ಪಂಜಾಬ್ ಸಚಿವರ ಅಮೆರಿಕ ಭೇಟಿಗೆ ರಾಜಕೀಯ ಅನುಮತಿ ನಿರಾಕರಿಸಿದ ಕೇಂದ್ರ ಸರಕಾರ; ಆಪ್ ಖಂಡನೆ
ಹರ್ಭಜನ್ ಸಿಂಗ್ | ANI
ಚಂಡಿಗಡ: ಪಂಜಾಬಿನ ವಿದ್ಯುತ್ ಮತ್ತು ಲೋಕೋಪಯೋಗಿ ಸಚಿವ ಹರ್ಭಜನ್ ಸಿಂಗ್ ಅವರ ನಿಗದಿತ ಅಮೆರಿಕ ಭೇಟಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಾಜಕೀಯ ಅನುಮತಿಯನ್ನು ನಿರಾಕರಿಸಿದ ಬಳಿಕ ಆಪ್ ನೇತೃತ್ವದ ಪಂಜಾಬ್ ಸರಕಾರ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರಗಳ ನಡುವೆ ಮತ್ತೆ ಉದ್ವಿಗ್ನತೆ ತಲೆದೋರಿದೆ ಎಂದು ವರದಿಯಾಗಿದೆ.
ಆ.4ರಿಂದ 6ರವರೆಗೆ ಮಸಾಚುಸೆಟ್ಸ್ನ ಬಾಸ್ಟನ್ ನಗರದಲ್ಲಿ ನಡೆಯಲಿರುವ ರಾಜ್ಯಶಾಸಕಾಂಗಗಳ ರಾಷ್ಟ್ರೀಯ ಸಮ್ಮೇಳನ(ಎನ್ಸಿಎಸ್ಎಲ್) ಶಾಸಕಾಂಗ ಶೃಂಗಸಭೆ 2025ರಲ್ಲಿ ಪಾಲ್ಗೊಳ್ಳುವಂತೆ ಸಿಂಗ್ ಅವರನ್ನು ಆಹ್ವಾನಿಸಲಾಗಿತ್ತು. ಇದರೊಂದಿಗೆ ಸಿಂಗ್ ಕೇಂದ್ರದಿಂದ ವಿದೇಶ ಪ್ರಯಾಣಕ್ಕೆ ಅನುಮತಿ ನಿರಾಕರಿಸಲ್ಪಟ್ಟ ಪಂಜಾಬಿನ ನಾಲ್ಕನೇ ಆಪ್ ಸಚಿವರಾಗಿದ್ದಾರೆ.
ಮೂಲಗಳ ಪ್ರಕಾರ ಎಲ್ಲ ರಾಜಕೀಯ ನಾಯಕರು ವಿದೇಶಗಳಿಗೆ ಭೇಟಿ ನೀಡಲು ವಿದೇಶಾಂಗ ಸಚಿವಾಲಯದ ಅನುಮತಿ ಅಗತ್ಯವಾಗಿದೆ. ಸಿಂಗ್ ಪ್ರಕರಣದಲ್ಲಿ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಅನುಮತಿಯನ್ನು ನಿರಾಕರಿಸಲಾಗಿದೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಸಿಂಗ್, ಶೃಂಗಸಭೆಯು ಅಮೂಲ್ಯಕಲಿಕೆಯ ಹಾಗೂ ವಿಶ್ವಾದ್ಯಂತದ ಶಾಸಕರು ಮತ್ತು ನೀತಿ ರೂಪಕರೊಂದಿಗೆ ಸಂವಾದದ ಅವಕಾಶವನ್ನು ಒದಗಿಸುತ್ತಿತ್ತು. ಇದು ಪಂಜಾಬಿನ ಪ್ರಯೋಜನಕ್ಕಾಗಿ ಪ್ರಗತಿಪರ ವಿಚಾರಗಳೊಂದಿಗೆ ಮರಳಲು ನೆರವಾಗುತ್ತಿತ್ತು ಎಂದು ಹೇಳಿದರು.
ಅನುಮತಿ ನಿರಾಕರಣೆಗೆ ಕಾರಣವೇನು ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು,ಅದು ವಿದೇಶಾಂಗ ಸಚಿವಾಲಯಕ್ಕೇ ಚೆನ್ನಾಗಿ ಗೊತ್ತು ಎಂದು ಉತ್ತರಿಸಿದರು.
ಕೇಂದ್ರ ಸರಕಾರದ ನಿರ್ಧಾರವನ್ನು ಟೀಕಿಸಿದ ಆಪ್ನ ಪಂಜಾಬ್ ವಕ್ತಾರ ನೀಲ್ ಗರ್ಗ್ ಅವರು,ಅದು ಒಕ್ಕೂಟ ವ್ಯವಸ್ಥೆಯನ್ನು ಹತ್ತಿಕ್ಕುತ್ತಿದೆ ಮತ್ತು ಆಪ್ನ ಆಡಳಿತ ಮಾದರಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ಬರುತ್ತದೆ ಎಂಬ ಭೀತಿಯಲ್ಲಿದೆ ಎಂದು ಆರೋಪಿಸಿದರು.
ಕೇಂದ್ರ ಸರಕಾರವು ಕಳೆದ ವರ್ಷ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್,ವಿಧಾನಸಭಾ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರ ವಿದೇಶ ಭೇಟಿಗಳಿಗೆ ಅನುಮತಿಯನ್ನು ನಿರಾಕರಿಸಿತ್ತು. ಅದಕ್ಕೂ ಮುನ್ನ ೨೦೨೨ರಲ್ಲಿ ಆಗಿನ ನವೀಕರಿಸಬಹುದಾದ ಇಂಧನ ಮತ್ತು ಆಡಳಿತ ಸುಧಾರಣಾ ಸಚಿವ ಅಮನ್ ಅರೋರಾ ಅವರೂ ಅನುಮತಿಯಿಂದ ವಂಚಿತರಾಗಿದ್ದರು.
ವಿದೇಶ ಪ್ರಯಾಣಕ್ಕೆ ಅನುಮತಿಯು ಆಡಳಿತಾತ್ಮಕ ವಿಷಯವಾಗಿದೆ,ರಾಜಕೀಯ ವಿಷಯವಲ್ಲ. ಆಪ್ ನಾಯಕರು ಇದಕ್ಕೆ ರಾಜಕೀಯ ಬಣ್ಣ ನೀಡುವುದರಿಂದ ದೂರವಿರಬೇಕು, ಬದಲಿಗೆ ನಿರ್ಧಾರದ ಹಿಂದಿನ ಕಾರಣಗಳಿಗಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಬೇಕು ಎಂದು ಪಂಜಾಬ್ ಬಿಜೆಪಿ ವಕ್ತಾರ ಅನಿಲ ಸರೀನ್ ಹೇಳಿದರು.