×
Ad

ಕಾಲೇಜು ವಿದ್ಯಾರ್ಥಿಗಳಿಗೆ ತುಳು ಸಾಹಿತ್ಯ ಪರಿಚಯ ಮೂಡಿಸುವುದು ಅಗತ್ಯ: ಮುದ್ದು ಮೂಡುಬೆಳ್ಳೆ

Update: 2025-07-31 19:45 IST

ಮಂಗಳೂರು: ಕಾಲೇಜು ವಿದ್ಯಾರ್ಥಿಗಳಲ್ಲಿ ತುಳು ಸಾಹಿತ್ಯ ಓದಿನ ಅಭಿರುಚಿ ಮೂಡಿಸುವ ಕೆಲಸ ಅಗತ್ಯವಾಗಿ ನಡೆಯಬೇಕಾಗಿದೆ ಎಂದು ಲೇಖಕ ಹಾಗೂ ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಮುದ್ದು ಮೂಡುಬೆಳ್ಳೆ ಹೇಳಿದರು.

ನಗರದ ಉರ್ವಸ್ಟೋರ್ ತುಳು ಭವನದಲ್ಲಿ ತುಳು ಸಾಹಿತ್ಯ ಅಕಾಡಮಿ ಹಾಗೂ ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಗುರುವಾರ ನಡೆದ ’ಅಕಾಡಮಿಡ್ ಒಂಜಿ ದಿನ: ಬಲೆ ತುಳು ಓದುಗ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತುಳುವಿನಲ್ಲಿ ಅಪಾರವಾದ ಜಾನಪದ ಸಾಹಿತ್ಯ ಇದೆ. ಎದುರುಕತೆ, ಪಾಡ್ದನ, ಉರಲ್, ಜನಪದ ಕಥೆಗಳು ಇತ್ಯಾದಿಗಳು ಇದಕ್ಕೆ ನಿದರ್ಶನವಾಗಿದೆ. ಸಾಹಿತ್ಯದ ಎಲ್ಲಾ ಪ್ರಕಾರಗಳ ಪುಸ್ತಕಗಳೂ ತುಳುವಿನಲ್ಲಿದೆ. ಅವುಗಳನ್ನು ಓದಿ ವಿದ್ಯಾರ್ಥಿಗಳು ತುಳು ಹಾಗೂ ತುಳುನಾಡಿನ ವಿಚಾರಗಳನ್ನು ತಿಳಿದುಕೊಳ್ಳಬಹುದು ಎಂದು ಮುದ್ದು ಮೂಡುಬೆಳ್ಳೆ ಹೇಳಿದರು.

ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಬಾಳ ಮಾತನಾಡಿ ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತುಳುವಿನ ಐದು ಸಾವಿರಕ್ಕೂ ಅಧಿಕ ಪುಸ್ತಕಗಳು ಅಕಾಡಮಿಯ ಗ್ರಂಥಾಲಯದಲ್ಲಿದೆ. ಬೇರೆ ಬೇರೆ ವಿಷಯಗಳನ್ನು ಒಳಗೊಂಡ ಪುಸ್ತಕಗಳಿವೆ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ತುಳು ಪುಸ್ತಕ ಪರಿಚಯ ಮಾಡಿಸಲಾಗುತ್ತಿದೆ ಎಂದರು.

ಉಪನ್ಯಾಸಕಿ ವಿಜಯಲಕ್ಷ್ಮಿ, ವಿದ್ಯಾರ್ಥಿ ಸಂಚಾಲಕಿ ಶ್ರೇಯಾ ಗೌಡ, ರಂಗಕರ್ಮಿ ಜಗನ್ ಪವಾರ್ ಉಪಸ್ಥಿತರಿದ್ದರು. ತುಳು ಅಕಾಡಮಿಯ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News