×
Ad

ಹಿಂಜಾವೇ ಮುಖಂಡ ಸಮಿತ್‌ರಾಜ್ ದರೆಗುಡ್ಡೆ ಪ್ರಕರಣಗಳ ಎಸ್‌ಐಟಿ ತನಿಖೆಗೆ ಒತ್ತಾಯ: ಮೂಡುಬಿದಿರೆ ಬ್ಲಾಕ್‌ ಕಾಂಗ್ರೆಸ್‌ ನಿಂದ ಹಕ್ಕೊತ್ತಾಯ ಸಭೆ

Update: 2025-07-15 19:50 IST

ಮೂಡುಬಿದಿರೆ: ಅಶ್ಲೀಲ ವಿಡಿಯೋಗಳನ್ನು ಮೊಬೈಲ್‌ನಲ್ಲಿ ಶೇಖರಿಸಿ ಬ್ಲಾಕ್‌ಮೇಲ್ ತಂತ್ರಗಾರಿಕೆ ನಡೆಸುತ್ತಿದ್ದ ಆರೋಪಿ ಹಿಂದೂ ಜಾಗರಣ ವೇದಿಕೆ ಮುಖಂಡ ಸಮಿತ್‌ರಾಜ್ ದರೆಗುಡ್ಡೆ ಪ್ರಕರಣಗಳನ್ನು ಎಸ್‌ಐಟಿ ತನಿಖೆಗೆ ನೀಡಬೇಕೆಂದು ಆಗ್ರಹಿಸಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಜೀವ್ ಗಾಂಧಿ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಮಂಗಳವಾರ ಹಕ್ಕೊತ್ತಾಯ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು, ಮೊಬೈಲ್‌ನಲ್ಲಿ ಹಿಂದೂ ಹೆಣ್ಣು ಮಕ್ಕಳ, ವಿದ್ಯಾರ್ಥಿಗಳ 50 ಅಶ್ಲೀಲ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿರುವ ಹಿಂದೂ ಜಾಗರಣ ವೇದಿಕೆಯ ಮುಖಂಡನಾಗಿ ಗುರುತಿಸಿಕೊಂಡಿರುವ ಸಮಿತ್ ರಾಜ್ ದರೆಗುಡ್ಡೆ ವಿರುದ್ಧ ಜನರು ಜಾಗೃತರಾಗಬೇಕು. 21 ಕ್ರಿಮಿನಲ್ ದಾಖಲೆ ಹೊಂದಿರುವ ಈ ರೌಡಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ಬೆಂಬಲಿಸಿ ಪೊಲೀಸ್ ಠಾಣೆಯಿಂದ ಕರೆದೊಯ್ದ ಇತಿಹಾಸವೂ ಇದೆ. ಸಮಿತ್‌ರಾಜ್ ದರೆಗುಡ್ಡೆ ಮೂಲಕ ದೌರ್ಜನ್ಯಕ್ಕೊಳಗಾದ ಅಮಾಯಕರು, ಸಂತ್ರಸ್ಥರು, ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಿದ್ದಲ್ಲಿ ನ್ಯಾಯ ಕೊಡುವುದಾಗಿ ಅವರು ಭರವಸೆ ನೀಡಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಮಾತನಾಡಿ, ಹಿಂದೂ ಸಂಘಟಕ ಎಂದು ಪೋಸ್ ನೀಡುತ್ತಿರುವ ಸಮಿತ್‌ರಾಜ್ ಮಹಿಳೆಯರ ಮಾನಹಾನಿ, ಹಪ್ತಾ ವಸೂಲಿ ದಂಧೆಯಲ್ಲಿ ತೊಡಗಿಸಿಕೊಂಡಿ ದ್ದಾನೆ. ಮೂಡುಬಿದಿರೆ ಮಾರುಕಟ್ಟೆ ಒಳಗುತ್ತಿಗೆದಾರನಾಗಿ ಬಡ ವ್ಯಾಪಾರಸ್ಥರಿಂದ ಹೆಚ್ಚುವರಿ ದರ ವಸೂಲಿಗೆ ಇಳಿದಾಗ ತಾನು ಮುಂದೆ ನಿಂತು ಪ್ರತಿಭಟಿಸಿ ಆತನ ಮಾರ್ಕೇಟ್ ಗುತ್ತಿಗೆಯನ್ನು ರದ್ದುಪಡಿಸಿದ್ದೆ. ತಾನು ಮೂಡುಬಿದಿರೆಯಲ್ಲಿ ಇರುವ ತನಕ ಹಪ್ತಾ ವಸೂಲಿಗೆ ಅವಕಾಶ ನೀಡುವುದಿಲ್ಲ. ಇಲ್ಲಿಯ ಜನರಿಗೆ ಬೆಂಬಲವಾಗಿ ನಿಂತು ನ್ಯಾಯ ಒದಗಿಸಿಕೊಡಲಿದ್ದೇನೆ ಎಂದು ಅವರು ನುಡಿದರು.

ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ಸಮಿತ್‌ರಾಜ್ ಅಶ್ಲೀಲ ವಿಡಿಯೋಗಳ ತನಿಖೆಗೆ ಆಗ್ರಹಿಸಿ ಇಲ್ಲಿಯ ಶಾಸಕರು ರಾಜ್ಯದ ಗೃಹ ಸಚಿವರಿಗೆ ಪತ್ರದ ಮೂಲಕ ಒತ್ತಾಯಿಸಬೇಕು. ಅಶ್ಲೀಲ ವೀಡಿಯೊ ಇಟ್ಟುಕೊಂಡವ ರಾಜಕೀಯ ದ್ರೋಹಿ ಮಾತ್ರವಲ್ಲ ಆತ ಸಮಾಜ ದ್ರೋಹಿಯೂ ಹೌದು. ಈ ಸಂದರ್ಭದಲ್ಲಿ ಬಿಜೆಪಿ, ಸಂಘಪರಿವಾರ ನೈತಿಕತೆ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.

ಹಕ್ಕೊತ್ತಾಯ ಸಭೆಯಲ್ಲಿ ಮೂಡುಬಿದಿರೆ ಬ್ಲಾಕ್ ಅಧ್ಯಕ್ಷ ಎಸ್. ಪ್ರವೀಣ್ ಕುಮಾರ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ, ಯುವ ಅಧ್ಯಕ್ಷ ಅನೀಶ್, ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಅರುಣ್ ಶೆಟ್ಟಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಕಾಂಗ್ರೆಸ್ ಪ್ರಮುಖರಾದ ವಸಂತ ಬೆರ್ನಾರ್ಡ್, ಚಂದ್ರಹಾಸ ಸನಿಲ್, ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News