×
Ad

ಕರಾವಳಿಯ ಕೋಮವಾದದ ಬಿಡುಗಡೆಗೆ ನಾರಾಯಣ ಗುರುಗಳ ಸಂದೇಶ ಒಂದೇ ಮಾರ್ಗ: ಬಿ.ಕೆ. ಹರಿಪ್ರಸಾದ್

Update: 2025-07-13 18:32 IST

ಮಂಗಳೂರು: ಕೇರಳವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಹೇಗೆ ನಾರಾಯಣಗುರುಗಳ ಚಿಂತನೆಗಳು ಬುನಾದಿಯಾಯಿತೋ, ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲಿ ಮಾದರಿಯಾಗಿರುವ ಕರಾವಳಿಯ ಜಿಲ್ಲೆಗಳನ್ನು ಇಂದಿನ ಕೋಮುವಾದದಿಂದ ಬಿಡುಗಡೆಗೊಳಿಸಿ ಸಹಬಾಳ್ವೆ, ಸಹೋದರತೆ ಹಾಗೂ ಭ್ರಾತೃತ್ವದಿಂದ ಬದುಕುವಂತೆ ಮಾಡಲು ನಾರಾಯಣ ಗುರುಗಳ ಸಂದೇಶ ಒಂದೇ ಮಾರ್ಗ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ನಗರದ ಶ್ರೀಗೋಕರ್ಣನಾಥೇಶ್ವರ ಕಾಲೇಜು ಸಭಾಂಗಣದಲ್ಲಿ ರವಿವಾರ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಶ್ರೀಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳು ಗಾಂಧಿನಗರ, ಹಾಗೂ ಶ್ರೀ ನಾರಾಯಣ ಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ.) ಮಂಗಳೂರು ಇವುಗಳ ಸಹಯೋಗದೊಂದಿಗೆ ಆಯೋಜಿಸಲಾದ ‘ವರ್ತಮಾನ ಕಾಲ ಘಟ್ಟದಲ್ಲಿ ಶ್ರೀ ನಾರಾಯಣ ಗುರುಗಳ ಸಂದೇಶ - ಪ್ರಸ್ತುತತೆ (ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಪ್ರಗತಿ) ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಹಿಂದೂ ಧರ್ಮದಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸಲು ಹೊರಟ ಸ್ವಾಮಿ ವಿವೇಕಾನಂದರೇ ಕೇರಳ ರಾಜ್ಯ ಒಂದು ಹುಚ್ಚಾಸ್ಪತ್ರೆ ಎಂದು ತೀರ್ಮಾನಕ್ಕೆ ಬಂದಿದ್ದರು. ಆದರೆ ಅಂತಹ ಹುಚ್ಚಾಸ್ಪತ್ರೆ ಯನ್ನು ಇಂದು ಇಡೀ ದೇಶಕ್ಕೆ ಮಾದರಿಯಾದ ರಾಜ್ಯವನ್ನಾಗಿ ಮಾಡಲು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ದೇಶಕ್ಕೆ ಮೊದಲ ಸ್ಥಾನದಲ್ಲಿರಲು ಸಾಧ್ಯವಾಗಿದ್ದು ಶ್ರೀ ನಾರಾಯಣಗುರುಗಳ ಸಾಮಾಜಿಕ ಚಳವಳಿ ಹಾಗೂ ಅವರು ಪ್ರತಿಪಾದಿಸಿದ ಸಿದ್ಧಾಂತದಿಂದ ಎನ್ನುವುದು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಶ್ರೀ ನಾರಾಯಣಗುರು ನಡೆದಾಡಿದ ದಕ್ಷಿಣ ಕನ್ನಡ ಹಾಗೂ ಕರಾವಳಿಯ ನೆಲದಲ್ಲಿ ನೆಲ ಇಂದು ದ್ವೇಷ, ಅಸೂಯೆ, ಅಸಹಕಾರಕ್ಕೆ ಕೇಂದ್ರ ಬಿಂದುವಾಗಿರುವುದು ಅತ್ಯಂತ ನೋವಿನ ಸಂಗತಿ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಇದ್ದರೆ ಧರ್ಮದ ಅಮಲಿನಿಂದಾಗಿ ಕರಾವಳಿಯೂ ಕೂಡ ಮುಂದೊಂದು ದಿನ ಹುಚ್ಚಾಸ್ಪತ್ರೆಯಾಗಬಹುದು ಎಂದು ಎಚ್ಚರಿಸಿದರು.

ಕರಾವಳಿಯ ಸೌಹಾರ್ದತೆಗೆ ನಾವು ಒತ್ತುಕೊಡಬೇಕಾದ್ರೆ ನಾರಾಯಣಗುರುಗಳ ವಿಚಾರವಂತಿಕೆ ಹಾಗೂ ಅವರು ಪ್ರತಿಪಾದಿಸಿದ ಸಿದ್ಧಾಂತವನ್ನು ಹೆಚ್ಚು ಅಳವಡಿಸಿಕೊಳ್ಳುತ್ತಾ ಜೀವಂತವಾಗಿರಿಸಬೇಕಿದೆ. ಅಂತಹ ನಿಟ್ಟಿನಲ್ಲಿ ಈ ವಿಚಾರ ಸಂಕಿರಣಗಳು, ಚರ್ಚೆಗಳು, ಹೆಚ್ಚೆಚ್ಚು ನಡೆಯಲಿ ಎಂದು ಆಶಿಸಿದರು.

ಪ್ರತಿಪಾದಿಸಿದ ಸಿದ್ಧಾಂತಕ್ಕೆ ಕೊನೆ ಇಲ್ಲ: ವ್ಯಕ್ತಿಗೆ ಕೊನೆ ಇದೆ, ಆದರೆ ಅವರ ವಿಚಾರಧಾರೆ, ಅವರು ಪ್ರತಿಪಾದಿಸಿದ ಸಿದ್ಧಾಂತಕ್ಕಲ್ಲ. ಶ್ರೀ ನಾರಾಯಣಗುರುಗಳು ತಮ್ಮ ಬದುಕಿನ 5 ದಶಕಗಳ ಶತ ಶತಮಾನಗಳ ಶೋಷಣೆ, ಅಸಮಾನತೆ, ಹಾಗೂ ಸಮಾನ ಪ್ರಾತಿನಿಧ್ಯ ಇಲ್ಲದ ಸಮಾಜವನ್ನು ಯಶಸ್ವಿಯಾಗಿ ಸರಿ ಪಡಿಸಲು ಇರುವ ದಾರಿ ಸಾಮಾಜಿಕ ನ್ಯಾಯದಿಂದ ಮಾತ್ರ ಸಾಧ್ಯ. ಬುದ್ದ, ಬಸವಣ್ಣ, ನಾರಾಯಣ ಗುರುಗಳ ಸಾಮಾಜಿಕ ಸುಧಾರಣಾ ಚಳುವಳಿಯಲ್ಲಿ ಪ್ರಭಲವಾಗಿ ಪ್ರತಿಪಾದಿಸಿದ್ದು ಕೂಡ ಸಾಮಾಜಿಕ ನ್ಯಾಯವನ್ನೇ ಎಂಬುದನ್ನು ಅರ್ಥ ಮಾಡಿಕೊಂಡರೆ ಮಾತ್ರ ಈಗಿನ ಪ್ರಸ್ತುತತೆಯಲ್ಲಿ ನಾರಾಯಣ ಗುರುಗಳನ್ನು ನೋಡುವ ದೃಷ್ಟಿಕೋನಕ್ಕೆ ಅರ್ಥ ಸಿಗುತ್ತದೆ ಎಂದರು.

ನಾರಾಯಣ ಗುರುಗಳು ದೇವಸ್ಥಾನಕ್ಕೆ ಪ್ರವೇಶ ನೀಡಿದ ಶೋಷಿತ, ಹಿಂದುಳಿದ ಸಮುದಾಯಗಳಿಗೆ ಪ್ರತ್ಯೇಕ ದೇವಸ್ಥಾನವನ್ನು ಕಟ್ಟುವ ಮೂಲಕ ಪಟ್ಟಭದ್ರಹಿತಾಸಕ್ತಿಗಳಿಗೆ ಸವಾಲು ಎಸೆದರು. ದೇವಸ್ಥಾನಗಳ ಭಕ್ತಿ ಪೀಠವಾಗುವದರ ಜೊತೆಯಲ್ಲಿ ಅಧ್ಯಯನ ಕೇಂದ್ರವಾಗಬೇಕು. ಪೂಜೆ-ಹವನ-ಹೋಮಗಳಲ್ಲಿ ಮುಳುಗಿ ವ್ಯಾಪಾರಿ ಕೇಂದ್ರಗಳಾಗುವ ಬದಲಿಗೆ ದೇವಾಲಯಗಳು ಸಾಮೂಹಿಕ ಪ್ರಾರ್ಥನಾ ಮಂದಿರವಾಗಿ ಉಳಿಸಬೇಕೆಂದು ಅವರು ಬಯಸಿದ್ದರು ಎಂದರು.

ದೇವಸ್ಥಾನ ಪ್ರವೇಶಕ್ಕೆ ಅವರು ಹೋರಾಟ ನಡೆಸಲಿಲ್ಲ. ಬದಲಿಗೆ ಅವರೇ ದೇವಸ್ಥಾನಗಳನ್ನು ಸ್ಥಾಪಿಸಿದರು. ಆದರೆ, ಶಾಲೆಗಳ ಸ್ಥಾಪನೆಗೆ ಆಡಳಿತದ ಅನುಮತಿ ಬೇಕಿತ್ತು. ಅದಕ್ಕಾಗಿ ಸರಕಾರಿ ಶಾಲೆಗಳ ಪ್ರವೇಶದ ಹಕ್ಕಿನ ಹೋರಾಟಕ್ಕೆ ಅವರು ಚಾಲನೆ ನೀಡಿದರು.

ಕೇರಳದಲ್ಲಿ ಇಂದಿಗೂ ಕೂಡ ಶೋಷಿತ ಸಮುದಾಯಗಳನ್ನು ಒಡೆದಾಳುವುದು ಅಷ್ಟು ಸುಲಭವಾಗಿಲ್ಲ. ಹಿಂದುಳಿದ ಜಾತಿಗಳಲ್ಲಿಯೇ ಇಂದು ಅಧಿಕಾರ ಗಟ್ಟಿಯಾಗಿದೆ. ಕೇರಳದಲ್ಲಿ ಇಂದಿಗೂ ಕೂಡ ಧರ್ಮ ರಾಜಕೀಯವನ್ನು ದುರಪಯೋಗ ಮಾಡಿಕೊಳ್ಳಲು ಸಾಧ್ಯವಾಗದೆ ಇರುವುದುಕ್ಕೆ ಮೂಲ ಕಾರಣವೇ ರಾಜಕೀಯದ ಪ್ರಜ್ಞೆಯನ್ನು ಜೀವಂತವಾಗಿಸಿದ ನಾರಾಯಣಗುರುಗಳ ಚಿಂತನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ನಾರಾಯಣ ಗುರುವನ್ನು ಓದುವಾಗ ಆಗಿನ ಕೇರಳದ ಪರಿಚಯವಾಗುತ್ತದೆ. ಗುರುಗಳನ್ನು ಇಂದಿನ ಕಾಲಘಟ್ಟಕ್ಕೆ ತರಬೇಕಾದರೆ ನಮ್ಮಲ್ಲಿ ಧೈರ್ಯ ಬೇಕು. ಗೌತಮ ಬುದ್ಧ ಹೇಳಿದ್ದ ಮಾತು ‘ಆಸೆಯೆ ದುಃಖಕ್ಕೆ ಕಾರಣ’ ಎನ್ನುವುದನ್ನು ನಿರಂತರವಾಗಿ ಬಳಸುತ್ತಿದ್ದರು ಎಂದರು.

ನಾರಾಯಣ ಗುರುಗಳು ಸಮಯಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಸಮಯವನ್ನು ವ್ಯರ್ಥ ಮಾಡಿದವರಲ್ಲ . ಸರಳತೆ ನಮ್ಮ ಬದುಕಿನ ಭಾಗವಾಬೇಕು ಎಂದು ಸರಳತೆ, ಶಾಂತಿ ಮಂತ್ರವಾದರೆ ಗುರು ಸ್ವಾಮಿಯನ್ನು ಅರ್ಥಮಾಡಿಕೊಳ್ಳಬಹುದು ಎಂದರು.

ಯಾರನ್ನು ವಿರೋಧ ಮಾಡಿದವರಲ್ಲ, ಶಿಕ್ಷಣ, ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರು. ಬದುಕಿನ ಶಿಕ್ಷಣ ಹೇಳಿಕೊಡುತ್ತಿದ್ದರು ಎಂದರು.

ಮುಖ್ಯ ಅತಿಥಿಯಾಗಿದ್ದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಅವರು ನಾರಾಯಣ ಗುರುಗಳ ವಿಚಾರ ಜಗತ್ತಿಗೆ ಅನಿವಾರ್ಯವಾಗಿದೆ. ಅಂಬೇಡ್ಕರ್ ಅವರಿಗೆ ನಾರಾಯಣ ಗುರುಗಳು ಸ್ಫೂರ್ತಿಯಾಗಿದ್ದರು ಎಂದು ಹೇಳಿದರು. ಶಾಲಾ ಕಾಲೇಜುಗಳಲ್ಲಿ ನಾರಾಯಣ ಗುರುಗಳ ಜನ್ಮದಿನ ಆಚರಣೆಯನ್ನು ಸರಕಾರ ಕಡ್ಡಾಯಗೊಳಿಬೇಕು ಎಂದರು.

ಸಂಘರ್ಷ ರಹಿತ ಹೋರಾಟ ನಾರಾಯಣ ಗುರುಗಳದಾಗಿತ್ತು. ದೇವಸ್ಥಾನದೊಟ್ಟಿಗೆ ಶಿಕ್ಷಣ ಸಂಸ್ಥೆ , ಮಹಿಳಾ ಸಬಲೀಕರಣ, ಉದ್ಯಮಕ್ಕೆ ಪ್ರೋತ್ಸಾಹ ನೀಡಿದರು. ಅವರ ವಿಚಾರಧಾರೆ ಗಳು ಜನತೆ ಮುಟ್ಟಬೇಕು ಎಂದು ಹೇಳಿದರು.

ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್ ಆರ್ಕಿಟೆಕ್ ಅವರು ಜಗತ್ತಿನ ಸಂತ,ತತ್ವಜ್ಞಾನಿ ಇದ್ದರೆ ಅದು ನಾರಾಯಣ ಗುರು.ಅವರು ಮಾನವ ಕುಲಕ್ಕೆ ಗುರುವಾಗಿದ್ದಾರೆ. ನಾವು ನಾರಾಯಣ ಗುರುಗಳ ಬಗ್ಗೆ ಪರಿಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ. ಮನನಮನೆಗೆ ಅವರ ವಿಚಾರಧಾರೆಗಳು ಮುಟ್ಟಬೇಕು. ಎಲ್ಲ ಕಾಲೇಜು ಗಳಲ್ಲಿ ಅಧ್ಯಯನ ಪೀಠದ ಮೂಲಕ ವಿಚಾರ ಸಂಕಿರಣ ನಡೆಯಬೇಕು ಎಂದು ಹೇಳಿದರು.

ವೆಂಕಟೇಶ ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷರಾದ ಶೇಖರ್ ಪೂಜಾರಿ ಮತ್ತು ಡಾ. ಬಿ.ಜಿ. ಸುವರ್ಣ, ಶ್ರೀ ನಾರಾಯಣ ಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ) ಅಧ್ಯಕ್ಷ ಹರೀಶ್ ಕೆ. ಪೂಜಾರಿ, ಶ್ರೀ ಗೋಕರ್ಣನಾ ಥೇಶ್ವರ ಪದವಿ ಕಾಲೇಜು ಪ್ರಾಂಶುಪಾಲ ಡಾ. ಜಯಪ್ರಕಾಶ್, ಶ್ರೀ ಗೋಕರ್ಣನಾಥೇಶ್ವರ ಪ.ಪೂ ಕಾಲೇಜು ಪ್ರಾಂಶುಪಾಲ ರಘುರಾಜ್ ಕದ್ರಿ, ಶ್ರೀ ಗೋಕರ್ಣನಾಥೇಶ್ವರ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಉದಯ ಕುಮಾರ್ ಬಿ, ಶ್ರೀ ನಾರಾಯಣ ಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ.) ಸಂಚಾಲಕ ರಾಮಚಂದ್ರ ಪೂಜಾರಿ, ಶ್ರೀಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯ ಸಂಚಾಲಕ ವಸಂತ ಕಾರಂದೂರು ಉಪಸ್ಥಿತರಿದ್ದರು.

ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಡಾ. ಜಯರಾಜ್.ಎನ್ ಸ್ವಾಗತಿಸಿದರು, ಉಪನ್ಯಾಸಕಿ ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.









Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News