ಪಂಜಾಬ್‌ನಲ್ಲಿ ಕಿಶೋರ್ ಪೀಕಲಾಟ

Update: 2016-05-21 18:39 GMT

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಮುಖಂಡ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಪಂಜಾಬ್‌ನ ಮುಂದಿನ ಮುಖ್ಯಮಂತ್ರಿಯಾಗಿ ಮಾಡಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ಪಂಜಾಬ್ ಹಾಗೂ ಉತ್ತರ ಪ್ರದೇಶಗಳಲ್ಲಿ ತಮ್ಮ ಮಾತು ಕೇಳುತ್ತಿಲ್ಲ ಎಂಬ ಕಾರಣಕ್ಕಾಗಿ ಕಿಶೋರ್ ಸದ್ಯದಲ್ಲೇ ಕಾಂಗ್ರೆಸ್ ಪಾಳಯದಿಂದ ಹೊರ ನಡೆಯುತ್ತಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಚುನಾವಣಾ ತಂತ್ರ ರೂಪಿಸಲು ಕಿಶೋರ್ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಕಿಶೋರ್ ಕಾರ್ಯವೈಖರಿ ಕೆಲ ಕಾಂಗ್ರೆಸ್ ನಾಯಕರಿಗೆ ಅಪಥ್ಯವಾಗಿದೆ. ಪಂಜಾಬ್‌ನಿಂದ ಆಯ್ಕೆಯಾದ ಸಂಸದರೊಬ್ಬರಿಗೆ ಸಾರ್ವಜನಿಕರ ಜೊತೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಮತ್ತು ಯಾವ ಉಡುಪು ಧರಿಸಬೇಕು ಎಂಬ ಬಗ್ಗೆ ಪಾಠ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕಿಶೋರ್ ಸಲಹೆಯಿಂದ ಈ ಸಂಸದರ ಅಹಮಿಕೆಗೆ ಪೆಟ್ಟು ಬಿದ್ದಿದೆ. ರಾಜಕೀಯಕ್ಕೆ ಹೊಸ ಹುಡುಗ ಸಂಸದನಾದ ನನಗೆ ಜನರ ಜೊತೆ ಬೆರೆಯುವುದು ಹೇಗೆ ಎಂಬ ಮಾರ್ಗದರ್ಶನ ನೀಡುತ್ತಿರುವುದು ತನಗಾದ ಅವಮಾನ ಎಂದು ಅವರು ಪರಿಗಣಿಸಿದಂತಿದೆ. ಮತ್ತೊಬ್ಬ ಕಾಂಗ್ರೆಸ್ ಸಂಸದ ಹಿರಿಯ ಪತ್ರಕರ್ತರ ಜತೆ ಮಾತನಾಡುತ್ತಾ, 130 ವರ್ಷ ಹಳೆಯ ಕಾಂಗ್ರೆಸ್ ಪಕ್ಷ ಗೆಲುವಿಗಾಗಿ ಕಿಶೋರ್ ಅವರಂಥವರನ್ನು ಅವಲಂಬಿಸುತ್ತಿದೆ ಎಂದಾದರೆ ಇದಕ್ಕಿಂತ ಕೆಟ್ಟದು ಪಕ್ಷಕ್ಕೆ ಬೇರೆ ಯಾವುದೂ ಇಲ್ಲ ಎಂದು ಸಿಟ್ಟು ಹೊರಹಾಕಿದ್ದಾರೆ.

ನಜ್ಮಾ ವರ್ಸಸ್ ನಖ್ವಿ
ನಜ್ಮಾ ಹೆಪ್ತುಲ್ಲಾ ಹಾಗೂ ಮುಖ್ತಾರ್ ಅಬ್ಬಾಸ್ ನಖ್ವಿ ಪರಸ್ಪರ ಒಂದಾಗುವ ಸೂಚನೆ ಇಲ್ಲ. ಜಾರ್ಖಂಡ್‌ನ ವಿಷಯಕ್ಕೆ ಸಂಬಂಧಿಸಿದಂತೆ ನಖ್ವಿ ಅವರ ಪ್ರತಿಕ್ರಿಯೆಯಿಂದ ಹೆಪ್ತುಲ್ಲಾ ಅಸಮಾಧಾನಗೊಂಡಿದ್ದಾರೆ. ಈ ವಿಷಯವನ್ನು ಹೆಪ್ತುಲ್ಲಾ, ನಖ್ವಿ ಬಳಿಗೆ ಒಯ್ದಿಗ, ‘‘ಕಾಂಗ್ರೆಸ್ ಎತ್ತಿದ ರಾಜಕೀಯ ಪ್ರಶ್ನೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ಯಾರೂ ತಮಗೆ ಸಲಹೆ ನೀಡಬೇಕಿಲ್ಲ’’ ಎಂದು ಕಡ್ಡಿ ತುಂಡರಿಸಿದಂತೆ ನೇರವಾಗಿ ಸಲಹೆಯನ್ನು ತಿರಸ್ಕರಿಸಿದರು ಎನ್ನಲಾಗಿದೆ. ಇಷ್ಟು ಮಾತ್ರವಲ್ಲದೇ ಹೆಪ್ತುಲ್ಲಾ ಅವರನ್ನು ಕುರಿತು ನಖ್ವಿ, ‘‘ರಾಜಕೀಯವಾಗಿ ನೀವು ನನಗಿಂತ ಹಿರಿಯರಿರಬಹುದು. ಆದರೆ ಪಕ್ಷದ ಸಂಘಟನೆ ವಿಚಾರಕ್ಕೆ ಬಂದಾಗ, ನಾನೇ ನಿಮಗಿಂತ ಹಿರಿತನ ಹೊಂದಿದ್ದೇನೆ’’ ಎಂದೂ ಹೇಳಿದರು ಎಂದು ತಿಳಿದುಬಂದಿದೆ. ಈ ಇಬ್ಬರ ನಡುವಿನ ಜಗಳ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಮುಂದಿನ ಸಂಪುಟ ಪುನರ್ರಚನೆ ವೇಳೆ ಒಬ್ಬರಲ್ಲಿ ಒಬ್ಬರಿಗೆ ಪಕ್ಷ ಕೊಕ್ ನೀಡುವ ಎಲ್ಲ ಸಾಧ್ಯತೆಗಳೂ ಇವೆ. ಆಡಳಿತ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದಕ್ಕೆ ಇದು ಉದಾಹರಣೆ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.

ದೀದಿ ನರ್ವಸ್
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳಿಗೆ ಹೀನಾಯ ಸೋಲುಣಿಸಿ, ಪಕ್ಷಕ್ಕೆ ಅಭೂತಪೂರ್ವ ವಿಜಯ ತಂದುಕೊಟ್ಟಿದ್ದಾರೆ. ಆದರೆ ಫಲಿತಾಂಶಕ್ಕೆ ಮುನ್ನ ಈ ಉಕ್ಕಿನ ಮಹಿಳೆ ತೀರಾ ಅಧೀರರಾಗಿದ್ದರು ಎನ್ನಲಾಗಿದೆ. ಇದರಿಂದ ತಮ್ಮ ನಂಬುಗೆಯ ಲೆಫ್ಟಿನೆಂಟ್ ಒಬ್ಬರ ಬಳಿ, ತಮಗೆ ಶಕ್ತಿ ನೀಡುವಂತೆ ವಿಶೇಷ ಪೂಜೆ ಮಾಡಿಸಲು ಕೇಳಿಕೊಂಡಿದ್ದರು ಎಂದು ಹೇಳಲಾಗಿದೆ. ಇದೇ ವೇಳೆ ಮತ್ತೊಬ್ಬರನ್ನು ಅಜ್ಮೀರ್ ಷರೀಫ್‌ಗೆ ಕಳುಹಿಸಿ, ತಮಗಾಗಿ ವಿಶೇಷ ಪ್ರಾರ್ಥನೆ ಮಾಡುವಂತೆ ಸೂಚಿಸಿರುವ ಅಂಶ ಕೂಡಾ ಬೆಳಕಿಗೆ ಬಂದಿದೆ. ಆದರೆ ತೃಣಮೂಲ ಕಾಂಗ್ರೆಸ್‌ನ ಕೆಲ ಸಂಸದರು ದೀದಿಗೆ ಧೈರ್ಯ ತುಂಬಿ, 2007ರಲ್ಲಿ ಎಡಪಕ್ಷಗಳು ರಾಜ್ಯದಲ್ಲಿ ಧೂಳೀಪಟವಾಗುತ್ತವೆ ಎಂದು ಮಾಧ್ಯಮಗಳು ಭವಿಷ್ಯ ನುಡಿದಿದ್ದವು. ಆದರೂ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಎಡಪಕ್ಷಗಳು ಯಶಸ್ವಿಯಾದವು ಎಂಬ ನಿದರ್ಶನವನ್ನು ನೆನಪಿಸಿದರು ಎನ್ನಲಾಗಿದೆ. ಅದೇನೇ ಇರಲಿ, ಇದೀಗ ದೀದಿ ಅಭೂತಪೂರ್ವ ವಿಜಯ ಸಾಧಿಸಿದ್ದಾರೆ. ಇದರೊಂದಿಗೆ ಮತ್ತೆ ಜನಪ್ರಿಯ ಕಾರ್ಯಕ್ರಮಗಳತ್ತ ಗಮನ ಹರಿಸಬಹುದು. ಮುಂದಿನ ಕೆಲ ವರ್ಷಗಳ ವರೆಗೆ ಚುನಾವಣೆ ಸೋಲುವ ಬಗ್ಗೆ ಭೀತಿಪಡುವ ಅಗತ್ಯವಿಲ್ಲ.

ಅಝಂಖಾನ್ ದ್ವಂದ್ವ,
ಮುಲಾಯಂಗೆ ಇಕ್ಕಟ್ಟು
ಅಮರ್ ಸಿಂಗ್ ಅವರನ್ನು ರಾಜ್ಯಸಭಾ ಸದಸ್ಯರಾಗಿ ಚುನಾಯಿಸಿದ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಕ್ರಮದ ಬಗ್ಗೆ ಸಮಾಜವಾದಿ ಪಕ್ಷದ ಪ್ರಮುಖ ಮುಸ್ಲಿಂ ಮುಖ ಎನಿಸಿಕೊಂಡ ಅಝಂಖಾನ್ ಅಸಮಾಧಾನ ಹೊರಹಾಕಿದ್ದಾರೆ. ಈ ನೇಮಕ ದುರದೃಷ್ಟಕರ ಘಟನೆ ಎಂದು ಬಣ್ಣಿಸಿದ್ದಾರೆ. ಉತ್ತರ ಪ್ರದೇಶದ ಸಚಿವ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ, ಮುಲಾಯಂ ಸಿಂಗ್ ನಿರ್ಧಾರವನ್ನು ಬಹಿರಂಗವಾಗಿ ಆಕ್ಷೇಪಿಸಿದ್ದಾರೆ. ಇವರ ಅಪಸ್ವರವನ್ನು ನಿರ್ಲಕ್ಷಿಸಿ ಮುಲಾಯಂ ಸಿಂಗ್, ಅಮರ್ ಸಿಂಗ್ ಅವರನ್ನು ನಾಮಕರಣ ಮಾಡಿದ್ದರಿಂದ ಅಸಮಾಧಾನಗೊಂಡಿದ್ದಾರೆ. ಅಮರ್‌ಸಿಂಗ್ ಅವರು ಅಧಿಕೃತವಾಗಿ ಪಕ್ಷಕ್ಕೆ ಬಂದ ಬಳಿಕ ನಟಿ ಹಾಗೂ ರಾಂಪುರದ ಮಾಜಿ ಸಂಸದೆ ಜಯಪ್ರದಾ ಮತ್ತೆ ವಾಪಸಾಗುತ್ತಿದ್ದಾರೆ ಎಂಬ ವದಂತಿಗಳ ಬಗ್ಗೆ ಕೇಳಿದಾಗ, ದೀರ್ಘಕಾಲ ವೌನವಾಗಿದ್ದ ಅಝಂಖಾನ್, ‘‘ನನ್ನ ಹಣೆಬರಹದಲ್ಲಿ ಏನಿದೆಯೋ ಅವೆಲ್ಲವನ್ನೂ ನಾನು ಸ್ವೀಕರಿಸಲೇಬೇಕು’’ ಎಂದು ಮಾರ್ಮಿಕವಾಗಿ ನುಡಿದರು. ಕಳೆದ ಬಾರಿ ಅಝಂಖಾನ್ ಪಕ್ಷದ ಜೊತೆ ಮುನಿಸಿಕೊಂಡಿದ್ದಾಗ, ಮುಸ್ಲಿಮರು ಪಕ್ಷದಿಂದ ದೂರ ಸರಿದರು. ಆದರೆ ಇದೀಗ ಅಮರ್‌ಸಿಂಗ್ ವಾಪಸಾಗಿದ್ದು, ರಜಪೂತರ ಮತಗಳನ್ನು ಸೆಳೆಯಲು ಮುಲಾಯಂ ಸಿಂಗ್ ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಸ್ಪಷ್ಟ. ಆದರೆ ಅಝಂಖಾನ್ ಅವರ ಸಿಟ್ಟನ್ನು ನಿರ್ಲಕ್ಷಿಸಿ, ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಸಾಧ್ಯವೇ ಎನ್ನುವುದು ಈಗ ಇರುವ ಪ್ರಶ್ನೆ.

ಸ್ಮತಿ ಭದ್ರತೆ
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮತಿ ಇರಾನಿಯವರ ಭದ್ರತೆಯನ್ನು ಮೋದಿ ಸರಕಾರ ಮೇಲ್ದರ್ಜೆಗೇರಿಸಿದೆ. ವೈ ವರ್ಗದಿಂದ ಇದೀಗ ಇರಾನಿ ಝೆಡ್ ವರ್ಗಕ್ಕೆ ಭಡ್ತಿ ಪಡೆದಿದ್ದಾರೆ. ಇದು ಎರಡನೆ ಅತ್ಯುನ್ನತ ಭದ್ರತೆಯಾಗಿದ್ದು, ಸಚಿವರಿಗೆ ಅಪಾಯ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹೈದರಾಬಾದ್ ಕೇಂದ್ರೀಯ ವಿವಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ವಿರುದ್ಧದ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಜೆಎನ್‌ಯು ವಿವಾದದ ಬಳಿಕ ಸ್ಮತಿ ಅವರಿಗೆ ಅಪಾಯದ ಸಾಧ್ಯತೆ ಅಧಿಕವಾಗಿದೆ ಎಂದು ಗುಪ್ತಚರ ವಿಭಾಗ ವರದಿ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ. ಗುಪ್ತಚರ ವಿಭಾಗದ ಮಾಹಿತಿಯ ಪ್ರಕಾರ, ಕೆಲ ದುಷ್ಟಶಕ್ತಿಗಳು ವಿದ್ಯಾರ್ಥಿ ಪ್ರತಿಭಟನೆಯ ದುರ್ಲಾಭ ಪಡೆದು ದೈಹಿಕವಾಗಿ ಹಾನಿ ಮಾಡುವ ಸಾಧ್ಯತೆ ಇದೆ. ಝೆಡ್ ಭದ್ರತೆ ಎಂದರೆ ಸಶಸ್ತ್ರ ಕಮಾಂಡೊ ಪಡೆ ಇರಾನಿಯವರನ್ನು 24 ಗಂಟೆಯೂ ಕಾಯುತ್ತಿರುತ್ತದೆ. ಅತ್ಯಧಿಕ ಅಪಾಯ ಸಾಧ್ಯತೆ ಇರುವವರಿಗೆ ಮಾತ್ರ ಈ ಸೌಲಭ್ಯ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News