×
Ad

G RAM G ಮಸೂದೆ: ಸಂಸತ್ ಸಂಕೀರ್ಣದಲ್ಲಿ ಪ್ರತಿಪಕ್ಷಗಳಿಂದ ಪ್ರತಿಭಟನಾ ಜಾಥಾ

Update: 2025-12-18 20:45 IST

Photo credit: PTI

ಹೊಸದಿಲ್ಲಿ,ಡಿ.18: ಜಿ ರಾಮ ಜಿ ಮಸೂದೆಯನ್ನು ವಿರೋಧಿಸಿ ಗುರುವಾರ ಸಂಸತ್ ಭವನ ಸಂಕೀರ್ಣದಲ್ಲಿ ಪ್ರತಿಭಟನಾ ಜಾಥಾ ನಡೆಸಿದ ಹಲವಾರು ಪ್ರತಿಪಕ್ಷ ಸಂಸದರು, ಮಸೂದೆಯನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದರು.

ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸರಕಾರದ ಕ್ರಮದ ವಿರುದ್ಧ ಸಂಸತ್ತಿನಲ್ಲಿ ಮತ್ತು ಬೀದಿಗಳಲ್ಲಿ ಹೋರಾಟ ನಡೆಸುವುದಾಗಿ ಪ್ರತಿಜ್ಞೆ ಮಾಡಿದರು.

‘ಮಹಾತ್ಮಾ ಗಾಂಧಿ ನರೇಗಾ’ ಎಂಬ ಬೃಹತ್ ಬ್ಯಾನರ್‌ನೊಂದಿಗೆ ಪ್ರತಿಪಕ್ಷ ಸಂಸದರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರೇರಣಾ ಸ್ಥಳದಲ್ಲಿಯ ಗಾಂಧಿ ಪ್ರತಿಮೆಯಿಂದ ಮಕರ ದ್ವಾರದವರೆಗೆ ಜಾಥಾ ನಡೆಸಿದರು.

ಖರ್ಗೆ, AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, DMKಯ ಕನ್ಹಿಮೋಳಿ, ಟಿ.ಆರ್.ಬಾಲು ಮತ್ತು ಎ.ರಾಜಾ, IUML ನ ಇ.ಟಿ.ಮುಹಮ್ಮದ್ ಬಷೀರ್, ಶಿವಸೇನೆ (UBT)ಯ ಅರವಿಂದ ಸಾವಂತ್, RSP ಯ ಎನ್.ಕೆ.ಪ್ರೇಮಚಂದ್ರನ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ಮೋದಿ ಸರಕಾರವು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಅವಮಾನಿಸಿರುವುದು ಮಾತ್ರವಲ್ಲ, ಭಾರತದ ಗ್ರಾಮಗಳಲ್ಲಿ ಸಾಮಾಜಿಕ-ಆರ್ಥಿಕ ಪರಿವರ್ತನೆಯನ್ನು ತರುವಲ್ಲಿ ಪ್ರಮುಖ ಸಾಧನವಾಗಿದ್ದ ದುಡಿಯುವ ಹಕ್ಕನ್ನೂ ದಮನಿಸಿದ್ದಾರೆ. ಆಡಳಿತಾರೂಢ ಸರ್ವಾಧಿಕಾರಿ ಸರಕಾರದ ಈ ದಬ್ಬಾಳಿಕೆಯ ವಿರುದ್ಧ ನಾವು ಸಂಸತ್ತಿನಿಂದ ಬೀದಿಗಳವರೆಗೆ ಹೋರಾಟ ನಡೆಸುತ್ತೇವೆ’ ಎಂದು ಖರ್ಗೆ ಪ್ರತಿಭಟನೆಯ ಬಳಿಕ ಟ್ವೀಟಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಮಕರ ದ್ವಾರದಲ್ಲಿ ಪ್ರತಿಭನಾನಿರತ ಸಂಸದರನ್ನು ಸೇರಿಕೊಂಡು ಪ್ರದರ್ಶನದಲ್ಲಿ ಭಾಗಿಯಾಗಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ವೇಣುಗೋಪಾಲ್, ಇಂದು ಸಂಸತ್ತು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಗುತ್ತಿದೆ. ನರೇಗಾದಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ತೆಗೆಯುವ ಮೂಲಕ ಅವರು ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ರಾಷ್ಟ್ರಪಿತನ ಸಿದ್ಧಾಂತವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News