾ| ನಕಲಿ ಪರವಾನಿಗೆ, ಬಿಲ್ ಪಾವತಿ ದಂಧೆ ಆರೋಪ; ದಾಖಲೆಗಳ ಪರಿಶೀಲನೆಗೆ ಸೂಚನೆ
ಮಂಗಳೂರು: ಉದ್ದಿಮೆ ಪರವಾನಿಗೆ ಅಥವಾ ತೆರಿಗೆ ಶುಲ್ಕಗಳನ್ನು ಪಾವತಿಗೆ ಸಂಬಂಧಿಸಿ ನಕಲಿ ದಾಖಲೆ ಗಳನ್ನು ಸೃಷ್ಟಿಸಿ ವಂಚನೆ ನಡೆಸುತ್ತಿರುವ ಪ್ರಕರಣಗಳು ಗಮನಕ್ಕೆ ಬಂದಿದ್ದು, ಸಾರ್ವಜನಿಕರು ಈ ಬಗ್ಗೆ ಗಮನ ಹರಿಸಿ ತಮ್ಮ ದಾಖಲೆಗಳ ನೈಜತೆಯನ್ನು ಪರಿಶೀಲಿಸಿ ಖಾತರಿಪಡಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಇಬ್ಬರು ಉದ್ಯಮಿಗಳಿಗೆ ನಕಲಿ ಉದ್ದಿಮೆ ಪರವಾನಿ ನೀಡಿ ವಂಚಿಸಿರುವ ಬಗ್ಗೆ ಪಾಲಿಕೆ ಈಗಾಗಲೇ ದಲ್ಲಾಳಿಯೊಬ್ಬರ ವಿರುದ್ಧ ದೂರು ದಾಖಲಿಸಿದೆ. ನಗರದ ಬಜಾಲ್ನ ಉದ್ಯಮಿಯೊಬ್ಬರಿಗೆ ಕಾನೂನು ಪ್ರಕ್ರಿ ಯೆಗೆ ಸಂಬಂಧಿಸಿ 15 ವರ್ಷಗಳ ಉದ್ದಿಮೆ ಪರವಾನಿಗೆ ಪ್ರತಿ ಬೇಕಾಗಿತ್ತು. ಇದಕ್ಕಾಗಿ ಅವರು ಪಾಲಿಕೆಗೆ ಹೋದಾಗ ಪರವಾನಿಗೆ ನವೀಕರಣವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭ ತಮ್ಮಲ್ಲಿದ್ದ ಪರವಾನಿಗೆ ನವೀಕರಣದ ಪ್ರತಿಯನ್ನು ತೋರಿಸಿದಾಗ ಅದು ನಕಲಿ ಎಂಬುದು ತಿಳಿದು ಬಂದಿದೆ. ಉದ್ಯಮಿ ಕೆಲ ದಿನಗಳ ಹಿಂದೆ ದಲ್ಲಾಳಿಯೊಬ್ಬರರ ಮೂಲಕ ಉದ್ದಿಮೆ ಪರವಾನಿಗೆ ನವೀಕರಣ ಮಾಡಿದ್ದರು. ಪಾಲಿಕೆಯಲ್ಲಿ ಪರಿಶೀಲನೆಯ ಸಂದರ್ಭ ಆ ಪರವಾನಿಗೆಯಲ್ಲಿ ಬ್ಯಾಂಕ್ನ ಸೀಲ್ನೊಂದಿಗೆ ಪರವಾನಿಗೆಯನ್ನೇ ಸಂಪೂರ್ಣವಾಗಿ ನಕಲಿಯಾಗಿ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪಾಲಿಕೆಯ ಉಪ ಆಯುಕ್ತೆ (ಕಂದಾಯ) ಅಕ್ಷತಾರವರು ತಿಳಿಸಿದ್ದಾರೆ.
ಸಾರ್ವಜನಿಕರು ಕಚೇರಿ ಸಮಯದಲ್ಲಿ ಪಾಲಿಕೆಯ ಕೇಂದ್ರ ಕಚೇರಿ ಅಥವಾ ವಲಯಕಚೇರಿ ಅಥವಾ ವಾರ್ಡ್ ಕಚೇರಿಗಳನ್ನು ಸಂಪರ್ಕಿಸಿ ತಮ್ಮ ಉದ್ದಿಮೆ ಪರವಾನಿಗೆ ಅಥವಾ ತೆರಿಗೆ ಪಾವತಿಯ ಮಾಹಿತಿ ಯನ್ನು ಖಾತರಿಪಡಿಸಿಕೊಳ್ಳಬಹುದು. ನಕಲಿ ಅಥವಾ ಅನಧಿಕೃತ ದಾಖಲೆ ಕಂಡುಬಂದಲ್ಲಿ ಪಾಲಿಕೆಯ ಈ ಮೇಲಿನ ಕಚೇರಿಗಳಿಗೆ ಸಂಪರ್ಕಿಸಿ ಮಾಹಿತಿ ನೀಡಬಹುದು. ಮಧ್ಯವರ್ತಿ ಅಥವಾ ಇತರರನ್ನು ಅವಲಂ ಬಿಸದೆ ಸಾರ್ವಜನಿಕರು ನೇರವಾಗಿ ಶುಲ್ಕ ಪಾವತಿ ಅಥವಾ ಪರವಾನಿಗೆ ಪಡೆಯುವ ತಂತ್ರಾಂಶಗಳನ್ನು ಉಪಯೋಗಿಸಿ ನಿಗದಿತ ಸೌಲಭ್ಯಗಳನ್ನು ನಿಯಮಾನುಸಾರ ಪಡೆಯಬಹುದು. ಪಾಲಿಕೆಯ ಕಂಟ್ರೋಲ್ ರೂಂನಿಂದಲೂ ಮಾಹಿತಿ ಪಡೆಯಬಹುದು ಎಂದು ಪಾಲಿಕೆಯ ಆಯುಕ್ತರು ಸಲಹೆ ನೀಡಿದ್ದಾರೆ.
‘ಈ ನಕಲಿ ಉದ್ದಿಮೆ ಪ್ರಕರಣದ ಪರಿಶೀಲನೆ ನಡೆಸಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇಂತಹ ಎರಡು ಪ್ರಕರಣಗಳು ಬೆಳಕಿಗೆ ಬಂದಿದೆ. ಪಾಲಿಕೆಯ ಆಯುಕ್ತರ ಸೂಚನೆಯ ಮೇರೆಗೆ ಈಗಾಗಲೇ ಇಂತಹ ನಕಲಿ ಪರವಾನಿಗೆ ಕುರಿತಂತೆ ಪರಿಶೀಲನೆ ಕಾರ್ಯವನ್ನು ನಡೆಸಲಾಗುತ್ತಿದ್ದು, ಸಾರ್ವಜನಿಕರು ತಮ್ಮ ದಾಖಲೆಯನ್ನು ಪರಿಶೀಲಿಸಿಕೊಕ್ಳುವುದು ಸೂಕ್ತ. ತೆರಿಗೆ ಪಾವತಿ ಅಥವಾ ಉದ್ದಿಮೆ ಪರವಾನಿಗೆ ಯನ್ನು ಸಹ ಆನ್ಲೈನ್ ಮೂಲಕ ಖುದ್ದಾಗಿ ಸಾರ್ವಜನಿಕರು ಪಡೆಯಬಹುದಾಗಿದ್ದರಿಂದ ಮಧ್ಯವರ್ತಿಗಳು ಅಥವಾ ದಲ್ಲಾಳಿಗಳಿಂದ ದೂರ ಉಳಿಯಬೇಕು’.
*ಅಕ್ಷತಾ ಎಂ., ಉಪ ಆಯುಕ್ತರು (ಕಂದಾಯ), ಮನಪಾ