ಎಲ್ಲಾ ಸೇನಾ ನೆಲೆ, ರಕ್ಷಣಾ ವ್ಯವಸ್ಥೆ ಸಂಪೂರ್ಣ ಕಾರ್ಯಾಚರಣೆ ಸ್ಥಿತಿಯಲ್ಲಿದೆ: ವಾಯು ಕಾರ್ಯಾಚರಣೆಯ ಮಹಾ ನಿರ್ದೇಶಕ
ಎ.ಕೆ. ಭಾರ್ತಿ | PC : deccanherald.com \ Reuters Photo
ಹೊಸದಿಲ್ಲಿ: ನಮ್ಮ ಎಲ್ಲಾ ಸೇನಾ ನೆಲೆಗಳು ಹಾಗೂ ರಕ್ಷಣಾ ವ್ಯವಸ್ಥೆಗಳು ಸಂಪೂರ್ಣ ಕಾರ್ಯಾಚರಣೆ ಸ್ಥಿತಿಯಲ್ಲಿ ಮುಂದುವರಿದಿವೆ. ಅಗತ್ಯ ಬಿದ್ದರೆ ಯಾವುದೇ ಕಾರ್ಯಾಚರಣೆ ನಡೆಸಲು ಸಿದ್ಧ ಎಂದು ಭಾರತ ಸೋಮವಾರ ಹೇಳಿದೆ.
ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ವಾಯು ಪಡೆಯ ವಾಯು ಕಾರ್ಯಾಚರಣೆಯ ಮಹಾ ನಿರ್ದೇಶಕ ಏರ್ ಮಾರ್ಷಲ್ ಎ.ಕೆ. ಭಾರ್ತಿ, ಭಾರತೀಯ ಸ್ಥಾಪನೆಗಳನ್ನು ಗುರಿಯಾಗಿರಿಸಿ ದಾಳಿ ನಡೆಸುವ ಪಾಕಿಸ್ತಾನದ ಪ್ರಯತ್ನವನ್ನು ವಾಯು ರಕ್ಷಣಾ ವ್ಯವಸ್ಥೆ ಪರಿಣಾಮಕಾರಿಯಾಗಿ ವಿಫಲಗೊಳಿಸಿದೆ ಎಂದರು.
ಆಕಾಶ್ ವ್ಯವಸ್ಥೆಯಂತಹ ದೇಶಿ ರಕ್ಷಣಾ ಶಸ್ತ್ರಾಸ್ತ್ರ ಅದ್ಭುತ ಕಾರ್ಯಕ್ಷಮತೆ ಇನ್ನೊಂದು ಗಮನ ಸೆಳೆಯುವ ಅಂಶ. ಸಮಗ್ರ ಏರ್ ಕಮಾಂಡ್ ಹಾಗೂ ನಿಯಂತ್ರಣ ವ್ಯವಸ್ಥೆ ಪಾಕಿಸ್ತಾನದ ಸೇನಾ ದಾಳಿಯನ್ನು ವಿಫಲಗೊಳಿಸಿತು ಎಂದು ಅವರು ಹೇಳಿದ್ದಾರೆ.
ನಮ್ಮ ಹೋರಾಟ ಭಯೋತ್ಪಾದಕ ಮೂಲಸೌಕರ್ಯ ಹಾಗೂ ಭಯೋತ್ಪಾದಕರ ವಿರುದ್ಧ. ಆದರೆ, ಪಾಕಿಸ್ತಾನ ಸೇನೆ ಭಯೋತ್ಪಾದಕರಿಗೆ ನೆರವು ನೀಡುವುದನ್ನು ಆಯ್ಕೆ ಮಾಡಿಕೊಂಡಿತು ಹಾಗೂ ಬಿಕ್ಕಟ್ಟನ್ನು ವ್ಯಾಪಕಗೊಳಿಸಿತು ಎಂದು ಅವರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಭಾರತೀಯ ಸೇನೆ, ‘‘ಜಮ್ಮು ಹಾಗೂ ಕಾಶ್ಮೀರ ಹಾಗೂ ಅಂತರ ರಾಷ್ಟ್ರೀಯ ಗಡಿ ರೇಖೆಯ ಇತರ ಪ್ರದೇಶಗಳಲ್ಲಿ ರಾತ್ರಿ ಬಹುತೇಕ ಶಾಂತವಾಗಿತ್ತು’’ ಎಂದಿದೆ.
ಯಾವುದೇ ಘಟನೆಗಳು ವರದಿಯಾಗಿಲ್ಲ. ಇದು ಇತ್ತೀಚೆಗಿನ ದಿನಗಳಲ್ಲಿ ಮೊದಲ ಶಾಂತ ರಾತ್ರಿ ಎಂದು ಹೇಳಿಕೆ ತಿಳಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತಿ ಕಾಶ್ಮೀರ (ಪಿಒಕೆ)ದಲ್ಲಿದ್ದ 9 ಭಯೋತ್ಪಾದಕ ಶಿಬಿರಗಳನ್ನು ನಾಶಮಾಡಲು ಭಾರತ ಮೇ 7ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು.