ಹೋರಾಟ, ಭಿನ್ನಾಭಿಪ್ರಾಯ ಅಪರಾಧವೇ?

Update: 2016-02-28 17:26 GMT

ಭಾಗ 2

ಇನ್ನು ನಾವು ಹುಲಿ ಸಿಂಹಗಳಿಗೆ ಚಿಕನ್ ತಿನ್ನಿಸಿದ ಘಟನೆಗೆ ಮರಳುವುದಾದರೆ ಮುಂಬೈಯ ಮೃಗಾಲಯದಲ್ಲಿ ಒಂದು ವಾರಗಳ ಕಾಲ ಹುಲಿ ಸಿಂಹಗಳಿಗೆ ಚಿಕನ್ ತಿನ್ನಿಸಿದ ಪರಿಣಾಮ ಸಮಸ್ಯೆಯಾಗಿ ಇಡಿ ಮಹಾರಾಷ್ಟ್ರದಲ್ಲಿನ ಪಶುಗಳ ಮಾರುಕಟ್ಟೆ ಕುಸಿದು ಬಿತ್ತು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ದಲಿತರು ಸೇರಿದಂತೆ ಸಾವಿರ ಸಾವಿರ ಜನ ತೊಂದರೆಗೆ ಅತಂಕಕ್ಕೆ ಒಳಗಾದರು. ಇವರ್ಯಾರಿಗೂ ಗ್ರಾಮೀಣ ಆರ್ಥಿಕತೆಯಲ್ಲಿ ಗೋವಿನ ಪಾತ್ರದ ಕುರಿತ ಕೊಂಚವೂ ಅರಿವಿರಲಿಲ್ಲ. ಹಾಗೆ ನೋಡಿದರೆ ಗ್ರಾಮೀಣ ಭಾರತದ ಆರ್ಥಿಕತೆಯಲ್ಲಿ ಗೋವು ಮಹತ್ವದ ಪಾತ್ರ ವಹಿಸುತ್ತದೆ...
ಇದನ್ನೆಲ್ಲ ಆಧರಿಸಿ ಮೊನ್ನೆ ಟೈಮ್ಸ್ ಆಫ್ ಇಂಡಿಯಾ ಕೊಲ್ಲಾಪುರದ ಚಪ್ಪಲಿ ಉದ್ಯಮ ಕುಸಿದು ಬಿದ್ದಿರುವ ಕುರಿತು ಬಹಳ ಅದ್ಭುತವಾದ ವರದಿಗಳನ್ನು ಪ್ರಕಟಿಸಿತು. ಇದು ಒಂದು ಅರ್ಥದಲ್ಲಿ ಮೇಕ್ ಇನ್ ಇಂಡಿಯಾ, ಬ್ರೇಕ್ ಇನ್ ಇಂಡಿಯಾ ಎನ್ನುವಂತಿದೆ. ನಿಮಗೆ ಗೊತ್ತಿರಲಿ ಕೊಲ್ಲಾಪುರದ ಚಪ್ಪಲಿಗಳು ಅಂತಾರಾಷ್ಟ್ರೀಯ ಬ್ರಾಂಡ್ ಹೊಂದಿವೆ, ಜಾಗತೀಕರಣ, ಉದಾರೀಕರಣಕ್ಕೂ ಪೂರ್ವದಲ್ಲಿಯೇ ಜಗತ್ತಿನ ಎಲ್ಲ ಭಾಗಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಿದ ಹಿರಿಮೆ ಕೊಲ್ಲಾಪುರದ ಚಪ್ಪಲಿ ಉದ್ಯಮಕ್ಕೆ ಇತ್ತು. ಆದರೆ ಇಂದು ಪ್ರಾಣಿ ಮತ್ತು ಗೋ ಹತ್ಯೆ ನಿಷೇಧದಿಂದ ಅ ನಿಷೇಧವನ್ನು ಎಮ್ಮೆ ಮತ್ತು ಕೋಣಗಳಿಗೂ ವಿಸ್ತರಿಸಿರುವುದರಿಂದ ಕೊಲ್ಲಾಪುರದ ಚಪ್ಪಲಿ ಉದ್ಯಮ ನೆಲ ಕಚ್ಚಿದೆ. ನಿಜವಾಗಿಯೂ ಕೊಲ್ಲಾಪುರದ ಚಪ್ಪಲಿ ಉದ್ಯಮವನ್ನು ನಡೆಸುತ್ತಿದ್ದವರು ಮುಸ್ಲಿಮ್ ಜನರಲ್ಲ ಬದಲಾಗಿ ದಲಿತರು. ಸರಕಾರದ ಈ ಕ್ರಮದಿಂದ ಒಂದು ಕಡೆ ಮುಸ್ಲಿಮರು ತೊಂದರೆಗೆ ಒಳಗಾದರೆ ಮತ್ತೊಂದು ಕಡೆ ದಲಿತರನ್ನು ತುಳಿದು ಹಾಕಲಾಗಿದೆ. ಅದರ ಜೊತೆಗೆ ಪಶುಗಳ ಉದ್ಯಮಗಳಲ್ಲಿ ತೊಡಗಿದ್ದ ಮರಾಠ ಇತ್ಯಾದಿ ಹಿಂದುಳಿದ ವರ್ಗಗಳನ್ನು ನಾಶಮಾಡಲಾಗಿದೆ. ಒಂದು ಗುಂಪಿನ ದಾಳಿಗೆ/ಕೆಲಸಕ್ಕೆ ಇಂದು ನಾವು ಎಲ್ಲ ಕಡೆಗಳಿಂದ ಬಂಧನಕ್ಕೆ ಒಳಗಾಗುತ್ತಿದ್ದೇವೆ...
ನಾನು ಇಲ್ಲಿನ ವಿಷಯಕ್ಕೆ ಮರಳುವುದಾದರೆ ಕಳೆದ ಕೆಲ ದಿನಗಳಿಂದ ಕೆಲ ಸ್ನೇಹಿತರು ನನಗೆ ಕರೆ ಮಾಡಿ ನಿಜಕ್ಕೂ ಈ ಸಂಗತಿಗಳು ಘಟಿಸುತ್ತಿವೆಯೇ ಎಂದು ಕೇಳುತ್ತಿದ್ದಾರೆ ನಾವು ಅವರಿಗೆ ಬನ್ನಿ ಗೊತ್ತಾಗುತ್ತದೆ ಇವು ನಮ್ಮ ನಡುವೆ ಘಟಿಸುತ್ತಿರುವ ಸಂಗತಿಗಳೆಂದು ಹೇಳುತ್ತಿದ್ದೇನೆ...
ನಾನು ಇದನ್ನು ಹೀಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಇಂದು ಜೆಎನ್‌ಯು ಮತ್ತು ದೇಶದ ಇತರ ಕಡೆಗಳಲ್ಲಿ ನಡೆಯುತ್ತಿರುವ ಹೋರಾಟಗಳಿಂದ ಕೆಲವು ಜನ ಅತಂಕಕ್ಕೆ, ಬೇಸರಕ್ಕೆ ಒಳಗಾದಂತೆ ಕಾಣುತ್ತಾರೆ. ಆದರೆ ಈ ಘಟನೆಗಳು ಅವರಿಗೆ ಆಶ್ಚರ್ಯ ಉಂಟು ಮಾಡಿಲ್ಲ. ಅವರಿಗೆ ಇಂತಹ ಘಟನೆಗಳಿಂದ ಅತಂಕವಾಗುತ್ತದೆ. ಆದರೆ ಆಶ್ಚರ್ಯ ಆಗುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳಲು ನಾವು ಸಮಕಾಲೀನ ಭಾರತದ ರಾಜಕೀಯದಲ್ಲಿ ಆದ ಬದಲಾವಣೆಗಳನ್ನು ಗುರುತಿಸಬೇಕು. ದಶಕಗಳ ಕಾಲ ಭಾರತದ ರಾಜಕಾರಣದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಆದರೆ ಇಂದು ಈ ದೇಶದ ರಾಜಕಾರಣದಲ್ಲಿ ಆಗಿರುವ ಬಹಳ ಬದಲಾವಣೆಯ ಕುರಿತು ನಾವು ಯೋಚಿಸಬೇಕು. ಚಿಂತಿಸಬೇಕು. ಆ ಬದಲಾವಣೆ ಒಬ್ಬ ಸಕ್ರಿಯ ಆರೆಸ್ಸೆಸ್ ಪ್ರಚಾರಕ ಬಹುಮತ ಪಡೆದು ಪ್ರಧಾನಿಯಾಗಿರುವುದು. ಇದು ಭಾರತದ ರಾಜಕಾರಣದಲ್ಲಿ ಆಗಿರುವ ಬಹಳ ದೊಡ್ಡ ಬದಲಾವಣೆ. ಈ ಹಿಂದೆಯೂ ಆರೆಸ್ಸೆಸ್ ಪ್ರಚಾರಕರು ನಮ್ಮ ನಾಯಕರಾಗಿದ್ದಾರೆ, 40 ವರ್ಷಗಳ ಕಾಲ ಪ್ರಚಾರಕರಾಗಿದ್ದವರು. ಆದರೆ ಅವರು ಬಹುಮತವಿಲ್ಲದ ಸರಕಾರವನ್ನು ನಡೆಸುತ್ತಿದ್ದರು. ಆ ಕಾರಣಕ್ಕೆ ಅವರು ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಕುರಿತು ಕೆಲವು ಮಿತಿಗಳು ಇದ್ದವು. ಆ ಕಾರಣಕ್ಕೆ ಅವರು ‘‘ಸಮ್ಮಿಶ್ರ ಸರಕಾರದ ಧರ್ಮ’’ ಇತ್ಯಾದಿ ಮಾತುಗಳನ್ನು ಆಡುತ್ತಿದ್ದರು. ಆದರೆ ಇಂದು ನಾವು ಬಹುಮತ ಪಡೆದಿರುವ ಒಬ್ಬ ಸಂಘದ ಪ್ರಚಾರಕ ಪ್ರಧಾನಿಯಾಗಿರುವುದನ್ನು ನೋಡುತ್ತಿದ್ದೇವೆ. ಈ ಅಂಶ ಅವರನ್ನು ನಿಜವಾಗಿಯೂ ತಾವು ಏನು ಎಂಬುದನ್ನು ವ್ಯಕ್ತಪಡಿಸಲು ವಾತಾವರಣ ಸೃಷ್ಟಿಮಾಡಿಕೊಟ್ಟಿದೆ. ಅದನ್ನೇ ಅವರು ಮಾಡುತ್ತಿದ್ದಾರೆ ಮತ್ತು ಮಾಡುತ್ತಾರೆ ಕೂಡಾ. ಇದರಿಂದ ನಾವು ಈ ಕುರಿತು ಅತಂಕಕ್ಕೆ ಒಳಗಾಗಿ ಚರ್ಚೆ ಮಾಡಬಹುದೇ ಹೊರತು ಆಶ್ಚರ್ಯಕ್ಕೆ ಒಳಗಾಗುವ ಅಗತ್ಯ ಇಲ್ಲ. ಏಕೆಂದರೆ ಇದು ನಿರೀಕ್ಷಿತ...
ನಾವು ಇಂದು ಎಲ್ಲ ಕಡೆಗಳಿಂದ ನಂಬಲಾರದಂತಹ ಅಸಮಾನತೆ ಇರುವ ದೇಶದಲ್ಲಿ ಬದುಕುತ್ತಿದ್ದೇವೆ. ನಿಮ್ಮ ನೀತಿ ಅಯೋಗದ ಜನ, ನಿಮ್ಮ ಆರ್ಥಿಕ ಸಲಹೆಗಾರರು ಈ ಹೆಚ್ಚುತ್ತಿರುವ ಅಸಮಾನತೆಯನ್ನು ದೊಡ್ಡ ಸಮಸ್ಯೆಯಾಗಿ ಪರಿಗಣಿಸುವುದೇ ಇಲ್ಲ ಬದಲಾಗಿ, ಮಾರುಕಟ್ಟೆ ಭಾರತವನ್ನು ಬಿಡುಗಡೆಗೊಳಿಸಿದೆ, ಅಲ್ಪ ಪ್ರಮಾಣದ ಅಸಮಾನತೆ ಇರಬೇಕು, ಇದರಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ ಎಂಬಿತ್ಯಾದಿ ಮಾತುಗಳನ್ನು ಆಡುತ್ತಿದ್ದಾರೆ...
ಇಂದು ಈ ದೇಶದಲ್ಲಿ 2011ರ ಜನಗಣತಿಯ ಅಂಕಿ-ಅಂಶಗಳನ್ನು ಮುಂದಿರಿಸಿ ಕಳೆದ ಇಪ್ಪತ್ತನಾಲ್ಕು ತಿಂಗಳಲ್ಲಿ ಮಹತ್ವ ಎನ್ನಿಸುವ ನಾಲ್ಕರಿಂದ ಐದು ಅಂಕಿ-ಆಂಶ ಮತ್ತು ಮಾಹಿತಿಗಳ ವರದಿಗಳು ಬಂದಿವೆ. ಅವುಗಳಲ್ಲಿ ಬಹಳ ಪ್ರಮುಖವಾದವು ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ. ವಾಸ್ತವದಲ್ಲಿ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಬಿಡುಗಡೆಗೊಳಿಸಿಲ್ಲ. ಆ ಕಾರಣಕ್ಕೆ ನಮಗೆ ಜಾತಿ ಆಧಾರಿತ ವಿಶ್ಲೇಷಣೆ ಸಾಧ್ಯವಿಲ್ಲ. ಆದರೆ ಇಂದು ವರ್ಗಗಳ ಆಧಾರದಲ್ಲಿನ ಮಾಹಿತಿಗಳನ್ನು, ಅಂಕಿ-ಅಂಶಗಳನ್ನು ನೋಡಿದರೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ ಗಳ ಪ್ರಕಾರ ಇಂದು ದೇಶದ ಶೇ.75 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ರೂ.ಐದು ಸಾವಿರಕ್ಕಿಂತ ಕಡಿಮೆ ಮಾಸಿಕ ಅದಾಯ ಹೊಂದಿದ್ದಾನೆ. ಇದನ್ನು ನಾವು ರೂ.10 ಸಾವಿರಕ್ಕೆ ಏರಿಸಿದರೆ ಈ ದೇಶದ ಶೇ.90ಗ್ರಾಮೀಣ ಕುಟುಂಬಗಳು ರೂ.10 ಸಾವಿರಕ್ಕಿಂತ ಕಡಿಮೆ ವರಮಾನ ಹೊಂದಿವೆ. ಆದರೆ ಇದೇ ದೇಶದಲ್ಲಿ ಪೋರ್ಬ್ ಸಮೀಕ್ಷೆಯ ಶ್ರೀಮಂತರ ಪಟ್ಟಿಯಲ್ಲಿ ಈ ದೇಶದ ಮಿನಿಮಮ್ ಶ್ರೀಮಂತ 3.5 ಕೋಟಿ ಡಾಲರ್ ಹೊಂದಿದ್ದಾನೆ. ಅತಿ ಹೆಚ್ಚು ಸಂಪತ್ತನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಈ ದೇಶ 4 ರಿಂದ 5ನೆ ಸ್ಥಾನದಲ್ಲಿದೆ. ನನ್ನ ಪ್ರಕಾರ ನಾವು ಎರಡನೆಯ ಸ್ಥಾನದಲ್ಲಿ ಇದ್ದೇವೆ. ಸದ್ಯಕ್ಕೆ ಐದನೆ ಸ್ಥಾನ ಎಂದುಕೊಳ್ಳಿ. ಯಾವ ದೇಶ ಒಂದು ಕಡೆ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 5ನೆ ಸ್ಥಾನ ಗಳಿಸಿದೆಯೋ ಅದೇ ದೇಶ ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 135ನೆ ಸ್ಥಾನ ಹೊಂದಿದೆ. ಲ್ಯಾಟಿನ್ ಅಮೇರಿಕದ ಎಲ್ಲ ದೇಶಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿವೆ. 30 ವರ್ಷಗಳ ಕಾಲ ನಾಗರಿಕ ಯುದ್ಧವನ್ನು ಅನುಭವಿಸಿದ ಶ್ರೀಲಂಕಾ, ಅಭಿವೃದ್ಧಿ ಸೂಚ್ಯಂಕದಲ್ಲಿ ನಮಗಿಂತ 20 ಸ್ಥಾನ ಮೇಲಿದ್ದರೆ ಜಗತ್ತಿನಲ್ಲಿಯೇ ಅತ್ಯಂತ ಕ್ರೌರ್ಯಯುತ ಯುದ್ದಕ್ಕೆ ಒಳಗಾಗಿ ಯುದ್ಧದಲ್ಲಿ ಬಳಸಿದ ರಾಸಾಯನಿಕ ಮತ್ತು ಅಸ್ತ್ರಗಳ ಕಾರಣಕ್ಕೆ ಇಂದಿಗೂ ಹಲವು ಪೀಳಿಗೆಗಳು ತೊಂದರೆಗೊಳಗಾಗಿರುವ ವಿಯೆಟ್ನಾಂ ನಮಗಿಂತ 50 ಸ್ಥಾನ ಮೇಲಿದೆ. ಈ ಎಲ್ಲ ದೇಶಗಳು ಮಾನವನ ಅಭಿವೃದ್ಧಿ ಸೂಚ್ಯಂಕದಲ್ಲಿ ನಮಗಿಂತ ಮುಂದಿವೆ ಇದಕ್ಕೆ ಕಾರಣ ಆ ದೇಶಗಳಲ್ಲಿ ಡಾಲರ್ ಮಿಲೇನಿಯರ್‌ಗಳ ಉತ್ಪಾದನೆ ಆಗುತ್ತಿಲ್ಲ...
 ನಿಮಗೆ ಆಶ್ಚರ್ಯ ಆಗಬಹದು. ನಾರ್ಡಿಕ್ ಮತ್ತು ಸ್ಕಾಂಡಿನೇವಿಯನ್ ದೇಶಗಳಾದ ಡೆನ್ಮಾರ್ಕ್, ಸ್ವೀಡೆನ್, ಫೀನ್ಲೆಂಡ್, ಐಸ್ಲೆಂಡ್, ನಾರ್ವೆ ಎಲ್ಲ ದೇಶಗಳಲ್ಲಿ ಭಾರತದ ಒಟ್ಟು ಡಾಲರ್ ಬಿಲಿಯನೇರ್‌ಗಳ ಪೈಕಿ ಶೇ.3 ರಷ್ಟು ಮಾತ್ರ ಬಿಲಿಯನೇರ್‌ಗಳಿದ್ದಾರೆ. ಚೀನಾದಲ್ಲಿ ನಮಗಿಂತ ಜಾಸ್ತಿ ಇರಬಹದು. ರಷ್ಯಾದಲ್ಲಿ ಪ್ರತಿ ಐದು ವರ್ಷಕ್ಕೂಮ್ಮೆ ಎಲ್ಲ ಬಿಲಿಯನೇರ್‌ಗಳನ್ನು ಜೈಲಿಗೆ ಕಳುಹಿಸುತ್ತಾರೆ, ನಾವು ಪಾರ್ಲಿಮೆಂಟಿಗೆ ಕಳುಹಿಸುತ್ತೇವೆ ಅಷ್ಟೇ ವ್ಯತ್ಯಾಸ. ಹೌದು ಈ ಅರ್ಥದಲ್ಲಿ ನಮ್ಮದು ಪ್ರೌಢ ಪ್ರಜಾತಂತ್ರ...


ಇದರ ಜೊತೆಯಲ್ಲಿಯೇ ಪಾರ್ಲಿಮೆಂಟಿನಲ್ಲಿ ಇರುವ ಅಸಮಾನತೆಯ ಕುರಿತು ಕೆಲವು ವಿಷಯಗಳನ್ನು ನಾನು ನಿಮಗೆ ಹೇಳುತ್ತೇನೆ. 2014ರ ಚುನಾವಣೆಯ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಂತೆ ನಮ್ಮ ದೇಶದ ಲೋಕಸಭೆಯ ಶೇ.82 ಸಂಸದರು ಕೋಟ್ಯಧಿಪತಿಗಳು. ಇದು ಅವರೇ ಸ್ವ-ಘೋಷಿಸಿಕೊಂಡಿರುವ ಸಂಗತಿ. ಹಾಗಾದರೆ ಐದು ಮತ್ತು ಹತ್ತು ವರ್ಷಗಳ ಹಿಂದಿನ ಪ್ರಮಾಣ ಏನಿತ್ತು ಎಂದು ನೋಡಿದರೆ 2004ರ ಸಂದರ್ಭದಲ್ಲಿ ಒಟ್ಟು ಸಂಸದರಲ್ಲಿ ಶೇ.32 ಮಂದಿ ಕೋಟ್ಯಧಿಪತಿಗಳಿದ್ದರೆ 2009 ರಲ್ಲಿ ಅದು 53 ಶೇ.ಕ್ಕೆ ಏರಿದೆ. 2014ರಲ್ಲಿ ನಾನು ಆಗಲೇ ಹೇಳಿದಂತೆ 82 ಶೇ.ಸಂಸದರು ಕೋಟ್ಯಧಿಪತಿಗಳಿದ್ದಾರೆ. ಇದು ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಬೇಕಾದ ಪ್ರಮಾಣ ಪತ್ರಗಳನ್ನು ಆಧರಿಸಿದ ಲೆಕ್ಕ. ಇಲ್ಲಿ ನೀವು ಎಷ್ಟು ಬೇಕಾದರೂ ಬರೆಯಬಹದು. ನಿಮ್ಮ ಆದಾಯ ತೆರಿಗೆಯ ದಾಖಲೆಗಳನ್ನೇನೂ ಇಲ್ಲಿ ಕೇಳುವುದಿಲ್ಲ. ನಮ್ಮ ನಡುವಿನ ಸತ್ಯವಂತ ರಾಜಕಾರಣಿಯಾದ ಚಂದ್ರಬಾಬು ನಾಯ್ಡು ಅವರು 2014 ರಲ್ಲಿ ಘೋಷಿಸಿಕೊಂಡಿರುವ ಆಸ್ತಿ 2004ಕ್ಕಿಂತ ಕಡಿಮೆ ಇದೆ. ಇದು ನಿಜವಾದ ನಿಸ್ವಾರ್ಥ ಜೀವನ ಇದಕ್ಕೆ ಅವರು ಕೊಡುವ ಕಾರಣ ಕಳೆದ ಸಾರಿ ತನ್ನ ಮನೆಯನ್ನು ಮಾರುಕಟ್ಟೆಯ ಮೌಲ್ಯದಲ್ಲಿ ಲೆಕ್ಕ ಹಾಕಿದ್ದರು, ಆದರೆ ಈ ಬಾರಿ ಅದನ್ನು ತಾನು ಕೊಂಡ ಬೆಲೆಯಲ್ಲಿ ಲೆಕ್ಕ ಹಾಕಿದ್ದಾರೆ ಎಂದಿದ್ದಾರೆ. ಅದಕ್ಕೆ ನಾನು ಹೇಳಿದ್ದು ಮಾರುಕಟ್ಟೆ ನಿಮಗೆ ಆಯ್ಕೆಗಳನ್ನು ಕೊಡುತ್ತದೆ ಎಂದು ಹೇಳಿದ್ದು... ನಾವು ಮಾರುಕಟ್ಟೆ ಕೊಡುವ ಆಯ್ಕೆಗಳ ಕುರಿತಂತೆ ಮಾತನಾಡುತ್ತಿದ್ದೆವು. ಇಂದು ಜಗತ್ತಿನಾದ್ಯಂತ ಒಂದು ಬಿಲಿಯನ್ ಜನರು (ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಮಂಡಳಿ ಬೇರೆ ಬೇರೆ ವ್ಯಾಖ್ಯೆಗಳನ್ನು ನೀಡುವ ಮೂಲಕ ಆ ಸಂಖ್ಯೆಯನ್ನು 850 ಮಿಲಿಯನ್ ಎಂದು ಹೇಳುತ್ತಿದೆ) ಪ್ರತಿ ರಾತ್ರಿ ಹಸಿವಿನಿಂದಲೇ ಮಲಗುತ್ತಿದ್ದಾರೆ. ನಿಜವಾಗಲೂ ಮಾರುಕಟ್ಟೆ ಹಸಿವಿನಿಂದ ಕಂಗೆಟ್ಟರುವ ಒಂದು ಬಿಲಿಯನ್ ಜನರಿಗೆ ಆಯ್ಕೆಯ ಸ್ವಾತಂತ್ರವನ್ನು ನೀಡಿದ್ದರೆ ಅವರ ಆಯ್ಕೆ ಆ ಹೊತ್ತಿನ ಆಹಾರವಾಗಿರುತ್ತಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕೆ ನಾವು ಮಾರುಕಟ್ಟೆ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿದೆ ಎಂಬ ಮಿಥ್ಯೆಯನ್ನು ತಿರಸ್ಕರಿಸಬೇಕಿದೆ...
ನಾವು ಆಗಲೇ ಚರ್ಚಿಸಿದಂತೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶಗಳ ಪ್ರಕಾರ ಇಂದು ದೇಶದ ಶೇ.75 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಐದು ಸಾವಿರಕ್ಕಿಂತ ಕಡಿಮೆ ಅದಾಯ ಹೊಂದಿದ್ದಾನೆ. ಈ ದೇಶದ 90ಶೇ.ಗ್ರಾಮೀಣ ಕುಟುಂಬಗಳು ರೂ.10 ಸಾವಿರಕ್ಕಿಂತ ಕಡಿಮೆ ವರಮಾನ ಹೊಂದಿವೆ. ಕೇವಲ ಶೇ.8 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ರೂ.10 ಸಾವಿರಕ್ಕಿಂತ ಹೆಚ್ಚಿನ ಅದಾಯವನ್ನು ಪಡೆಯುತ್ತಿದ್ದಾನೆ. ಇದು ನಮ್ಮ ನಡುವಿನ ಸ್ಥಿತಿ...
ಇನ್ನು ನ್ಯಾಷನಲ್ ಸ್ಯಾಂಪಲ್ ಸರ್ವೇ ಇಂಡಿಯಾದ ಅಂಕಿ-ಅಂಶಗಳನ್ನು ನೋಡುವುದಾದರೆ ಭಾರತದಲ್ಲಿನ ಐದು ಸದಸ್ಯರುಳ್ಳ ಕೃಷಿ ಕುಟುಂಬ, ಕೃಷಿ ಮತ್ತು ಕೃಷೀಯೇತರ ಮೂಲಗಳಿಂದ ಗಳಿಸುವ ಮಾಸಿಕ ಅದಾಯ 6,426 ರೂಪಾಯಿ. ಇದು ಇಂದಿನ 97 ಯು.ಎಸ್ ಡಾಲರ್‌ಗೆ ಸಮನಾಗಿದೆ. ಒಂದು ಕಡೆ ಈ 6426 ರೂಪಾಯಿ ಕೇರಳ, ಪಂಜಾಬ್ ರಾಜ್ಯಗಳ ಕುಟುಂಬಗಳ ಸರಾಸರಿ ಗಳಿಕೆಯನ್ನು ತೋರಿಸಿದರೆ ಇನ್ನೊಂದು ಕಡೆ ಛತ್ತಿಸ್‌ಗಡ್, ಬಿಹಾರ್ ಕಡೆ ಆ ಪ್ರಮಾಣ ರೂ.3,500/ರೂ.4,000 ಇದೆ. ಇದರ ಅರ್ಥ ರೂ.3,500 ರಿಂದ ರೂ.9,000 ದಿಂದ ಹತ್ತು ಸಾವಿರದ ಮಧ್ಯದ ಸರಾಸರಿಯಲ್ಲಿ ಗಳಿಸುವ ಎಲ್ಲ ಕೃಷಿ ಕುಟುಂಬಗಳು ರೂ.6,426 ರೂಪಾಯಿ ಗಳಿಸುತ್ತಿವೆ ಎಂಬ ಈ ಲೆಕ್ಕದಲ್ಲಿ ನೋಡಲಾಗುತ್ತಿದೆ. ನಮ್ಮ ಗ್ರಾಮೀಣ ಭಾರತದ ಸ್ಥಿತಿ ಇಷ್ಟು ಕೆಟ್ಟದಾಗಿದೆ. ಅದು ಹಳ್ಳಿಯಲ್ಲಿನ ಜನ ಕೃಷಿಕರಾಗಿರಲಿ, ಕೃಷಿ ಕಾರ್ಮಿಕರಾಗಿರಲಿ ಏನಾದರೂ ಆಗಿರಲಿ, ಇದು ಕೆಟ್ಟ ಸ್ಥಿತಿ ಈ ರೀತಿಯ ಅಸಮಾನತೆ ಒಂದು ಕಡೆ ಇದ್ದರೆ...
ಮತ್ತೊಂದು ಕಡೆ 1991ರಲ್ಲಿ ನಮ್ಮ ದೇಶದಲ್ಲಿ ಒಬ್ಬೆ ಒಬ್ಬ ಡಾಲರ್ ಬಿಲೇನಿಯರ್ ಇರಲಿಲ್ಲ. ಆದರೆ 2015ರ ಹೊತ್ತಿಗೆ ಪೋರ್ಬ್ ಪಟ್ಟಿಯಲ್ಲಿ ಭಾರತದ ನೂರು ಡಾಲರ್ ಬಿಲೇನಿಯರ್‌ಗಳು ಸ್ಥಾನ ಪಡೆದಿದ್ದಾರೆ ಇತ್ತೀಚಿಗಿನ ಮಾರುಕಟ್ಟೆಯ ಹೊಡೆತಕ್ಕೆ ಅದರಲ್ಲಿ ಕೆಲವರ ಸ್ಪಲ್ಪ ಪ್ರಮಾಣದ ಸಂಪತ್ತು ಕರಗಿರಬಹುದು. ಇದು ನಮ್ಮ ದೇಶದ ಸ್ಥಿತಿ...
ಇದನ್ನೇ ನಾನು ಬೆಂಗಳೂರಿನ ಐಐಎಮ್ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದೆ. ನಾನು ಗ್ರಾಮೀಣ ಭಾರತದ ಕುರಿತು ಮಾಹಿತಿಗಳನ್ನು ಒಟ್ಟಾಗಿಸುವ ಕೆಲಸವೊಂದನ್ನು ಮಾಡುತ್ತಿದ್ದೇನೆ. ನೀವು ಎಷ್ಟು ಸುಂದರವಾದ ಸಮುದಾಯಗಳನ್ನು ಹಾಳು ಮಾಡುತ್ತಿದ್ದೀರಾ ಎಂದರೆ ಇಲ್ಲಿ ನಾವು ಭಯಪಡುವ, ಅಯ್ಯೋ ಹೀಗಿದೆಯಲ್ಲ ಸ್ಥಿತಿ ಎನ್ನುವ ಸಂಗತಿಗಳು ಇವೆ ಮತ್ತು ನಾವು ಆಶ್ಚರ್ಯಕ್ಕೆ ಒಳಗಾಗುವ ನಮ್ಮನ್ನು ಚಕಿತತೆಯ ಕಡೆಗೆ ನೂಕುವ ಸಂಗತಿಗಳು ಇವೆ.ಆಶ್ಚರ್ಯ ಎಂದರೆ, ಎರಡೂ ಭಾರತೀಯ ಮೂಲದವುಗಳು ಮತ್ತು ಇವು ನಮ್ಮ ವಾಸ್ತವಗಳಾಗಿವೆ...
ಇಲ್ಲಿ 833 ಮಿಲಿಯನ್ ಜನರು 718 ಜೀವಂತ ಭಾಷೆಗಳನ್ನು ಮಾತನಾಡುತ್ತಿದ್ದಾರೆ. ಅವುಗಳಲ್ಲಿ ಐದು ಭಾಷೆಗಳನ್ನು 15 ಮಿಲಿಯನ್ ಗೂ ಹೆಚ್ಚು ಮಂದಿ ಮಾತನಾಡುತ್ತಿದ್ದಾರೆ. 3 ಭಾಷೆಗಳನ್ನು ಸುಮಾರು 80 ಮಿಲಿಯನ್ ಜನರು ಮಾತನಾಡುತ್ತಿದ್ದಾರೆ. ಒಂದು ಭಾಷೆಯನ್ನು 600 ಮಿಲಿಯನ್ ಜನರು ಮಾತನಾಡುತ್ತಿದ್ದಾರೆ. ಒಂದು ಭಾಷೆಯನ್ನು 1ಶೇ.ಜನರು ಅಂಡಮಾನ್ ನಲ್ಲಿ ಮಾತನಾಡುತ್ತಿದ್ದಾರೆ. ಒಂದು ಭಾಷೆಯನ್ನು 7 ಮಿಲಿಯನ್ ಜನರು ಸೈಮಾರ್ ಮತ್ತು ತ್ರಿಪುರಾಗಳಲ್ಲಿ ಮಾತನಾಡುತ್ತಿದ್ದಾರೆ. ಇದು ನಿಜಕ್ಕೂ ಆಶ್ಚರ್ಯ ಉಂಟುಮಾಡಬಹುದಾದ ವಿಭಿನ್ನತೆಗಳನ್ನು ಒಳಗೊಂಡಿರುವ ಸಮಾಜ. ಈ ಮಾದರಿಯನ್ನು ಜಗತ್ತಿನ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಕೆಲವು ಜನರಿಗೆ ಈ ವಿಭಿನ್ನತೆ ಭಯವನ್ನು ಹುಟ್ಟಿಸುತ್ತಿದೆ. ಆ ಕಾರಣಕ್ಕೆ ಅವರು ಒಂದು ಭಾಷೆಯನ್ನು ಎಲ್ಲರ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಅವರದೇ ಸಂಸ್ಕೃತಿಯ ಮಹತ್ವ ಅರ್ಥವಾಗುತ್ತಿಲ್ಲ. ಹಿಂದಿ ಇವರಿಗೆ ಭಾಷೆಯಂತೆ ಕಾಣುತ್ತದೆ, ಆದರೆ ಉತ್ತರ ಭಾರತದ ಅತ್ಯುತ್ತಮ ಭಾಷೆಗಳಾದ ಭೋಜ್‌ಪುರಿ, ಮಿಥಿಲಾ,ಬ್ರೀಜ್ ಭಾಷಾ, ಅವಧಿ ಇವರಿಗೆ ಡಯಲೆಕ್ಟ್ ರೀತಿ ಕಾಣುತ್ತದೆ. ಹಾಗೆ ನೋಡಿದರೆ ಹಿಂದಿಗೆ 150 ವರ್ಷಗಳ ಇತಿಹಾಸವೂ ಇಲ್ಲ. ಉತ್ತರ ಭಾರತದ ಮಹತ್ವದ ಸಾಹಿತ್ಯ ರಚನೆಯಾಗಿರುವುದು ಭೋಜ್ ಪುರಿ, ಮಿಥಿಲಾ, ಬ್ರೀಜ್ ಭಾಷಾ, ಅವಧಿ ಭಾಷೆಗಳಲ್ಲಿ ಇವು ಉತ್ತರ ಭಾರತದ ಪ್ರಾಚೀನ ಭಾಷೆಗಳು ಅವುಗಳನ್ನು ಗೌರವಿಸಿ, ಹೆಮ್ಮೆಪಡಿ...
ಆದರೆ ಎರಡು ಬದಿಯ ಮೂಲಭೂತವಾದಿಗಳು ಸ್ಥಳೀಯ ಭಾಷೆಗಳನ್ನು ಕಡೆಗಣಿಸಿ ಉರ್ದುವನ್ನೂ ಪರ್ಶಿಯನ್‌ಗೆ ಹತ್ತಿರ ಮಾಡಿದ್ದಾರೆ. ಎಲ್ಲ ಉರ್ದು ಮತ್ತು ಪರ್ಶಿಯನ್ ಪದಗಳನ್ನು ತೆಗೆದುಕೊಂಡು ಹಿಂದೂಸ್ಥಾನಿ ಅಥವಾ ಹಿಂದಿಯನ್ನು ಕಟ್ಟಲು ಬಳಸಲಾಯಿತು. ಈ ಪ್ರಕ್ರಿಯೆ ಕಳೆದ 100 ವರ್ಷಗಳಿಂದ ನಡೆಯುತ್ತಲೇ ಇದೆ. 60ರ ದಶಕದಲ್ಲಿ ನಾನು ಹುಡುಗನಾಗಿದ್ದಾಗ ಆಲ್ ಇಂಡಿಯಾ ರೇಡಿಯೋದ ಕುರಿತಂತೆ ಒಂದು ಹಾಸ್ಯ ಪ್ರಚಲಿತದಲ್ಲಿತ್ತು. ಅದು ಏನೆಂದರೆ ಆಲ್ ಇಂಡಿಯಾ ರೇಡಿಯೊ ಯಾರು ಮಾತನಾಡದ ಮೂರು ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ಅವು ಕ್ವೀನ್ಸ್ ಇಂಗ್ಲೀಷ್, ಪರ್ಶೀಯನ್ ಉರ್ದು ಮತ್ತು ಸಂಸ್ಕೃತಿಕರಣಗೊಂಡ ಹಿಂದಿ! ಮೂಲಭೂತವಾದಿಗಳು ವಿವಿಧತೆಗೆ ಹೆದರುತ್ತಾರೆ. ಅವರಿಗೆ ಅರ್ಥವಾಗದ ತ್ರಿಪುರಾ, ನಾಗಾಲ್ಯಾಂಡ್ ಜನರ ಭಾಷೆಗಳು ಭಯ ಹುಟ್ಟಿಸುತ್ತವೆ. ಆದರೆ ನಾನು, ನೀವು ಅವು ಎಷ್ಟು ಸಮೃದ್ಧವಾಗಿವೆ ಅಲ್ಲವೇ ಎಂದು ಅಲೋಚಿಸುತ್ತೇವೆ. ನಾನು ಇಲ್ಲಿ ಗಂಗಾ ಹಾಸ್ಟೆಲ್ಲಿನಲ್ಲಿ ಇದ್ದಾಗ 24 ಭಾಷೆ ಮಾತನಾಡುವ ಸ್ನೇಹಿತರಿದ್ದರು. ಎಷ್ಟು ಸುಂದರ ಪ್ರಪಂಚ ಅದು. ಇದು ಸಹ ಜೆಎನ್‌ಯು ಭಾಗವೇ. ಒಂದು ವಿಷಯ ನಾನು ನಿಮಗೆ ಹೇಳಲೇ ಬೇಕು. ನಾನು ಈ ಕಾಲೇಜಿನ ಅವರಣದಲ್ಲಿ ನನ್ನ ಸ್ವಂತಕ್ಕಿಂತ ಮಿಗಿಲಾಗಿ ಬದುಕುವ ಗುಣ ಕಲಿತಿದ್ದೇನೆ. ವೃತ್ತಿ ಎಂದರೆ ಕೇವಲ ನನ್ನ ಪರಿಚಯ ಪತ್ರವಲ್ಲ ಮತ್ತು ಜೀವನದಲ್ಲಿ ಬೆಳೆಯುವುದು ಯಶಸ್ವಿಯಾಗೋದು ಅಂದರೆ ಅದರ ಪುಟಗಳನ್ನು ಹೆಚ್ಚಿಸಿಕೊಳ್ಳುವುದಲ್ಲ ಎಂಬುದನ್ನು ನಾವು ಕಲಿಯಬೇಕಿದೆ

Writer - ಪಿ ಸಾಯಿನಾಥ್

contributor

Editor - ಪಿ ಸಾಯಿನಾಥ್

contributor

Similar News