ಪುತ್ತೂರು| ಆರೋಪಿ ಶ್ರೀಕೃಷ್ಣ ರಾವ್ ಜೊತೆ ಆರ್ಯಾಪು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರ ಫೋಟೊ ವೈರಲ್
ವೈರಲ್ ಫೋಟೊ
ಪುತ್ತೂರು: ಮದುವೆ ಆಗುವುದಾಗಿ ನಂಬಿಸಿ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಆಕೆ ಗರ್ಭಿಣಿಯಾದ ನಂತರ ತಲೆಮರೆಸಿಕೊಂಡಿರುವ ಆರೋಪಿ ಶ್ರೀಕೃಷ್ಣ ಜೆ. ರಾವ್ ಎಂಬಾತ ಪುತ್ತಿಲ ಪರಿವಾರದ ಕಾರ್ಯಕರ್ತ ಹಾಗೂ ಆರ್ಯಾಪು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರ ಜೊತೆಗಿರುವ ಸೆಲ್ಫಿ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಎಂಬವರ ಪುತ್ರ ಆರೋಪಿ ಕೃಷ್ಣ ಜೆ ರಾವ್ ಎಂಬಾತನ ಜೊತೆಗೆ ಪುತ್ತಿಲ ಪರಿವಾರದ ಕಾರ್ಯಕರ್ತ, ಆರ್ಯಾಪು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಪ್ರಜ್ವಲ್ ಘಾಟೆ ಕಾರಿನಲ್ಲಿ ಕುಳಿತುಕೊಂಡು ತೆಗೆದಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರಿನಲ್ಲಿ ಪುತ್ತಿಲ ಪರಿವಾರದ ಕಾರ್ಯಕರ್ತ ಹಾಗೂ ಆರ್ಯಾಪು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಪ್ರಜ್ವಲ್ ಘಾಟೆ ಜೊತೆಗಿರುವುದು ಫೋಟೊದಲ್ಲಿ ಕಂಡು ಬಂದಿದೆ. ಇದು ಪ್ರಜ್ವಲ್ ಘಾಟೆ ಸೆಲ್ಫಿ ತೆಗೆದಿರುವ ಫೋಟೊ. ಕಾರಿನ ಮುಂಭಾಗದಲ್ಲಿ ಪ್ರಜ್ವಲ್ ಘಾಟೆ ಕುಳಿತಿದ್ದು, ಹಿಂಭಾಗದಲ್ಲಿ ಆರೋಪಿ ಕೃಷ್ಣ ರಾವ್ ಕುಳಿತಿರುವುದು ಕಂಡು ಬರುತ್ತಿದೆ.
ಸಂತ್ರಸ್ತೆ ಯುವತಿ ದೂರು ನೀಡಿರುವ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ ಕೃಷ್ಣ ಜೆ ರಾವ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ ಸೆಲ್ಫಿ ಫೋಟೊ ವೈರಲ್ ಆಗಿದೆ.
"ಇಂದು ಬೆಳಗ್ಗಿನಿಂದ ನನ್ನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು 2023ರ ಎಪ್ರಿಲ್ ತಿಂಗಳ ಚುನಾವಣೆಯ ಸಂದರ್ಭದಲ್ಲಿ ನಾನೇ ತೆಗೆದ ಫೋಟೊ. ಬಿಜೆಪಿ ಮುಖಂಡನ ಪುತ್ರನ ಅತ್ಯಾಚಾರ, ವಂಚನೆ ಪ್ರಕರಣಕ್ಕೆ ಈ ಫೋಟೊವನ್ನು ಲಿಂಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ. ಇದು ನನಗೆ ತುಂಬಾ ಬೇಸರ ತಂದಿದೆ. ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಹಾಗು ಪೊಲೀಸರ ಯಾವುದೇ ತನಿಖೆಗೆ ನಾನು ಸಿದ್ಧನಿದ್ದೇನೆ" ಎಂದು ಪುತ್ತಿಲ ಪರಿವಾರದ ಕಾರ್ಯಕರ್ತ ಹಾಗೂ ಆರ್ಯಾಪು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಪ್ರಜ್ವಲ್ ಘಾಟೆ ತಿಳಿಸಿದ್ದಾರೆ.