ಭಾರತ–ಚೀನಾ ಉತ್ತಮ ನೆರೆಹೊರೆಯವರು, ಸ್ನೇಹಿತರು: ಗಣರಾಜ್ಯೋತ್ಸವ ಶುಭಾಶಯ ಕೋರಿದ ಕ್ಸಿಜಿನ್ಪಿಂಗ್
ನರೇಂದ್ರ ಮೋದಿ , ಕ್ಸಿ ಜಿನ್ಪಿಂಗ್ | Photo Credit : PTI
ಹೊಸದಿಲ್ಲಿ, ಜ.26: ಭಾರತದ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿರುವ ಚೀನಾ ಅಧ್ಯಕ್ಷ ಕ್ಸಿಜಿನ್ಪಿಂಗ್ ಅವರು, ‘ಉಭಯ ರಾಷ್ಟ್ರಗಳು ಉತ್ತಮ ನೆರೆಹೊರೆಯವರು, ಸ್ನೇಹಿತರು ಮತ್ತು ಪಾಲುದಾರರು’ ಎಂದು ಬಣ್ಣಿಸಿದ್ದಾರೆ ಎಂದು ಅಧಿಕೃತ ಸುದ್ದಿಸಂಸ್ಥೆ ಶಿನುವಾ ವರದಿ ಮಾಡಿದೆ.
ಕಳೆದೊಂದು ವರ್ಷದಲ್ಲಿ ಭಾರತ–ಚೀನಾ ಸಂಬಂಧಗಳು ಸುಧಾರಿಸುತ್ತಿವೆ. ಇದು ಜಾಗತಿಕ ಶಾಂತಿ ಮತ್ತು ಸಮೃದ್ಧಿಯನ್ನು ಕಾಯ್ದುಕೊಳ್ಳುವಲ್ಲಿ ಮತ್ತು ಉತ್ತೇಜಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ ಎಂದು ಹೇಳಿರುವ ಕ್ಸಿಜಿನ್ಪಿಂಗ್, ಉತ್ತಮ ನೆರೆಹೊರೆಯವರು, ಸ್ನೇಹಿತರು ಮತ್ತು ಪಾಲುದಾರರಾಗಿರುವುದು ಚೀನಾ ಮತ್ತು ಭಾರತಕ್ಕೆ ಸರಿಯಾದ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ.
ಚೀನಾ ಮತ್ತು ಭಾರತವನ್ನು ಒಟ್ಟಿಗೆ ನರ್ತಿಸುತ್ತಿರುವ ‘ಡ್ರ್ಯಾಗನ್ ಮತ್ತು ಆನೆ’ ಎಂದು ಬಣ್ಣಿಸಿರುವ ಅವರು, ಆರೋಗ್ಯಕರ ಮತ್ತು ಸ್ಥಿರ ಸಂಬಂಧಗಳನ್ನು ಉತ್ತೇಜಿಸಲು ಉಭಯ ದೇಶಗಳು ಪರಸ್ಪರ ವಿನಿಮಯ ಮತ್ತು ಸಹಕಾರವನ್ನು ಹೆಚ್ಚಿಸಬೇಕು ಹಾಗೂ ಪರಸ್ಪರರ ಕಳವಳಗಳನ್ನು ಪರಿಹರಿಸಬೇಕು ಎಂದು ತಾನು ಆಶಿಸಿರುವುದಾಗಿ ಕ್ಸಿಜಿನ್ಪಿಂಗ್ ಹೇಳಿದ್ದಾರೆ.