ಬಾಬರಿ ಮಸೀದಿ ಕುರಿತ ಹೇಳಿಕೆ ವಿವಾದ : ಮಾಜಿ ಸಿಜೆಐ ಡಿವೈ ಚಂದ್ರಚೂಡ್ ಸ್ಪಷ್ಟೀಕರಣ
Photo | PTI
ಹೊಸದಿಲ್ಲಿ: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಗುರುವಾರ ಸುಪ್ರೀಂ ಕೋರ್ಟ್ನ ಅಯೋಧ್ಯೆ ತೀರ್ಪನ್ನು ಸಾಕ್ಷ್ಯ ಮತ್ತು ಕಾನೂನು ತತ್ವಗಳ ಆಧಾರದ ಮೇಲೆ ನೀಡಲಾಗಿದೆ ಹೊರತು ನಂಬಿಕೆಯ ಆಧಾರದ ಮೇಲೆ ಅಲ್ಲ ಎಂದು ಹೇಳಿದ್ದಾರೆ. ಅದೇ ಸಮಯದಲ್ಲಿ ವಿವಾದಕ್ಕೆ ಕಾರಣವಾದ ಬಾಬರಿ ಮಸೀದಿಯ ಕುರಿತು ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮುಂಬೈನಲ್ಲಿ ಇಂಡಿಯಾ ಟುಡೇ ಜೊತೆ ಮಾತನಾಡಿದ ಮಾಜಿ ಸಿಜೆಐ ಚಂದ್ರಚೂಡ್, ʼಬಾಬರಿ ಮಸೀದಿ ನಿರ್ಮಾಣವು ಮೂಲಭೂತವಾಗಿ ಅಪವಿತ್ರ ಕ್ರಿಯೆʼ ಎಂಬ ತಮ್ಮ ಹೇಳಿಕೆ ಕುರಿತ ವಿವಾದವನ್ನು ಪ್ರಸ್ತಾಪಿಸಿದರು. ಅಯೋಧ್ಯೆ ವಿವಾದದ ಕುರಿತು ತಮ್ಮ ಅಭಿಪ್ರಾಯಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದರು.
"ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಉತ್ತರದ ಒಂದು ಭಾಗವನ್ನು ತೆಗೆದುಕೊಂಡು ಇನ್ನೊಂದು ಭಾಗದೊಂದಿಗೆ ಸೇರಿಸಿ ಸಂದರ್ಭವನ್ನು ಸಂಪೂರ್ಣವಾಗಿ ಬದಲಾಯಿಸುತ್ತಾರೆ” ಎಂದು ಚಂದ್ರಚೂಡ್ ಹೇಳಿದ್ದಾರೆ.
ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟ ತೀರ್ಪು ನೀಡಿದ ಐವರು ನ್ಯಾಯಾಧೀಶರ ಪೀಠದ ಭಾಗವಾಗಿದ್ದ ಚಂದ್ರಚೂಡ್, ಈ ತೀರ್ಪು ಸಾಕ್ಷ್ಯಗಳ ಸಮಗ್ರ ಪರಿಶೀಲನೆಯ ನಂತರ ನೀಡಲಾಗಿದೆ. ಪ್ರಕರಣದ ದಾಖಲೆ 30,000 ಪುಟಗಳಿಗಿಂತ ಹೆಚ್ಚು ಇದ್ದ ಕಾರಣ ತೀರ್ಪು 1,045 ಪುಟಗಳಷ್ಟಿತ್ತು. ಇದನ್ನು ಟೀಕಿಸುವ ಹೆಚ್ಚಿನ ಜನರು ತೀರ್ಪನ್ನು ಓದಿಲ್ಲ. ಪೂರ್ಣ ದಾಖಲೆಯನ್ನು ಓದದೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯಗಳನ್ನು ಪೋಸ್ಟ್ ಮಾಡುವುದು ಸುಲಭ ಎಂದು ಹೇಳಿದರು.
ನ್ಯಾಯಾಂಗ ಸ್ವಾತಂತ್ರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಚಂದ್ರಚೂಡ್ ಆತಂಕ ವ್ಯಕ್ತಪಡಿಸಿದರು. “ಓರ್ವ ನ್ಯಾಯಾಧೀಶನು ಪ್ರತಿಯೊಂದು ಪ್ರಕರಣವನ್ನೂ ಜನರ ತತ್ವಜ್ಞಾನಕ್ಕೆ ಅನುಸಾರವಾಗಿ ತೀರ್ಮಾನಿಸಬೇಕು ಎಂಬ ನಿರೀಕ್ಷೆ ಇದೆ. ಸರಕಾರದ ವಿರುದ್ಧ ತೀರ್ಪು ಕೊಟ್ಟರೆ ಮಾತ್ರ ಸ್ವತಂತ್ರ ಎಂದು ಹೇಳುತ್ತಾರೆ. ಆದರೆ ಒಂದು ಪ್ರಕರಣದಲ್ಲಾದರೂ ಸರಕಾರದ ಪರ ತೀರ್ಪು ಕೊಟ್ಟರೆ, ತಕ್ಷಣವೇ ಸರಕಾರದ ಪರ ಎಂದು ಟೀಕಿಸುತ್ತಾರೆ ಎಂದು ಹೇಳಿದ್ದಾರೆ. ಅವರು ಸರಕಾರದ ವಿರುದ್ಧ ನೀಡಿದ ಚುನಾವಣಾ ಬಾಂಡ್, ಅಲಿಗಢ್ ಮುಸ್ಲಿಂ ವಿವಿಗೆ ಸಂಬಂಧಿಸಿದ ಪ್ರಕರಣ, ಆಧಾರ್ ತೀರ್ಪು ಅನ್ನು ಉಲ್ಲೇಖಿಸಿದ್ದಾರೆ.