ಎಸ್ಬಿಐನ ‘ವಂಚನೆ’ ವರ್ಗೀಕರಣ ಪ್ರಶ್ನಿಸಿದ್ದ ಅನಿಲ್ ಅಂಬಾನಿ ಅರ್ಜಿ ಹೈಕೋರ್ಟ್ನಲ್ಲಿ ವಜಾ
ಅನಿಲ್ ಅಂಬಾನಿ | Photo Credit : PTI
ಮುಂಬೈ,ಅ.3: ತನ್ನ ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ನ (ಆರ್ಕಾಮ್) ಖಾತೆಗಳನ್ನು ವಂಚನೆ ಎಂದು ವರ್ಗೀಕರಿಸಿದ ಎಸ್ಬಿಐ ನಿರ್ಧಾರವನ್ನು ಪ್ರಶ್ನಿಸಿ ಉದ್ಯಮಿ ಅನಿಲ ಅಂಬಾನಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.
ಅರ್ಜಿಯು ಯಾವುದೇ ಅರ್ಹತೆಯನ್ನು ಹೊಂದಿಲ್ಲ ಎಂದು ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಡೇರೆ ಮತ್ತು ನೀಲಾ ಗೋಖಲೆ ಅವರ ಪೀಠವು ಹೇಳಿತು.
ತಾನು ನೀಡಿದ್ದ ಸಾಲಗಳ ನಿಯಮಗಳನ್ನು ಉಲ್ಲಂಘಿಸುವ ವಹಿವಾಟುಗಳನ್ನು ನಡೆಸುವ ಮೂಲಕ ಆರ್ಕಾಮ್ ಹಣವನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸಿ ಎಸ್ಬಿಐ ಖಾತೆಗಳನ್ನು ‘ವಂಚನೆ’ ಎಂದು ವರ್ಗೀಕರಿಸಿತ್ತು.
ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದ ಅನಿಲ್ ಅಂಬಾನಿ ಬ್ಯಾಂಕು ತನ್ನ ಅಹವಾಲುಗಳನ್ನು ಆಲಿಸಿಲ್ಲ,ತನ್ಮೂಲಕ ಅದು ಸಹಜ ನ್ಯಾಯದ ತತ್ವಗಳನ್ನು ಉಲ್ಲಂಘಿಸಿದೆ ಎಂದು ವಾದಿಸಿದ್ದರು.
ವರ್ಗೀಕರಣ ಆದೇಶಕ್ಕೆ ಆಧಾರವಾಗಿದ್ದ ಕೆಲವು ದಾಖಲೆಗಳನ್ನು ಆರಂಭದಲ್ಲಿ ತನಗೆ ನೀಡಿರಲಿಲ್ಲ, ಆರು ತಿಂಗಳ ಬಳಿಕವೇ ಅವುಗಳನ್ನು ತನಗೆ ಒದಗಿಸಲಾಗಿತ್ತು ಎಂದೂ ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.
ಆರ್ಕಾಮ್ ಮತ್ತು ಅನಿಲ್ ಅಂಬಾನಿಯಿಂದ ಸಾಲದ ಹಣದ ದುರುಪಯೋಗದಿಂದ ತನಗೆ 2,929.05 ಕೋ.ರೂ.ಗಳ ನಷ್ಟವುಂಟಾಗಿದೆ ಎಂದು ಆರೋಪಿಸಿ ಬ್ಯಾಂಕಿನ ದೂರಿನ ಮೇರೆಗೆ ಸಿಬಿಐ ಈ ವರ್ಷ ಆರ್ಕಾಮ್ ಕಚೇರಿಗಳು ಮತ್ತು ಅನಿಲ್ ಅಂಬಾನಿ ನಿವಾಸದಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.