×
Ad

ಉತ್ತರಪ್ರದೇಶ: ಮಾಯಾವತಿ ಮತ್ತು ಮುಸ್ಲಿಂ ಸಮುದಾಯ!

Update: 2016-06-30 23:44 IST

ದೇಶದ ಹಿಂದಿ ಹೃದಯಭಾಗವಾದ ಬಿಹಾರವನ್ನು ಕಳೆದುಕೊಂಡ ನಂತರದಲ್ಲಿ ಉತ್ತರಪ್ರದೇಶ ರಾಜ್ಯವನ್ನು ಗೆಲ್ಲಲೇಬೇಕಾಗಿರುವುದು ಪ್ರಧಾನಮಂತ್ರಿಗಳಾದ ನರೇಂದ್ರಮೋದಿಯವರು ಮತ್ತು ಭಾಜಪದ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾರವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿಬಿಟ್ಟಿದೆ. ಈ ದಿಸೆಯಲ್ಲವರು ಹಲವು ಚುನಾವಣಾ ಪೂರ್ವ ತಂತ್ರಗಳನ್ನುಹೆಣೆಯುತ್ತ ಸಾಧ್ಯವಿರಬಹುದಾದ ಎಲ್ಲ ನಡೆಗಳನ್ನೂ ನಡೆಸಲು ಪ್ರಾರಂಭಿಸಿದ್ದಾರೆ. ಮೊದಲಿನಿಂದಲೂ ಉತ್ತರಪ್ರದೇಶ ಜಾತಿಯಾಧಾರಿತ ರಾಜಕಾರಣಕ್ಕೆ ಹೆಸರು ವಾಸಿಯಾಗಿದ್ದು, ತೊಂಬತ್ತರ ದಶಕದ ನಂತರ ಜಾತಿ ರಾಜಕಾರಣದ ಜೊತೆಗೆ ಧರ್ಮರಾಜಕಾರಣವೂ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಹೀಗಾಗಿ ಉತ್ತರಪ್ರದೇಶದಲ್ಲಿರುವ ಶೇಕಡಾ 28ರಷ್ಟು ಮುಸ್ಲಿಂ ಮತದಾರರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿದ್ದಾರೆಂಬುದು ಖಚಿತ. ಅದೂ ಅಲ್ಲದೆ ಸುಮಾರು 73 ಕ್ಷೇತ್ರಗಳಲ್ಲಿ ಅವರ ಮತಗಳೇ ನಿರ್ಣಾಯಕವೂ ಆಗಿದೆ ಹಾಗಾಗಿ ಈ 28ರಷ್ಟು ಮತವನ್ನು ಯಾವ ಪಕ್ಷ ಹೆಚ್ಚು ಸೆಳೆಯುತ್ತದೆಯೊ ಆ ಪಕ್ಷ ಬಹುಮತ ಪಡೆಯುವುದು ಸಾದ್ಯವಾಗುತ್ತದೆಯೆಂಬುದು ಒಂದು ಲೆಕ್ಕಾಚಾರ. ಈ ದೃಷ್ಟಿಯಿಂದ ಎಲ್ಲ ಪಕ್ಷಗಳು ಮುಸ್ಲಿಂ ಮತದಾರರನ್ನು ಓಲೈಸುವ ಮಾತುಗಳನ್ನಾಡುತ್ತಿವೆ.


ಇದುವರೆಗೂ ಬಹುತೇಕ ಮುಸ್ಲಿಂ ಮತದಾರರು ಸಮಾಜವಾದಿ ಪಕ್ಷದ ಕಟ್ಟಾ ಬೆಂಬಲಿಗರಾಗಿದ್ದರು. ಕಳೆದ ವಿದಾನಸಭಾ ಚುನಾವಣೆಯಲ್ಲಿ ಅಂದರೆ 2012ರಲ್ಲಿ ಸಮಾಜವಾದಿ ಪಕ್ಷವು ಶೇಕಡಾ 54ರಷ್ಟು ಮುಸ್ಲಿಂ ಮತಗಳನ್ನು ಪಡೆದು ನಿಚ್ಚಳ ಬಹುಮತ ಪಡೆದಿತ್ತು. ಆದರೆ 2014ರ ಲೋಕಸಭಾ ಚುನಾವಣೆಗಳ ನಂತರ ಈ ಸಮೀಕರಣ ಬಹಳಷ್ಟು ಬದಲಾದಂತೆ ಕಾಣುತ್ತಿದೆ. ಈ ಹಿಂದಿನಂತೆ ಮುಸ್ಲಿಂ ಸಮುದಾಯ ಸಂಪೂರ್ಣವಾಗಿ ಸಮಾಜವಾದಿ ಪಕ್ಷದ ಜೊತೆಗಿಲ್ಲ. ಅದು ಕಳೆದ ನಾಲ್ಕೂವರೆ ವರ್ಷಗಳ ಅಖಿಲೇಶ್ ಯಾದವ್ ಆಳ್ವಿಕೆಯಿಂದ ಭ್ರಮನಿರಸನಗೊಂಡಿದೆ. ಸಮಾಜವಾದಿ ಪಕ್ಷವು ಮುಝಪ್ಫರ್ ನಗರದ ಗಲಭೆಗಳನ್ನು, ಮತ್ತು ದಾದ್ರಿ ಪ್ರಕರಣವನ್ನು ನಿರ್ವಹಿಸಿದ ರೀತಿ ಮುಸ್ಲಿಂ ಸಮುದಾಯದ ಕೋಪಕ್ಕೆ ಕಾರಣವಾಗಿದೆ. ಮುಝಪ್ಫರ್ ನಗರದ ಗಲಭೆಗಳಾದ ಸುಮಾರು ಆರು ತಿಂಗಳ ನಂತರ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಅಲ್ಲಿಗೆ ಭೇಟಿ ನೀಡುವ ಮನಸ್ಸು ಮಾಡಿದ್ದರು ಅದೂ ಲೋಕಸಭಾ ಚುನಾವಣೆಯ ಮತಕೇಳಲು. ಹೀಗಾಗಿ ಗಲಭೆಯಾದ ತಕ್ಷಣ ಸ್ಥಳಕ್ಕೆ ಧಾವಿಸದ ಸಮಾಜವಾದಿ ಪಕ್ಷದ ತಂದೆ ಮಕ್ಕಳ ಬಗ್ಗೆ ಮುಸ್ಲಿಂ ಸಮುದಾಯ ತೀವ್ರ ಅಸಮಾಧಾನಗೊಂಡಿದೆ. ನಂತರದಲ್ಲಿ ನಡೆದ ದಾದ್ರಿ ಪ್ರಕರಣವನ್ನು ಭಾಜಪಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ವಹಿಸಿದ ಉತ್ತರಪ್ರದಶದ ಸರಕಾರದ ಬಗ್ಗೆ ಆ ಸಮುದಾಯ ಮತ್ತಷ್ಟು ಕೋಪಗೊಂಡು ದೂರ ಸರಿಯುವಲ್ಲಿ ಕಾರಣವಾಯಿತು. ಇದರ ಜೊತೆಗೆ ಬಿಹಾರದಲ್ಲಿ ನಡೆದ ಮಹಾಘಟಬಂಧನ್ ಜೊತೆ ಸೇರದೆ ಭಾಜಪಕ್ಕೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ನಡೆದುಕೊಂಡ ಮುಲಾಯಂ ಸಿಂಗ್ ಅವರ ನಡವಳಿಕೆ ಮುಸ್ಲಿಂ ಸಮುದಾಯಕ್ಕೆ ಸಮಾಜವಾದಿ ಪಕ್ಷದ ಬಗ್ಗೆ ದಶಕಗಳಿಂದ ಇದ್ದ ನಂಬಿಕೆ ಕುಸಿಯುವಂತೆ ಮಾಡಿತು.


 ಇಂತಹ ಪರಿಸ್ಥಿತಿಯಲ್ಲ್ಲಿ ಭಾಜಪವನ್ನು ಸೋಲಿಸಬಲ್ಲ ಒಂದು ಪಕ್ಷವನ್ನು ಮುಸ್ಲಿಂ ಸಮುದಾಯ ಬೆಂಬಲಿಸುವ ಯೋಚನೆಯಲ್ಲಿದೆ ಮತ್ತು ಅಂತಹ ಪಕ್ಷದ ಹುಡುಕಾಟದಲ್ಲಿ ತೊಡಗಿರುವಾಗಲೇ ಬಹುಜನ ಪಕ್ಷದ ಮಾಯಾವತಿಯವರು ಮುಸ್ಲಿಂ ಸಮುದಾಯದ ಬೆಂಬಲ ಪಡೆಯಲು ಬೇಕಾದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಈ ಕಾರ್ಯಕ್ಕೆ ಪೂರ್ವಭಾವಿಯಾಗಿಯೇ ಅವರು ಉತ್ತರಾಖಂಡದಲ್ಲಿ ಇತ್ತೀಚೆಗೆ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ತಮ್ಮ ಪಕ್ಷದ ಶಾಸಕರುಗಳು ಕಾಂಗ್ರೆಸ್‌ಗೆ ಮತಚಲಾಯಿಸುವಂತೆ ನೋಡಿಕೊಂಡರು. ಹೀಗೆ ತಾನು ಕಾಂಗ್ರೆಸ್‌ನ ಪರವಾಗಿರುವುದನ್ನು ಸಾರ್ವಜನಿಕವಾಗಿ ತೋರಿಸಿಕೊಡುವುದರ ಮೂಲಕ ತಮ್ಮ ಪಕ್ಷ ಭವಿಷ್ಯದಲ್ಲಿ ಭಾಜಪವನ್ನು ಯಾವ ಕಾರಣಕ್ಕೂ ಬೆಂಬಲಿಸುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ಮುಸ್ಲಿಂ ಸಮುದಾಯಕ್ಕೆ ನೀಡುವಲ್ಲಿ ಯಶಸ್ವಿಯಾಯಿತು. ಸಮಾಜವಾದಿ ಪಕ್ಷದಿಂದ ದೂರ ಸರಿಯುತ್ತಿರುವ ಮುಸ್ಲಿಂ ಸಮುದಾಯವನ್ನು ಸೆಳೆಯಲು ನಿರ್ಧರಿಸಿರುವ ಮಾಯಾವತಿಯವರು ತಾವು ಹಿಂದೆ ಪ್ರಯೋಗಿಸಿದ ದಲಿತ ಮತ್ತು ಮುಸ್ಲಿಂ ಸಮೀಕರಣವನ್ನು ಮತ್ತೊಮ್ಮೆ ಪ್ರಯೋಗಿಸಲು ಸಿದ್ಧತೆ ನಡೆಸಿದ್ದಾರೆ. 2007ರಲ್ಲಿ ಅವರು 206 ಸ್ಥಾನಗಳನ್ನು ಗೆದ್ದು ಮುಖ್ಯಮಂತ್ರಿಯಾಗಲು ಸಹಾಯ ಮಾಡಿದ್ದೇ ಈ ದಲಿತ-ಮುಸ್ಲಿಂ-ಬ್ರಾಹ್ಮಣ ಸಮೀಕರಣ. ಈಗಾಗಲೇ ಟಿಕೇಟ್ ಹಂಚಿಕೆಯನ್ನು ಪ್ರಾರಂಭಿಸಿರುವ ಬಹುಜನ ಪಕ್ಷವು ಸುಮಾರು 100 ಸ್ಥಾನಗಳನ್ನು ಮುಸ್ಲಿಮರಿಗೂ, 50 ಸ್ಥಾನಗಳನ್ನು ಬಾಹ್ಮಣರಿಗೂ ಮೀಸಲಿಟ್ಟಿದ್ದು ಒಟ್ಟು ಸ್ಥಾನಗಳ ಪೈಕಿ ಶೇಕಡಾ 25ರಷ್ಟನ್ನು ಮುಸ್ಲಿಂ ಸಮುದಾಯಕ್ಕೆ ಮೀಸಲಿಟ್ಟು, ತಾನು ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೂ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತಹ ಸೂಚನೆಯನ್ನು ನೀಡಿದ್ದಾರೆ.


ಈ ದಿಸೆಯಲ್ಲಿ ಅವರು ಭಾಜಪವನ್ನು ಸೋಲಿಸಲು ಕಾಂಗ್ರೆಸ್ ಜೊತೆಗೆ ಕೈಜೋಡಿಸುವ ಇರಾದೆಯನ್ನು ಹೊಂದಿದ್ದಾರೆ. ಇಂತಹ ಮೈತ್ರಿಯ ವಿಚಾರದಲ್ಲಿ ಕಾಂಗ್ರೆಸ್ ತಗೆದುಕೊಳ್ಳಬಹುದಾದ ನಿರ್ಧಾರ ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಜಾತಿ ಲೆಕ್ಕಾಚಾರದ ಜೊತೆಜೊತೆಗೆ ಧಾರ್ಮಿಕ ಧ್ರುವೀಕರಣಗಳೂ ನಡೆಯುವುದು ಖಂಡಿತ. ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಇಂತಹ ಬೆಳವಣಿಗೆಗಳು ಒಳ್ಳೆಯದಲ್ಲವಾದರೂ, ಇಂಡಿಯಾದ ರಾಜಕಾರಣ ನಡೆಯುತ್ತಿರುವುದೇ ಇಂತಹ ಜಾತಿ ಧರ್ಮಗಳ ಆಧಾರದ ಮೇಲೆ ಎನ್ನುವುದು ವಿಷಾದದ ವಿಷಯವಾಗಿದೆ.

Writer - ಕು.ಸ.ಮಧುಸೂದನ ನಾಯರ್

contributor

Editor - ಕು.ಸ.ಮಧುಸೂದನ ನಾಯರ್

contributor

Similar News