ಮಧ್ಯಪ್ರದೇಶ | ಇಲಿ ಮಗುವಿನ ನಾಲ್ಕು ಬೆರಳನ್ನು ಕಚ್ಚಿತ್ತು: ಇಂದೋರ್ ಆಸ್ಪತ್ರೆಯು ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ ಆದಿವಾಸಿ ಸಂಘಟನೆ
ಇಂದೋರ್: ಸರಕಾರಿ ಮಹಾರಾಜ ಯಶವಂತ್ ರಾವ್ ಆಸ್ಪತ್ರೆಯಲ್ಲಿ ನವಜಾತ ಹೆಣ್ಣು ಶಿಶು ಮೃತಪಟ್ಟ ಘಟನೆಯ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿ ಸುಳ್ಳು ಹೇಳುತ್ತಿದ್ದು, ಎಲ್ಲರನ್ನೂ ದಾರಿ ತಪ್ಪಿಸಲು ಯತ್ನಿಸುತ್ತಿದೆ ಎಂದು ಆದಿವಾಸಿಗಳ ಸಂಘಟನೆಯೊಂದು ಆರೋಪಿಸಿದೆ. ಇಲಿಗಳು ಮಗುವಿನ ನಾಲ್ಕು ಬೆರಳುಗಳನ್ನು ಕಡಿದಿದ್ದವು ಎಂದು ಅದು ಹೇಳಿದೆ.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು ಹಾಗೂ ಅವರ ವಿರುದ್ಧ ಹತ್ಯೆ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು ಎಂದು ಆದಿವಾಸಿ ಸಂಘಟನೆಯಾದ ಜೈ ಆದಿವಾಸಿ ಯುವ ಶಕ್ತಿ ಆಗ್ರಹಿಸಿದೆ.
ಸೋಮವಾರ ಸಂಜೆಯೊಳಗೆ ಈ ಬೇಡಿಕೆಯನ್ನು ಈಡೇರಿಸದಿದ್ದರೆ, ಆದಿವಾಸಿ ಸಮುದಾಯವು ದೊಡ್ಡ ಹೋರಾಟ ನಡೆಸಲಿದೆ ಎಂದು ಜೈ ಆದಿವಾಸಿ ಯುವ ಶಕ್ತಿ ಸಂಘಟನೆಯ ಅಧ್ಯಕ್ಷ ಲೋಕೇಶ್ ಮುಜಲ್ದಾ ಎಚ್ಚರಿಕೆ ನೀಡಿದ್ದಾರೆ.
ಸರಕಾರಿ ಮಹಾರಾಜ ಯಶವಂತ್ ರಾವ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಎರಡು ನವಜಾತ ಶಿಶುಗಳಿಗೆ ಇಲಿಗಳು ಕಡಿದಿದ್ದರಿಂದ, ಅವು ಇತ್ತೀಚೆಗೆ ಮೃತಪಟ್ಟಿದ್ದವು. ಇದರ ಬೆನ್ನಿಗೇ, ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ಕೇಳಿ ಬಂದಿತ್ತು.