×
Ad

ದುಬೈ ನಿವಾಸಿಗಳಿಗೆ ಕ್ಷಿಪಣಿ ದಾಳಿ ಎಚ್ಚರಿಕೆ ಸಂದೇಶ; ಹೊರಾಂಗಣಕ್ಕೆ ಹೋಗದಂತೆ ಸೂಚನೆ

Update: 2026-03-06 14:51 IST

Photo Credit : indiatoday.in / Reuters

ದುಬೈ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಮಿಲಿಟರಿ ಸಂಘರ್ಷದ ನಡುವೆ ಶುಕ್ರವಾರ ದುಬೈ ನಿವಾಸಿಗಳಿಗೆ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸಂಭವನೀಯ ಕ್ಷಿಪಣಿ ದಾಳಿಯ ಬಗ್ಗೆ ಎಚ್ಚರಿಕೆ ಸಂದೇಶಗಳು ಬಂದಿದ್ದು, ನಗರದಲ್ಲಿ ಆತಂಕದ ವಾತಾವರಣ ಉಂಟಾಯಿತು ಎಂದು ವರದಿಯಾಗಿದೆ.

ಕಳೆದ ವಾರದಲ್ಲಿ ಹಲವಾರು ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ದುಬೈ ನಿವಾಸಿಗಳಿಗೆ ಕಳುಹಿಸಲಾದ ಎಚ್ಚರಿಕೆ ಸಂದೇಶಗಳಲ್ಲಿ ಹೊರಾಂಗಣಕ್ಕೆ ಹೋಗದಂತೆ ಸೂಚಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಗೆ ಸಿದ್ಧರಾಗಿರಿ ಮತ್ತು ಎಚ್ಚರಿಕೆಯಿಂದ ವರ್ತಿಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನಮಗೆ ಫೋನ್‌ನಲ್ಲಿ ಸತತ ನಾಲ್ಕು ಎಚ್ಚರಿಕೆಗಳು ಬಂದಿವೆ. ನಾವು ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ್ದೇವೆ. ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ಬಳಸಲು ಪಾಸ್‌ಪೋರ್ಟ್ ಸೇರಿದಂತೆ ಎಲ್ಲಾ ಪ್ರಮುಖ ದಾಖಲೆಗಳೊಂದಿಗೆ ಒಂದು ಬ್ಯಾಗ್ ಸಿದ್ಧವಾಗಿಟ್ಟಿದ್ದೇವೆ’ ಎಂದು ದುಬೈ ನಿವಾಸಿಯೊಬ್ಬರು India Today ಗೆ ತಿಳಿಸಿದ್ದಾರೆ.

ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಸಂಯುಕ್ತ ವೈಮಾನಿಕ ದಾಳಿಯಲ್ಲಿ ಇರಾನ್‌ ನ ಉನ್ನತ ನಾಯಕ ಆಯತುಲ್ಲಾ ಅಲಿ ಖಾಮಿನೈ ಮೃತಪಟ್ಟ ಬಳಿಕ ಮಧ್ಯಪ್ರಾಚ್ಯದಾದ್ಯಂತ ವಾಯು ಸಂಚಾರ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಗಲ್ಫ್ ರಾಷ್ಟ್ರಗಳ ಮೇಲೆ ಇರಾನಿನ ದಾಳಿಯ ಬೆಳವಣಿಗೆಗಳಿಂದಾಗಿ ಪ್ರದೇಶದ ಹಲವು ದೇಶಗಳು ವಾಯುಪ್ರದೇಶವನ್ನು ಮುಚ್ಚಿದ್ದು, ಪ್ರಯಾಣ ವ್ಯವಸ್ಥೆಯಲ್ಲಿ ವ್ಯಾಪಕ ಅವ್ಯವಸ್ಥೆ ಉಂಟಾಗಿದೆ.

ವಿಶ್ವದ ಅತ್ಯಂತ ಜನನಿಬಿಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಂದಾದ ಹಾಗೂ ಪ್ರಮುಖ ಜಾಗತಿಕ ಸಾರಿಗೆ ಕೇಂದ್ರವಾಗಿರುವ ದುಬೈ ಕೂಡ ಈ ಉದ್ವಿಗ್ನ ಪರಿಸ್ಥಿತಿಯಿಂದ ಕಾರ್ಯಾಚರಣೆಯಲ್ಲಿ ವ್ಯತ್ಯಯ ಎದುರಿಸಿದೆ. ಸಂಯುಕ್ತ ದಾಳಿಗೆ ಪ್ರತೀಕಾರವಾಗಿ ಇರಾನ್ ಕ್ರಮ ಕೈಗೊಂಡ ನಂತರ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ವಿಮಾನಗಳ ಸಂಚಾರದಲ್ಲಿ ಅಡಚಣೆ ಉಂಟಾದ ಕಾರಣ ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರಯಾಣಿಕರು ಗಲ್ಫ್ ರಾಷ್ಟ್ರಗಳಲ್ಲಿ, ವಿಶೇಷವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸಿಲುಕಿಕೊಂಡಿದ್ದರು. ಸೋಮವಾರದಿಂದ (ಮಾರ್ಚ್ 2) ಅವರಲ್ಲಿ ಹಲವರು ಭಾರತಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಡಚಣೆಗಳ ನಡುವೆಯೂ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ದುಬೈ ಮತ್ತು ಯುಎಇ ಅಧಿಕಾರಿಗಳಿಗೆ ಅನೇಕ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News