ವಾಜಪೇಯಿ ಪ್ರಧಾನಿ ಕಚೇರಿಗೇ ಕಾರ್ಪೊರೇಟ್ ಕಳ್ಳಗಿವಿ

Update: 2016-06-17 06:32 GMT

ಹೊಸದಿಲ್ಲಿ, ಜೂ.17: ಕಾರ್ಪೊರೇಟ್ ಸಂಸ್ಥೆ ಎಸ್ಸಾರ್ ಗ್ರೂಪ್ 2001ರಿಂದ 2006ರ ನಡುವೆ, ಐದು ವರ್ಷಗಳ ತನಕ, ಎನ್‌ಡಿಎ ಮತ್ತು ಯುಪಿಎ ಆಡಳಿತಾವಧಿಗಳಲ್ಲಿ ಹಲವಾರು ಕ್ಯಾಬಿನೆಟ್ ಸಚಿವರು, ಕಾರ್ಪೊರೇಟ್ ಮುಖ್ಯಸ್ಥರಾದ ಮುಖೇಶ್ ಮತ್ತು ಅನಿಲ್ ಅಂಬಾನಿ, ವಾಜಪೇಯಿ ಪಿಎಂಒ ಕಚೇರಿಯ ಅಧಿಕಾರಿಗಳು ಸಹಿತ ಗಣ್ಯಾತಿಗಣ್ಯರ ಫೋನ್ ಕರೆಗಳನ್ನು ಕದ್ದಾಲಿಸಿದೆಯೆಂದು ಆರೋಪಿಸಲಾಗಿದೆಯೆಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿಯೊಂದು ಹೇಳಿದೆ.

ಈ ಕದ್ದಾಲಿಸಲಾದ ದೂರವಾಣಿ ಸಂಭಾಷಣೆಗಳಲ್ಲಿ ಅಧಿಕಾರದ ಪ್ರಭಾವ ಬಳಕೆ, ಉದ್ಯಮಿ, ಸರಕಾರಿ ಅಧಿಕಾರಿಗಳ ನಡುವಣ ಒಡಂಬಡಿಕೆ ಬಗೆಗಿನ ವಿಚಾರಗಳು ಚರ್ಚೆಗೆ ಬಂದಿವೆಯೆಂದು ದಿಲ್ಲಿ ಮೂಲದ ಸುಪ್ರೀಂ ಕೋರ್ಟ್ ವಕೀಲ ಸುರೇನ್ ಉಪ್ಪಲ್ ಜೂನ್ 1 ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಸಿರುವ 29 ಪುಟಗಳ ದೂರಿನಲ್ಲಿ ತಿಳಿಸಲಾಗಿದೆ. ಈ ಕರೆಗಳನ್ನು ಕದ್ದಾಲಿಸಿದ ಎಸ್ಸಾರ್ ಉದ್ಯೋಗಿಯನ್ನು ತಾನು ಪ್ರತಿನಿಧಿಸುತ್ತಿರುವುದಾಗಿಯೂ ಉಪ್ಪಲ್ ಹೇಳಿಕೊಂಡಿದ್ದಾರೆನ್ನಲಾಗಿದೆ.

ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು, ಮಾಜಿ ಸಚಿವರಾದ ಪ್ರಫುಲ್ ಪಟೇಲ್, ರಾಮ್ ನಾಕ್, ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್ ಅಂಬಾನಿ,ಅನಿಲ್ ಧೀರೂಭಾಯಿ ಅಂಬಾನಿ ಗುಂಪಿನ ಅನಿಲ್ ಅಂಬಾನಿ, ಅವರ ಪತ್ನಿ ಟೀನಾ ಅಂಬಾನಿ, ದಿವಂಗತ ಸಚಿವ ಪ್ರಮೋದ್ ಮಹಾಜನ್, ಸಂಸದ ಅಮರ್ ಸಿಂಗ್, ಹಾಲಿ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಷಿ, ಐಡಿಬಿಐ ಬ್ಯಾಂಕಿನ ಮಾಜಿ ಅಧ್ಯಕ್ಷ ಪಿ.ಪಿ. ವೋರಾ, ಐಸಿಐಸಿಐ ಬ್ಯಾಂಕಿನ ಮಾಜಿ ಎಂಡಿ ಕೆ.ವಿ. ಕಾಮತ್, ಐಸಿಐಸಿಐ ಬ್ಯಾಂಕಿನ ಆಡಳಿತ ನಿರ್ದೇಶಕ ಲಲಿತಾ ಗುಪ್ತೆ ಮತ್ತಿತರರ ದೂರವಾಣಿಗಳನ್ನು ಕದ್ದಾಲಿಸಲಾಗಿದೆಯೆಂದು ದೂರಲಾಗಿದೆ. ಸಂಭಾಷಣೆಗಳಲ್ಲಿ ಹೆಸರಿಸಲಾದ ಕೆಲವು ಇತರ ಅಧಿಕಾರಿಗಳೆಂದರೆ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳಾದ ಬೃಜೇಶ್ ಮಿಶ್ರಾ, ಎನ್.ಕೆ. ಸಿಂಗ್, ರಾಜಕಾರಣಿಗಳಾದ ಸುಧಾಂಶು ಮಿತ್ತಲ್, ಪಿಯೂಶ್ ಗೋಯೆಲ್, ಜಸ್ವಂತ್ ಸಿಂಗ್, ಕಿರಿತ್ ಸೋಮಯ್ಯ, ರಾಮ ನಾಕ್, ಸಹಾರಾ ಮುಖ್ಯಸ್ಥ ಸುಬ್ರೊತೊ ರಾಯ್, ಹಾಗೂ ಬಾಲಿವುಡ್ ನಟ ಅಮಿತಾಭ್ ಬಚ್ಚನ್.

ಎಸ್ಸಾರ್ ಗ್ರೂಪ್ ಹಲವು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಪತ್ರಕರ್ತರೊಂದಿಗೆ ತನ್ನ ಸ್ವಹಿತಾಸಕ್ತಿಗೆ ಹೊಂದಿದೆಯೆನ್ನಲಾದ ಸಂಬಂಧಗಳ ಬಗ್ಗೆ ನ್ಯಾಯಾಲಯದ ನಿರ್ದೇಶನದಡಿಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿರುವ ಸಂದರ್ಭ ಈ ದೂರು ಬಂದಿದೆ. ಈ ನಂಟಿನ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಮೊದಲು ವರದಿ ಮಾಡಿದ್ದರೂ ಕಂಪೆನಿ ಆಗ ತಾನೇನೂ ತಪ್ಪುಮಾಡಿಲ್ಲವೆಂದು ಹೇಳಿತ್ತು.

ವಕೀಲ ಉಪ್ಪಲ್ ಎರಡು ತಿಂಗಳ ಹಿಂದೆ ಎಸ್ಸಾರ್ ಗ್ರೂಪಿನ ಹಿರಿಯ ಅಧಿಕಾರಿಗಳಿಗೆ ತನ್ನ ಕಕ್ಷಿದಾರನ ಪರವಾಗಿ ‘ಎಚ್ಚರಿಕೆ ನೋಟಿಸ್’ ನೀಡಿದ್ದರು. ಕಕ್ಷಿದಾರ ಅಲ್ಬಸಿತ್ ಖಾನ್ ಎಸ್ಸಾರ್ ಗ್ರೂಪಿನ ಭದ್ರತಾ ವಿಭಾಗದ ಮಾಜಿ ಮುಖ್ಯಸ್ಥನಾಗಿದ್ದು, ಈ ಫೋನ್ ಕದ್ದಾಲಿಕೆ ಅವರ ಉಸ್ತುವಾರಿಯಲ್ಲಿ ನಡೆಯುತ್ತಿತ್ತೆನ್ನಲಾಗಿದೆ.

ತಮ್ಮ ಕಂಪೆನಿ ಹಚ್ಚಿನ್ಸನ್ ಎಸ್ಸಾರ್ ಅಡಿಯಲ್ಲಿ ಸೆಲ್ಯುಲರ್ ಆಪರೇಶನ್ಸ್‌ಗೆ ಲೈಸನ್ಸ್ ಹೊಂದಿದ್ದರಿಂದ ಕೆಲವೊಂದು ಫೋನ್‌ಗಳನ್ನು ಟ್ಯಾಪ್ ಮಾಡಿ ಸರಕಾರಿ ತನಿಖೆಗೆ ಸಹಕರಿಸುವುದು ಅದರ ಕರ್ತವ್ಯವೆಂದು ಎಸ್ಸಾರ್ ಗುಂಪಿನ ಪ್ರಶಾಂತ್ ರುಯಿಯ ಮತ್ತು ರವಿಕಾಂತ್ ರುಯಿಯ ಖಾನ್ ಗೆ 2001ರಲ್ಲಿತಿಳಿಸಿದ್ದರೆಂದು ಉಪ್ಪಲ್ ಹೇಳುತ್ತಾರಲ್ಲದೆ, ಖಾನ್ ಈಗ ಭೂಗತನಾಗಿದ್ದು ಆತನು ಕಂಪೆನಿಯ ಪ್ರಭಾವಕ್ಕೆ ಒಳಗಾಗಿರಬಹುದು ಎಂದಿದ್ದಾರೆ.

ದೂರಿನಲ್ಲಿ ಹಲವಾರು ಎಸ್ಸಾರ್ ಅಧಿಕಾರಿಗಳ ಹೆಸರುಗಳನ್ನು ನಮೂದಿಸಲಾಗಿದ್ದು ಅವರು ‘‘ವಿಶೇಷ ಮೊಬೈಲ್ ಸಿಮ್ ಕಾರ್ಡ್ ಅಥವಾ ಮೊಬೈಲ್ ಇಂಟರ್ ಸೆಪ್ಟರ್ ಸಿಮ್ ಕಾರ್ಡ್‌ಗಳನ್ನು ಸೃಷ್ಟಿಸಿ ಅವುಗಳ ಮೂಲಕ ಕೆಲವೊಂದು ಮೊಬೈಲ್ ಫೋನುಗಳನ್ನು ಕದ್ದಾಲಿಸುತ್ತಿದ್ದರು,’ ಎಂದು ಉಪ್ಪಲ್ ಹೇಳುತ್ತಾರೆ. ಖಾನ್ ಎಸ್ಸಾರ್ ಗ್ರೂಪಿಗೆ ರಾಜೀನಾಮೆಯನ್ನು 2011ರ ಮೇ 24ರಂದು ಅವರು ಕೆಲ ರೆಕಾರ್ಡ್ ಮಾಡಲಾದ ಸಂಭಾಷಣೆಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ ಎಂದು ಕಂಪೆನಿ ಆರೋಪಿಸಿದ ನಂತರ ನೀಡಿದ್ದರೆ, ಐದು ವರ್ಷಗಳ ನಂತರ ಈ ವಿಷಯವೇಕೆ ಪ್ರಸ್ತಾಪಿಸಲಾಗಿದೆಯೆಂಬ ಪ್ರಶ್ನೆಗೆ ಉಪ್ಪಲ್ ಉತ್ತರಿಸಲು ನಿರಾಕರಿಸಿದ್ದಾರೆ.

2ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಕೂಡ ಎಸ್ಸಾರ್ ಗ್ರೂಪ್ ಕಾನೂನು ಕ್ರಮ ಎದುರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News