ಹರೇಕಳ-ಅಡ್ಯಾರ್ ಸೇತುವೆ ಸುತ್ತಮುತ್ತ ಪ್ರವಾಸೋದ್ಯಮಕ್ಕೆ ಆದ್ಯತೆ
ಮಂಗಳೂರು: ವರ್ಷದ ಹಿಂದೆ ಸಾರ್ವಜನಿಕರ ಬಳಕೆಗೆ ಲಭಿಸಿದ ಹರೇಕಳ-ಅಡ್ಯಾರ್ ಸೇತುವೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಜನಾಕರ್ಷಣೆ ಹೆಚ್ಚಿಸಲು ಇದೀಗ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಪ್ರಯತ್ನ ನಡೆದಿದೆ.
ಈ ಸೇತುವೆ ನಿರ್ಮಾಣದ ಬಳಿಕ ನದಿ ತೀರದ ಎರಡೂ ಕಡೆಯ ಸಣ್ಣ ಸಣ್ಣ ಅಂಗಡಿಗಳು, ಹೊಟೇಲ್ಗಳು ಮುಚ್ಚಲ್ಪಟ್ಟಿವೆ. ಅತ್ತಿಂದಿತ್ತ ಜನಸಾಮಾನ್ಯರನ್ನು ಸಾಗಿಸುತ್ತಿದ್ದ ಅಂಬಿಗರ ಉದ್ಯೋಗವನ್ನೂ ಕಸಿಯಲಾಗಿವೆ. ಆದರೆ ಸೇತುವೆಯಿಂದಾಗಿ ಜನ ಸಂಪರ್ಕ ಹೆಚ್ಚಾಗಿದ್ದು, ನದಿಯ ಎರಡೂ ಕಡೆಯ ಜನರಿಗೆ ತುಂಬಾ ಅನುಕೂಲವಾಗಿದೆ. ಪರಿಣಾಮ ದಿನನಿತ್ಯ ವಾಹನಗಳ ಸಂಚಾರದಲ್ಲಿ ಏರಿಕೆ ಕಂಡು ಬಂದಿವೆ. ಜನರ ಓಡಾಟವೂ ಅಧಿಕವಾಗಿದೆ. ಅಲ್ಲದೆ ಸ್ಥಳೀಯವಾಗಿ ಜಮೀನಿನ ಬೆಲೆಯಲ್ಲೂ ಏರಿಕೆ ಕಂಡು ಬಂದಿವೆ. ಇದಕ್ಕೆ ಪೂರಕ ಎಂಬಂತೆ ಸೇತುವೆಯ ಇಕ್ಕಡೆಗಳಲ್ಲಿ ಪ್ರವಾಸೋದ್ಯಮ ಚಿಗುರೊಡೆಯುತ್ತಿವೆ.
ಅಡ್ಯಾರ್ ಬಳಿ ಈ ಹಿಂದೆಯೇ ಬೊಂಡ ಫ್ಯಾಕ್ಟರಿಯೊಂದಿದ್ದು, ಹರೇಕಳ-ಪಾವೂರು ಗ್ರಾಮಗಳ ಜನರಿಗೆ ಅದು ತೀರಾ ಹತ್ತಿರದಲ್ಲಿದ್ದರೂ ಕೂಡ ನದಿ ದಾಟಿ ಅಲ್ಲಿಗೆ ಆಗಾಗ ಹೋಗುವುದು ಸಮಸ್ಯೆಯಾಗಿತ್ತು. ಸೇತುವೆ ನಿರ್ಮಾಣದ ಬಳಿಕ ಈ ಸಮಸ್ಯೆ ನಿವಾರಣೆಯಾಗಿದೆ. ಹೊರ ಊರಿನಿಂದ ಬೊಂಡ ಫ್ಯಾಕ್ಟರಿಗೆ ಬಂದ ಪ್ರವಾಸಿಗರು ಇದೀಗ ಸೇತುವೆಯ ಇಕ್ಕಡೆಗಳಿಗೆ ತೆರಳಿ ವಿಹರಿಸಲು ಆರಂಭಿಸಿದ್ದಾರೆ. ಸಂಜೆಯ ವೇಳೆಗೆ ಪ್ರವಾಸಿಗರು ಇಲ್ಲಿ ವಿಹರಿಸುವುದನ್ನು ಕಾಣಬಹುದಾಗಿದೆ. ಮತ್ಸ್ಯಪ್ರಿಯರು ಗಾಳ ಹಾಕಿ ಮೀನು ಹಿಡಿಯುತ್ತಿರುವ ದೃಶ್ಯವೂ ಇಲ್ಲಿ ಸಾಮಾನ್ಯವಾಗಿದೆ.
ಪಾವೂರು-ಹರೇಕಳ ಕಡವಿನ ಬಳಿ (ನದಿತೀರ)ದಲ್ಲಿ ಹಿಂದೆ ಕ್ರೀಡಾಕೂಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತ್ತಿತ್ತು. ಇದೀಗ ಅದಕ್ಕಿಂತ ಎರಡುಪಟ್ಟು ಕಾರ್ಯಕ್ರಮಗಳು ನಡೆಯುತ್ತಿವೆ. ಆಸುಪಾಸಿನ ಜನರು ಕೂಡ ಭಾರೀ ಸಂಖ್ಯೆಯಲ್ಲಿ ಭಾಗವಹಿಸುವುದನ್ನು ಕಾಣಬಹುದಾಗಿದೆ. ಇದು ಕೂಡ ಪ್ರವಾಸೋದ್ಯಮಕ್ಕೆ ಪೂರಕವಾಗಿ ಪರಿಣಮಿಸಿದೆ.
ಹರೇಕಳ-ಅಡ್ಯಾರ್ ಸೇತುವೆಯು ಹರೇಕಳ-ಪಾವೂರು ಗ್ರಾಮದ ಸೌಂದರ್ಯವನ್ನೂ ಹೆಚ್ಚಿಸಿದೆ ಎನ್ನಬಹುದು. ಅದಕ್ಕೆ ಪೂರಕವಾಗಿ ಪಾವೂರು-ಹರೇಕಳ ಕಡವಿನ ಬಳಿಯಿಂದ ಕೊಜಪಾಡಿವರೆಗಿನ ಸುಮಾರು 600 ಮೀ. ದೂರದವರೆಗೆ ನದಿ ತೀರದಲ್ಲೇ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಮಧ್ಯೆ ಕಿಂಡಿಅಣೆಕಟ್ಟು ಕೂಡ ನಿರ್ಮಾಣವಾಗಲಿದೆ. ಇವೆಲ್ಲವೂ ಕೂಡ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಸಾರ್ವಜನಿಕರಿಗೆ ನಡೆದಾಡಲು ಹಾಗೂ ಲಘು ವಾಹನ ಸಂಚಾರಕ್ಕೆ ಅವಕಾಶ ಸಿಗಲಿದೆ. ಈ ಯೋಜನೆಯು ಯಶಸ್ವಿಯ ಬಳಿಕ ಕಡವಿನ ಬಳಿಯ ನದಿತಟದಿಂದಲೇ ಇನೋಳಿ-ಅಮ್ಮೆಂಬಳ-ಸಜಿಪಕ್ಕೆ ನೇರ ರಸ್ತೆ ನಿರ್ಮಾಣ ಆಗಬೇಕು ಎಂಬ ಇಚ್ಛೆಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
ಹರೇಕಳ-ಪಾವೂರು ಗ್ರಾಮದ ಸನಿಹದಲ್ಲೇ ಹರಿಯುವ ನೇತ್ರಾವದಿಯ ನದಿಯಲ್ಲೇ ಮೂರ್ನಾಲ್ಕು ದ್ವೀಪಗಳು ಕೂಡ ಇದ್ದು, ಪ್ರವಾಸೋದ್ಯಮ ಇಲಾಖೆಯು ಈ ದ್ವೀಪದಲ್ಲಿರುವ ಸರಕಾರಿ ಜಮೀನು ಬಳಸಿಕೊಂಡು ಪ್ರವಾಸಿಕೇಂದ್ರವನ್ನಾಗಿ ರೂಪಿಸಬಹುದು. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಕ್ತ ಮನಸ್ಸು ಮಾಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.