Human Wildlife conflict | ರಾಜಧಾನಿ ರೈಲು ಡಿಕ್ಕಿ; ನಾಲ್ಕು ಮರಿ ಸೇರಿದಂತೆ ಏಳು ಆನೆಗಳು ಮೃತ್ಯು
Photo Credit : X \ @azarul_azad
ಸಂಗ್ ಜುರೈ: ಮಿಜೋರಾಂನ ಸಾಯಿರಂಗ್ ನಿಂದ ಹೊಸದಿಲ್ಲಿಗೆ ಬರುತ್ತಿದ್ದ ರಾಜಧಾನಿ ರೈಲು, ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ನಾಲ್ಕು ಮರಿಯಾನೆಗಳು ಸೇರಿದಂತೆ ಏಳು ಆನೆಗಳು ಸಾವನ್ನಪ್ಪಿವೆ. ಘಟನೆಯಲ್ಲಿ ಮತ್ತೊಂದು ಮರಿಯಾನೆ ಗಾಯಗೊಂಡಿದೆ.
ಈಶಾನ್ಯ ಫ್ರಾಂಟಿಯರ್ ರೈಲ್ವೆ ವ್ಯಾಪ್ತಿಯ ಜಮುನಾಮುಖ್-ಕಾಂಪುರ ಸೆಕ್ಷನ್ ವ್ಯಾಪ್ತಿಯಲ್ಲಿ ಬರುವ ಕೇಂದ್ರ ಅಸ್ಸಾಂನ ಹೊಜೈ ಜಿಲ್ಲೆಯ ಸಂಗ್ಜುರೈ ಎಂಬಲ್ಲಿ ಈ ಘಟನೆ ನಡೆದಿದೆ.
ಲೋಕೊಮೋಟಿವ್ ಹಾಗೂ ಇತರ ಐದು ಕೋಚ್ಗಳು ಡಿಕ್ಕಿಯ ಬಳಿಕ ಹಳಿತಪ್ಪಿವೆ. ಈ ಅಪಘಾತದ ತೀವ್ರತೆಗೆ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ರೈಲ್ವೆ ಹೇಳಿಕೆ ನೀಡಿದೆ.
ಶನಿವಾರ ನಸುಕಿನಲ್ಲಿ 2.17ರ ವೇಳೆಗೆ ಈ ಘಟನೆ ನಡೆದಿದೆ. ಮೃತಪಟ್ಟಿರುವ ಆನೆಗಳ ಪೈಕಿ ಮೂರು ಹೆಣ್ಣಾನೆಗಳು ಹಾಗೂ ನಾಲ್ಕು ಗಂಡಾನೆಗಳು. ಮರಣೋತ್ತರ ಪರೀಕ್ಷೆ ಬಳಿಕ ಆನೆಗಳನ್ನು ಹೂಳಲಾಗಿದೆ. ಒಟ್ಟು 50 ಕಾಡಾನೆಗಳು ಹಿಂಡಿನಲ್ಲಿದ್ದವು ಎಂದು ಗ್ರಾಮಸ್ಥರು ಹೇಳಿದ್ದಾರೆ. ಗುವಾಹತಿಯಿಂದ ಸುಮಾರು 126 ಕಿಲೋಮೀಟರ್ ದೂರಲ್ಲಿ ಈ ಘಟನೆ ಸಂಭವಿಸಿದೆ.
ಕುತೂಹಲದ ಅಂಶವೆಂದರೆ ಆನೆಗಳಿಗೆ ರೈಲು ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಘಟನೆ ನಡೆದ ಸ್ಥಳದಿಂದ 32 ಕಿಲೋಮೀಟರ್ ಆಚೆಗೆ ಹವಾಯಿಪುರ ಮತ್ತು ಲುಮ್ಡಿಂಗ್ ಸೆಕ್ಷನ್ ರೈಲು ಹಳಿಗಳಲ್ಲಿ AI-ಆಧರಿತ ಚಲನವಲನ ಪತ್ತೆ ವ್ಯವಸ್ಥೆ ಇದ್ದು, ಆನೆಗಳು ಈ ಕಾರಿಡಾರ್ ಮೂಲಕ ಸಂಚರಿಸುವ ವೇಳೆ ಇದು ಮಾಹಿತಿಯನ್ನು ನೀಡುತ್ತದೆ. ಆಹಾರ ಹುಡುಕಿಕೊಂಡು ಆನೆಗಳು ಈ ಭಾಗದ ಗ್ರಾಮಗಳಿಗೆ ಬರುತ್ತಿದ್ದು, ಇಂಥ ವ್ಯವಸ್ಥೆ ಇದ್ದಲ್ಲಿ ಅಪಘಾತ ತಪ್ಪಿಸಬಹುದಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.