Jharkhand | ವಾಮಾಚಾರ ಶಂಕೆ: ದಂಪತಿ ಹಾಗೂ ಪುತ್ರನನ್ನು ಕೊಚ್ಚಿ ಕೊಲೆ
ಸಾಂದರ್ಭಿಕ ಚಿತ್ರ
ಮೇದಿನಿನಗರ್ (ಜಾರ್ಖಂಡ್): ವಾಮಾಚಾರದ ಶಂಕೆಯಲ್ಲಿ ದಂಪತಿ ಹಾಗೂ ಅವರ 18 ವರ್ಷದ ಪುತ್ರನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್ ನ ಪಲಮುನಲ್ಲಿ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ವಿಜಯ್ ಭುಯಾನ್ (45), ಪತ್ನಿ ಕಾಲಿಯಾ ದೇವಿ (40) ಹಾಗೂ ಅವರ ಪುತ್ರ ಛೋಟು ಭುಯಾನ್ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮೇದಿನಿರಾಯ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಗಿದೆ.
ಶನಿವಾರ ತಡರಾತ್ರಿ ನಡೆದ ಈ ದಾಳಿಯಲ್ಲಿ ದಂಪತಿಗಳ ಅಪ್ರಾಪ್ತ ಪುತ್ರಿಗೂ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಮೃತ ದಂಪತಿಗಳು ಹಾಗೂ ಅವರ ಪುತ್ರನ ಮೃತದೇಹಗಳನ್ನು ಅವರ ನಿವಾಸದಿಂದ ರವಿವಾರ ಬೆಳಗ್ಗೆ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಲೆಸ್ಲಿಗಂಜ್ ನ ಉಪವಿಭಾಗೀಯ ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ಝಾ, “ಈ ಘಟನೆಯು ವಾಮಾಚಾರದ ಶಂಕೆಯ ಕಾರಣಕ್ಕೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಸಂಶಯಿಸಲಾಗಿದೆ” ಎಂದು ತಿಳಿಸಿದ್ದಾರೆ.
ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಬಲೆ ಬೀಸಲಾಗಿದೆ ಎಂದು ತಿಳಿದು ಬಂದಿದೆ.