ವೃತ್ತಿ ರಂಗಭೂಮಿಯ ಜೀವಂತ ಮಾಹಿತಿಕೋಶ: ವಸಂತರಾವ್ ಕುಲಕರ್ಣಿ
ಗೋಪಾಲ ವಾಜಪೇಯಿ
ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿಯ ಕುರಿತಂತೆ ಅಧಿಕಾರವಾಣಿಯಿಂದ ಮಾತಾಡಬಲ್ಲ ಕೆಲವೇ ಜನರಲ್ಲಿ ಒಬ್ಬರಾಗಿದ್ದ ವಸಂತರಾವ್ಕುಲಕರ್ಣಿ, ಹೆಬ್ಬಳ್ಳಿ ಅವರು ಮೊನ್ನೆ 2016,ಜನವರಿ 24ರಂದು ತಮ್ಮ 87ನೆ ವಯಸ್ಸಿನಲ್ಲಿ ನಮ್ಮನ್ನು ಅಗಲಿದರು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹೆಬ್ಬಳ್ಳಿಯವರು ಈ ವಸಂತರಾವ್.ಮನೆ ದೇವತೆಯ ಅರ್ಚನೆಯ ಸಂದರ್ಭದಲ್ಲಿ ವೇಷ ತೊಟ್ಟು ದೇವಾಲಯಕ್ಕೆ ಹೋಗುತ್ತಿದ್ದ ವಸಂತರಾಯರಿಗೆ (ಜನನ:1930) ಅಭಿನಯದತ್ತ ಆಕರ್ಷಣೆ ಹುಟ್ಟಿದ್ದು ಆ ಹೊತ್ತಿನಲ್ಲೇ. ಆಗ ಓಣಿಯಲ್ಲಿ ರೈತಾಪಿ ಜನರೆಲ್ಲಾ ಸೇರಿ ವರ್ಷಕ್ಕೊಮ್ಮೆ ದೊಡ್ಡಾಟಗಳನ್ನು ಆಡುವುದು ವಾಡಿಕೆ. ಹಳ್ಳಿಯಲ್ಲಿ ಹುಟ್ಟಿದ ನನ್ನಂಥವರಿಗೇ ಗೊತ್ತು ದೊಡ್ದಾಟದ ಆಕರ್ಷಣೆ. ಹೆಬ್ಬಳ್ಳಿ ಸಮೀಪದ ಬೆಳವಲಕೊಪ್ಪದ ಜನ ದೊಡ್ಡಾಟ ಏರ್ಪಡಿಸಿದಾಗ ವಸಂತರಾಯರಿಗೆ ಇನ್ನೂ ಹದಿನಾಲ್ಕು ವರ್ಷ ವಯಸ್ಸು.ಈ ತೇಜಸ್ವೀ ಬಾಲಕನಿಗೆ ಆಗ ಒಲಿದು ಬಂದದ್ದು ‘ವೀರ ಅಭಿಮನ್ಯು’ವಿನ ಪಾತ್ರ. ಮುಂದೆ ಮೂರೇ ವರ್ಷಕ್ಕೆ ಕಂದಗಲ್ ಹನುಮಂತರಾಯರ ‘ಅಕ್ಷಯಾಂಬರ’ ನಾಟಕದಲ್ಲಿ ಕೃಷ್ಣನಾಗಿ ಅಭಿನಯಿಸಿ ಜನಮನ ಸೂರೆಗೊಂಡರು. ಆಗ ವಸಂತರಾಯರಿನ್ನೂ ಹದಿನೇಳರ ಹರಯದ ಹುಮ್ಮಸ್ಸಿನ ಹುಡುಗ.
ಅಲ್ಲಿಂದಾಚೆ ಅವರು ನಾಟಕಗಳ ಹುಚ್ಚು ಹಚ್ಚಿಕೊಂಡುಬಿಟ್ಟರು. ಗ್ರಾಮೀಣ ಜನರ ಒತ್ತಾಯದ ಮೇರೆಗೆ ವೃತ್ತಿ ಕಂಪೆನಿಯ ಮಾದರಿಯ ನಾಟಕಗಳತ್ತ ಒಲವು ತೋರಿದರು. ಕಂದಗಲ್ಲರ ಸರಳ ರಗಳೆಯ ಭಾಷೆಯ ಮೋಡಿಯಿಂದ ಹೊರಬರಲಾಗದೆ ಆ ಮಹಾ ನಾಟಕಕಾರನ ಸನ್ನಿಧಿಯಲ್ಲಿ ಹೋಗಿ ನಿಂತರು. ಮೊನ್ನೆ ಮೊನ್ನೆಯ ತನಕ ವಸಂತರಾಯರ ಬಾಯಿಂದ ಹೊಮ್ಮುತ್ತಿದ್ದ ಕಂದಗಲ್ಲರ ನುಡಿಗಡಣವನ್ನು ಆಲಿಸಿ ನಾನು ಆ ಎಂದು ಬಾಯಿ ತೆರೆದು ಕೂತದ್ದಿದೆ. ನಾನಿಲ್ಲಿ ಬೆಂಗಳೂರಿಗೆ ಬಂದ ಮೇಲೆ, ಸುಭದ್ರಮ್ಮ ಮನ್ಸೂರ್ ಮುಂತಾದವರು ಅಭಿನಯಿಸಿದ ‘ರಕ್ತರಾತ್ರಿ’ ನಾಟಕ ನೋಡುತ್ತಿದ್ದಾಗ ನನಗೆ ಕಣ್ಣೆದುರು ನಿಲ್ಲುತ್ತಿದ್ದುದು ನಮ್ಮ ವಸಂತರಾಯರೇ.
ಕಂದಗಲ್ ಹನುಮಂತರಾಯರ ಸನ್ನಿಧಿಯಲ್ಲಿ ಬರವಣಿಗೆಗೆ ತೊಡಗಿದ ವಸಂತರಾಯರ ರಂಗಪ್ರೇಮ,ಅವರಿಗೆ ತಲಾಠಿ (ಶಾನುಭೋಗಿಕೆ)ಕೆಲಸ ದೊರೆತ ಮೇಲೆಯೂ ಮುಂದುವರಿಯಿತು.ಆಲ್ಲಿಂದ ಶುರುವಾಯಿತು ಅವರ ಗಂಭೀರ ಅಧ್ಯಯನದ ಅಧ್ಯಾಯ.ಆ ಕಾಲದ ಎಲ್ಲ ವೃತ್ತಿ ಕಂಪೆನಿ ಮಾಲಕರ, ನಟ-ನಟಿಯರ ಸಂಪರ್ಕಕ್ಕೆ ಬಂದ ವಸಂತರಾಯರು ಅವರೆಲ್ಲರ ಪಾಲಿಗೆ ಒಂದು ರೀತಿಯಲ್ಲಿ ಆಪದ್ಬಂಧುವಾಗಿ ನಿಂತದ್ದೂ ನಿಜ. ಅಷ್ಟೇ ಅಲ್ಲ, ಸುಳ್ಳದ ದೇಸಾಯರ ಶ್ರೀಶೈಲ ಮಲ್ಲಿಕಾರ್ಜುನ ನಾಟಕ ಕಂಪೆನಿ, ಗುಡಗೇರಿ ಬಸವರಾಜರ ಶ್ರೀ ಸಂಗಮೇಶ್ವರ ನಾಟ್ಯ ಸಂಘಗಳಲ್ಲಿ ನಟನಾಗಿಯೂ ಅವರು ಪ್ರವೇಶ ಪಡೆದರು. ಇದರಿಂದ ಕಲಾವಿದರೊಂದಿಗಿನ ಆತ್ಮೀಯತೆ ಹೆಚ್ಚಿ, ನಂತರದ ಪೀಳಿಗೆಯ ಕಲಾವಿದರೆಲ್ಲರ ಪ್ರೀತಿಯ ಕಾಕಾ ಆಗಿ ನಿಂತರು ವಸಂತರಾಯರು.
ತಮ್ಮ ಸಾಹಿತ್ಯ ಪ್ರೇಮ, ಭಾಷಾ ಪ್ರೌಢಿಮೆಗಳ ಕಾರಣದಿಂದ ವಸಂತರಾಯರು ಮತ್ತೊಬ್ಬ ಹಿರಿಯ ನಾಟಕಕಾರ ನಲವಡಿ ಶ್ರೀಕಂಠಶಾಸ್ತ್ರಿಗಳ ಪ್ರೀತಿಗೆ ಪಾತ್ರರಾದರು. ಅವರ ಪ್ರೇರಣೆಯ ಮೇರೆಗೆ ರಂಗಭೂಮಿಯ ದಿಗ್ಗಜರ ಕುರಿತು ಲೇಖನಗಳನ್ನು ಬರೆಯಲು ಆರಂಭಿಸಿದರು. ಕಂದಗಲ್ಲರ ಭಾಷಾ ಸಂಪತ್ತು, ನಲವಡಿಯವರ ಜ್ಞಾನ ಸಂಪತ್ತುಗಳೆರಡರ ಲಾಭವನ್ನು ಪಡೆದ ವಸಂತರಾಯರ ಬರವಣಿಗೆಯ ಮೆರುಗೇ ವಿಶೇಷವಾದದ್ದು. ಆ ಇಬ್ಬರ ಬಗ್ಗೆಯೂ ವಸಂತರಾಯರಿಗೆ ಇನ್ನೆಲ್ಲಿಲ್ಲದ ಗೌರವ ಭಾವ. ಕಂದಗಲ್ಲರ ಶಿಷ್ಯರನ್ನೆಲ್ಲ ಒಂದೆಡೆ ಸೇರಿಸಿ,ವಸಂತರಾವ್ ಕುಲಕರ್ಣಿಯವರು ಸಂಘಟಿಸಿದ್ದ ಅದ್ಭುತ ಕಾರ್ಯಕ್ರಮವೊಂದನ್ನು ನೆನಪಿಸಿಕೊಳ್ಳುವ ಜನ ಇನ್ನೂ ಇದ್ದಾರೆ.
ರಂಗಭೂಮಿಗೆ ಸಂಬಂಧಿಸಿದ ಯಾವುದೇ ರೀತಿಯ ನೆರವಿಗೂ ವಸಂತರಾಯರು ಸದಾ ಸಿದ್ಧರಾಗಿರುತ್ತಿದ್ದರು. ನನಗೊಮ್ಮೆ ಕೆಲವೊಂದು ಹಳೆಯ ಕಂಪೆನಿಗಳ ಕುರಿತ ಮಾಹಿತಿ ಬೇಕಾಯಿತು. ಅವರೆದುರು ಪ್ರಸ್ತಾಪಿಸಿದೆ. ಮುಂದಿನ ವಾರವೇ ಅವರು ಸಂಬಂಧಿಸಿದ ವ್ಯಕ್ತಿಗಳು ಎಲ್ಲಿರುವರೆಂಬುದನ್ನು ಪತ್ತೆ ಹಚ್ಚಿ, ನನ್ನನ್ನು ಅವರ ಬಳಿಗೆ ಕರೆದೊಯ್ದಿದ್ದರು. ಇದೆ ರೀತಿಯ ನೆರವನ್ನು ಅವರು ವೃತ್ತಿ ರಂಗಭೂಮಿ ಕುರಿತ ಪಿಎಚ್ಡಿ ವಿದ್ಯಾರ್ಥಿಗಳಿಗೂ ನೀಡಿದ್ದುಂಟು. ಡಾ.ರಹಮತ್ ತರೀಕೆರೆಯವರಂಥ ಲೇಖಕರೂ ಮಾಹಿತಿ ಬಯಸಿ ವಸಂತರಾಯರ ಅಲ್ಲಿಗೆ ಬರುತ್ತಿದ್ದುದುಂಟು.
ನಾಡಿನ ಹಿರಿಯ ರಂಗ ಕಲಾವಿದರ ಭಾವಚಿತ್ರಗಳನ್ನು ಸಂಗ್ರಹಿಸಿ, ಮಾಹಿತಿ ಸಮೇತ ಒಂದು ಹೊತ್ತಿಗೆಯನ್ನು ಹೊರತರುವ ಉದ್ದೇಶ ಅವರಿಗಿತ್ತು. ಅದು ಕಾರ್ಯರೂಪಕ್ಕೆ ಬಂತೋ ಇಲ್ಲವೋ ತಿಳಿಯದು. ಉಳಿದ ಕಲಾವಿದರಿಗೆ ಪ್ರಶಸ್ತಿ, ಪಿಂಚಣಿ, ವೈದ್ಯಕೀಯ ನೆರವು, ನಿವೇಶನ ಕೊಡಿಸುವುದರತ್ತಲೇ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದವರು ವಸಂತರಾಯರು. ತಮ್ಮ ಬಗ್ಗೆ ಎಂದೂ ಯೋಚಿಸಿದವರಲ್ಲ, ಪ್ರಶಸ್ತಿಗಾಗಿ ಯಾಚಿಸಿದವರಲ್ಲ. ಅವರ ಅಪಾರ ರಂಗಭೂಮಿ ಸೇವೆಯನ್ನು ಗಮನಿಸಿ, ಗುರುತಿಸಿ ಕರ್ನಾಟಕ ನಾಟಕ ಅಕಾಡಮಿ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾಜ್ಯೋತ್ಸವ ಗೌರವ ಮತ್ತಿತರ ಸಂಘ-ಸಂಸ್ಥೆಗಳ ಪ್ರಶಸ್ತಿಗಳು ವಸಂತರಾಯರನ್ನು ಅರಸಿಕೊಂಡು ಬಂದಿವೆ.