ತಾಂತ್ರಿಕ ದೋಷ: ಸ್ಪೈಸ್ಜೆಟ್ ವಿಮಾನ ಶ್ರೀನಗರದಲ್ಲಿ ತುರ್ತು ಭೂಸ್ಪರ್ಶ
Update: 2025-08-29 21:32 IST
ಸ್ಪೈಸ್ಜೆಟ್ | PTI
ಶ್ರೀನಗರ,ಆ.29: ಶುಕ್ರವಾರ ದಿಲ್ಲಿಯಿಂದ 205 ಪ್ರಯಾಣಿಕರನ್ನು ಹೊತ್ತುಕೊಂಡು ಶ್ರೀನಗರಕ್ಕೆ ಆಗಮಿಸುತ್ತಿದ್ದ ಸ್ಪೈಸ್ಜೆಟ್ ವಿಮಾನವು ಸಿಬ್ಬಂದಿಗಳು ಆಗಸದ ಮಧ್ಯೆ ತಾಂತ್ರಿಕ ದೋಷವನ್ನು ವರದಿ ಮಾಡಿದ ಬಳಿಕ ಇಲ್ಲಿಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶವನ್ನು ಮಾಡಿತು.
ವಿಮಾನವು ಏಕಾಏಕಿಯಾಗಿ ತನ್ನ ಎತ್ತರವನ್ನು ಕಳೆದುಕೊಂಡಿದ್ದು ನಾಲ್ವರು ಮಕ್ಕಳು ಸೇರಿದಂತೆ ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಭೀತಿಯನ್ನು ಹುಟ್ಟಿಸಿತ್ತು. ಹೀಗಾಗಿ ಸಿಬ್ಬಂದಿಗಳು ತುರ್ತು ಭೂಸ್ಪರ್ಶಕ್ಕೆ ಅನುಮತಿ ಕೋರಿದ್ದರು. ಅಪರಾಹ್ನ 3:27ಕ್ಕೆ ವಿಮಾನವು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.
ಈ ಬಗ್ಗೆ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯಕ್ಕೆ ಮಾಹಿತಿ ನೀಡಲಾಗಿದ್ದು, ಸಮಸ್ಯೆಯ ಮೂಲವನ್ನು ಅರಿಯಲು ವಿಮಾನವನ್ನು ತಾಂತ್ರಿಕ ತಪಾಸಣೆಗೆ ಒಳಪಡಿಸಲಾಗಿದೆ.