ಉಮರ್ , ಅನಿರ್ಬನ್ ,ಗೀಲಾನಿ ಹಾಗು ಸಾಯಿಬಾಬಾ ಅವರನ್ನು ಬೇಷರತ್ ಬಿಡುಗಡೆ ಮಾಡಿ : ಅರುಂಧತಿ ರಾಯ್ ಆಗ್ರಹ
ಹೊಸದಿಲ್ಲಿ , ಮಾ. 17 : ಜೆ ಎನ್ ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ಹಾಗು ಪ್ರೊ . ಎಸ್ ಎ ಆರ್ ಗೀಲಾನಿ ಅವರ ಬಿಡುಗಡೆಗೆ ಆಗ್ರಹಿಸಿ ಮಂಗಳವಾರ ನಡೆದ ಪ್ರತಿಭಟನಾ ಜಾಥಾದಲ್ಲಿ ಮಾತನಾಡಿದ ಖ್ಯಾತ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ ಕೇಂದ್ರ ಸರಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ,ಪ್ರೊ . ಎಸ್ ಎ ಆರ್ ಗೀಲಾನಿ ಹಾಗು ಪ್ರೊ. ಸಾಯಿಬಾಬಾ ಅವರನ್ನು ಬೇಷರತ್ತಾಗಿ ತಕ್ಷಣ ಬಿಡುಗಡೆ ಮಾಡಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
" ನದಿಗಳನ್ನೇ ಮಾರುವವರು ಹಾಗು ಪರಿಸರವನ್ನು ಮಾಲಿನ್ಯ ಮಾಡುವವರು ಈ ಸರ್ಕಾರಕ್ಕೆ ದೆಶಪ್ರೆಮಿಗಳು. ನದಿಗಳನ್ನು ಯಾಕೆ ಮಾರುತ್ತಿದ್ದೀರಿ , ಪರಿಸರ ಏಕೆ ಹಾಳು ಮಾಡುತ್ತೀರಿ ಎಂದು ಪ್ರಶ್ನಿಸುವವರು ಈ ಸರ್ಕಾರದ ಪಾಲಿಗೆ ದೇಶದ್ರೋಹಿಗಳು. ದೇಶದಲ್ಲಿ ಅಸಮ್ಮತಿ ವ್ಯಕ್ತಪಡಿಸಲು ಅವಕಾಶ ಇರಬೇಕು" ಎಂದು ಹೇಳಿದ ಅವರು ಅಫ಼್ಝಲ್ ಗುರುವಿನದ್ದು ಕೊಲೆ ಎಂದು ಬಣ್ಣಿಸಿ ಅದರ ಬಗ್ಗೆ ಸರಕಾರ ವಿವರಣೆ ನೀಡಬೇಕು ಎಂದು ಹೇಳಿದರು.