×
Ad

ಚುನಾವಣೆಯ ಕಾವಲುಗಾರನಿಂದಲೇ ಮತಗಳ್ಳರ ರಕ್ಷಣೆ: ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ

Update: 2025-09-19 14:21 IST

ರಾಹುಲ್ ಗಾಂಧಿ (Photo: PTI) 

ಹೊಸದಿಲ್ಲಿ: ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಮತಗಳ್ಳರಿಗೆ ಚುನಾವಣೆಯ ಕಾವಲುಗಾರ ರಕ್ಷಣೆ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಬೆಳಗ್ಗೆ ನಾಲ್ಕು ಗಂಟೆಗೆ ಎದ್ದೇಳುವುದು, 36 ಸೆಕೆಂಡುಗಳಲ್ಲಿ ಇಬ್ಬರು ಮತದಾರರನ್ನು ಅಳಿಸಿ ಹಾಕುವುದು, ಮತ್ತೆ ನಿದ್ರೆಗೆ ಜಾರುವುದು. ಹೀಗೆ ಮತಗಳ್ಳತನ ನಡೆದಿದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

“ಈ ವೇಳೆ ಚುನಾವಣೆಯ ಕಾವಲುಗಾರ ಜಾಗೃತವಾಗಿಯೇ ಇದ್ದರು. ಕಳ್ಳತನ ಮಾಡುವುದನ್ನು ಗಮನಿಸುತ್ತಲೇ ಇದ್ದರು ಮತ್ತು ಕಳ್ಳರನ್ನು ರಕ್ಷಿಸುತ್ತಲೇ ಇದ್ದರು” ಎಂದು ಅವರು ಆಪಾದಿಸಿದ್ದಾರೆ.

ಇದಕ್ಕೂ ಮುನ್ನ, ಗುರುವಾರ ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.

“ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸುತ್ತಿರುವ ಶಕ್ತಿಗಳ ಜೊತೆಗೆ ಜ್ಞಾನೇಶ್ ಕುಮಾರ್ ಕೈಜೋಡಿಸಿದ್ದಾರೆ. ಅವರು ನೆಪಗಳನ್ನು ಹೇಳುವುದನ್ನು ನಿಲ್ಲಿಸಬೇಕು. ಮತಗಳ್ಳತನ ಮಾಡುವವರ ರಕ್ಷಣೆ ಮಾಡುವ ಕೆಲಸವನ್ನು ತಕ್ಷಣವೇ ಕೈಬಿಡಬೇಕು” ಎಂದು ಆಗ್ರಹಿಸಿದ್ದರು.

ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದ ಮತಗಳವು ಯತ್ನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಕೇಂದ್ರ ಚುನಾವಣಾ ಆಯೋಗವು ಅಗತ್ಯ ಸಾಕ್ಷ್ಯಗಳನ್ನು ವಾರದೊಳಗೆ ಒದಗಿಸಬೇಕು. ಇಲ್ಲದಿದ್ದರೆ, ಮತಗಳವು ಮಾಡುತ್ತಿರುವವರನ್ನು ಜ್ಞಾನೇಶ್ ಕುಮಾರ್ ರಕ್ಷಿಸುತ್ತಿದ್ದಾರೆ ಎಂಬ ಆರೋಪಕ್ಕೆ ಜನರಿಗೆ ಖಚಿತ ಪುರಾವೆ ಲಭ್ಯವಾದಂತಾಗಲಿದೆ ಎಂದು ಅವರು ಎಚ್ಚರಿಸಿದ್ದರು.

ಆದರೆ, ರಾಹುಲ್ ಗಾಂಧಿಯ ಆರೋಪಗಳನ್ನು ಅಲ್ಲಗಳೆದಿದ್ದ ಚುನಾವಣಾ ಆಯೋಗ, ಅದೆಲ್ಲ ಆಧಾರರಹಿತ, ಸತ್ಯಕ್ಕೆ ದೂರ ಎಂದು ತಳ್ಳಿ ಹಾಕಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News