ನನಗೆ ಹಣ ಬೇಡ-ಮಗ ಬೇಕು: ಅಖಿಲೇಶ್ಗೆ ಮೃತ ಎಸ್ಪಿಯ ತಾಯಿಯ ಮನವಿ
Update: 2016-06-03 22:40 IST
ಮಥುರಾ, ಜೂ.3: ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆಯ ವೇಳೆ ನಡೆದ ಹಿಂಸಾಚಾರಕ್ಕೆ ಬಲಿಯಾಗಿರುವ ಪೊಲೀಸ್ ಅಧೀಕ್ಷಕ ಮುಕುಲ್ ದ್ವಿವೇದಿಯವರ ತಾಯಿ, ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮುಂದಿರಿಸಿರುವ ಪರಿಹಾರವನ್ನು ಪಡೆಯಲು ಶುಕ್ರವಾರ ನಿರಾಕರಿಸಿದ್ದಾರೆ.
ತನಗೆ ಮಗನೇ ಬೇಕು. ಹಣ ಬೇಡ. ಮುಖ್ಯಮಂತ್ರಿ ತಮ್ಮಿಂದ ರೂ.20 ಲಕ್ಷ ಪಡೆಯಲಿ. ಆದರೆ, ಅವರು ತನ್ನ ಮಗನನ್ನು ಹಿಂದಕ್ಕೆ ಕೊಡಬೇಕು. ಅವರು ಹತ್ಯೆಯಾಗಲೆಂದು ತನ್ನ ಮಗನನ್ನು ಮಥುರೆಗೆ ಕಳುಹಿಸಿದರೇ? ತಾನಿನ್ನೇನು ಮಾಡಲಿ? ತನಗೆ ಇಬ್ಬರು ಪುತ್ರರಿದ್ದರು. ಒಬ್ಬ ದುಬೈಯಲ್ಲಿದ್ದಾನೆ. ಮುಕುಲ್ ಮೊದಲು ಬರೇಲಿಯಲ್ಲಿದ್ದನು. ಆದರೆ, ಆತನಿಗೆ ಭಡ್ತಿ ನೀಡಿ ಮಥುರೆಗೆ ಕಳುಹಿಸಲಾಗಿತ್ತೆಂದು ದುಃಖ ತಪ್ತ ತಾಯಿ ಎಎನ್ಐಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರಕಾರವು ಹುತಾತ್ಮ ಪೊಲೀಸರ ಕುಟುಂಬಗಳಿಗೆ ತಲಾ ರೂ.20 ಲಕ್ಷ ಪರಿಹಾರ ಘೋಷಿಸಿದೆ. ಹಿಂಸಾಚಾರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವಿಗೀಡಾಗಿದ್ದಾರೆ.