×
Ad

71 ದೇಶಗಳಲ್ಲಿ ವಜ್ರ ವ್ಯವಹಾರ ನಡೆಸುವ ಉದ್ಯಮಿಯ ಪುತ್ರನಿಗೆ 7000 ರೂ. ಯ ತರಬೇತಿ !

Update: 2016-07-23 12:10 IST

ಭಾರತದ ವಜ್ರ ಉದ್ಯಮಿ ಸವ್ಜಿ ಧೋಲಾಕಿಯ ತಮ್ಮ ಸಿಬ್ಬಂದಿಗಳಿಗೆ ಉಡುಗೊರೆಯಾಗಿ ಕಾರು, ಆಭರಣ ಮತ್ತು ಅಪಾರ್ಟ್‌ಮೆಂಟ್ ಕೂಡ ಕೊಟ್ಟಿದ್ದಾರೆ. ಒಟ್ಟು ರೂ. 60 ಬಿಲಿಯನ್ ಮೌಲ್ಯದ ಉದ್ಯಮ ಸಾಮ್ರಾಜ್ಯದ ಒಡೆಯ ತಮ್ಮ ಮಗನಿಗೆ ಮಾತ್ರ ಬಡತನದ ಅನುಭವ ಪಡೆಯುವಂತೆ ಮನೆಯಿಂದ ಹೊರಗೆ ಕಳುಹಿಸಿದ್ದಾರೆ.

ಸೂರತ್ ಮೂಲದ ಗುಜರಾತಿ ಉದ್ಯಮಿ ತಮ್ಮ ಕುಟುಂಬದಲ್ಲಿ ಖಾಸಗಿ ಮೌಲ್ಯಗಳು ಇರಬೇಕೆಂದು ಬಯಸುವವರು. ಅದಕ್ಕಾಗೇ 21 ವರ್ಷದ ಮಗ ದ್ರವ್ಯ ಧೋಲಾಕಿಯನನ್ನು ಉದ್ಯೋಗ ಹುಡುಕಿ ಸ್ವಂತ ದುಡಿಮೆಯಲ್ಲಿ ಮೇಲೆ ಬರುವಂತೆ ಹೇಳಿ ದಕ್ಷಿಣದ ಕೊಚ್ಚಿಗೆ ಕಳುಹಿಸಿದ್ದಾರೆ. ಪರಿಚಿತವೇ ಇಲ್ಲದ ಸ್ಥಳಕ್ಕೆ ಮಗನನ್ನು ಕಳುಹಿಸಿ ಜೀವನದ ಪಾಠವನ್ನು ಕಲಿಯುವಂತೆ ಮಾಡಿದ್ದೇನೆ ಎನ್ನುತ್ತಾರೆ ಸವ್ಜಿ.

ಮೂರು ಸೆಟ್‌ಗಳ ಬಟ್ಟೆಗಳು ಮತ್ತು ರೂ. 7000 ಮಾತ್ರ ಕೊಟ್ಟು ದ್ರವ್ಯನನ್ನು ಮನೆಯಿಂದ ಒಂದು ತಿಂಗಳ ಕಾಲ ಹೊರ ಕಳುಹಿಸಿದ್ದಾರೆ ಉದ್ಯಮಿತಂದೆ. ಆತ ಕಠಿಣ ಹಾದಿಯನ್ನು ಕಲಿಯಬೇಕು. ಮೂರು ಜೊತೆ ಬಟ್ಟೆಗಳನ್ನು ತೊಳೆಯುವುದು ಮತ್ತು ತೊಡುವುದು. ಯಾವುದಕ್ಕೂ ಪಾಕೆಟ್ ಹಣ ಬಳಸದೆ ಇರುವುದು. ತಿನ್ನಲು ಕೆಲಸ ಮಾಡುವುದು. ಪ್ರತೀ ವಾರ ಕೆಲಸ ಬದಲಿಸುವುದು ಮತ್ತು ಎಲ್ಲದಕ್ಕೂ ಕುಟುಂಬದ ಹೆಸರು ಹೇಳುವುದನ್ನು ಬಿಡುವುದು ಆತ ಕಲಿಯಬೇಕು ಎನ್ನುತ್ತಾರೆ ಸವ್ಜಿ.

ಸವ್ಜಿ ಸ್ವತಃ ಈ ಎಲ್ಲಾ ಕಷ್ಟಗಳನ್ನು ಅನುಭವಿಸಿದ ಮೇಲೆಯೇ 71 ದೇಶಗಳಿಗೆ ವ್ಯಾಪಿಸಿದ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ್ದರು. ಗುಜರಾತಿನ ಸೌರಾಷ್ಟ್ರದ ಅಮ್ರೇಲಿಯ ಕುಟುಂಬದಲ್ಲಿ ಜನಿಸಿದ ಸವ್ಜಿ ನಾಲ್ಕನೇ ತರಗತಿ ಕಲಿತ ಮೇಲೆ ತಮ್ಮ ಸೋದರ ಮಾವನ ವಜ್ರದ ವ್ಯಾಪಾರದಲ್ಲಿ 13ನೇ ವಯಸ್ಸಿನಲ್ಲಿ ತೊಡಗಿದ್ದರು. ನಂತರ ಹರಿ ಕೃಷ್ಣ ಎಕ್ಸಪೋರ್ಟ್ಸ್ ಸ್ಥಾಪಿಸಿ ಜಾಗತಿಕವಾಗಿ 9000 ಮಂದಿಗೆ ಉದ್ಯೋಗ ಕೊಟ್ಟಿದ್ದಾರೆ.

ದ್ರವ್ಯನಿಗೆ ಬದುಕಿನ ಪಾಠ ಕಲಿಸಲು ಅವರು ಏಕಾಂಗಿಯಾಗಿ ಹೊರಗೆ ಕಳುಹಿಸಿದ್ದಾರೆ. ಬಡತನದ ಬೇಗೆ ಮತ್ತು ಉದ್ಯೋಗ ಮತ್ತು ಹಣಕ್ಕಾಗಿ ಕಷ್ಟಪಡುವುದನ್ನು ಮಗನಿಗೆ ಕಲಿಸುವುದು ಅವರ ಉದ್ದೇಶ. ನ್ಯೂಯಾರ್ಕ್‌ನಲ್ಲಿ ಬ್ಯುಸಿನೆಸ್ ಡೆವಲಪ್ಮೆಂಟ್ ವಿದ್ಯಾರ್ಥಿಯಾಗಿರುವ ದ್ರವ್ಯನಿಗೆ ಇದು ಅತ್ಯುತ್ತಮ ಅವಕಾಶ. ಕೇರಳದ ಅಲುವಾದಲ್ಲಿ ಬಂದಿಳಿದಾಗ ದ್ರವ್ಯನಿಗೆ ಅಪರಿಚಿತ ಜಾಗಕ್ಕೆ ಬಂದ ಹಾಗಾಗಿತ್ತು. ಹೊಸ ಸ್ಥಳ, ಹೊಸ ಜಾಗ, ಹೊಸ ಸಂಸ್ಕೃತಿಯಲ್ಲಿ 36 ಗಂಟೆಗಳ ಕಾಲ ಆಹಾರವಿಲ್ಲದೆ ಕಳೆದಿದ್ದರು. ನಿಧಾನವಾಗಿ ಜನರು ಸ್ನೇಹಮಯಿ ಎನ್ನುವುದನ್ನು ಕಲಿತರು. ಐದು ದಿನ ದ್ರವ್ಯನ ಬಳಿ ಉದ್ಯೋಗವಿರಲಿಲ್ಲ, ವಸತಿ ಇರಲಿಲ್ಲ. 60 ಸ್ಥಳಗಳಲ್ಲಿ ಕೆಲಸ ದೊರೆಯದೆ ಹೈರಾಣಾಗಿದ್ದರು. ಮೊದಲ ಉದ್ಯೋಗ ಆರ್ಯ ರೆಸ್ಟೊರೆಂಟಲ್ಲಿ ಸಿಕ್ಕಿತ್ತು. ಅಲ್ಲಿಂದ ಬೇಕರಿ ವಿಭಾಗಕ್ಕೆ ಹೋದರು. ಪ್ರತೀ ವಾರ ಕೆಲಸ ಬಿಡುವ ಷರತ್ತು ಪಾಲಿಸುವುದು ಕಷ್ಟವಾಗಿತ್ತು. ಕಾಲ್ ಸೆಂಟರಲ್ಲಿ ಕೆಲಸ ಮಾಡಿ ದಿನಕ್ಕೆ 800 ಕರೆ ಮಾಡಿದ್ದರು. ದಿನಕ್ಕೆ ಒಂದು ಬ್ರೇಕ್ ಕೂಡ ಅವರಿಗೆ ಸಿಕ್ಕಿರಲಿಲ್ಲ. ನಾಲ್ಕು ಮಂದಿ ಜೊತೆಗೆ ರೂಂ ಹಂಚಿಕೊಂಡಿದ್ದರು. ನೈರ್ಮಲ್ಯವಿಲ್ಲದ ಕೋಣೆಯಲ್ಲಿದ್ದರು.

ರೂ. 40 ಕೊಟ್ಟು ಅನ್ನ ಮತ್ತು ಸಾಂಬಾರ್ ತಿನ್ನುವುದನ್ನು ಕಲಿತರು. ಆದರೆ ಕೇರಳದ ಕೆಳ ಮಧ್ಯಮವರ್ಗದವರು ಬಹಳ ಸ್ನೇಹಮಯಿ ಮತ್ತು ಸಹೃದಯರು ಎನ್ನುತ್ತಾರೆ ದ್ರವ್ಯ.

ಬಡವರು ತಮ್ಮಲ್ಲಿರುವ ಸ್ವಲ್ಪವನ್ನೇ ಹಂಚಿಕೊಂಡು ತಿನ್ನುವುದು ಕಂಡು ಎಲ್ಲರ ಜೊತೆಗೆ ಸಹೃದಯವಾಗಿ ಇರುವುದನ್ನು ಕಲಿತೆ. ನನಗೆ ಭಾಷೆ ಗೊತ್ತಿಲ್ಲದ ಊರಿನಲ್ಲಿ ಬಹಳ ಪ್ರೀತಿ ಸಿಕ್ಕಿದೆ. ನಾವೆಲ್ಲರೂ ಹೃದಯದ ಮಾತು ಆಡುತ್ತೇವೆ. ಈ ಅನುಭವ ಎಲ್ಲಾ ಸನ್ನಿವೇಶವನ್ನೂ ಧೈರ್ಯದಿಂದ ಎದುರಿಸುವುದು ಕಲಿಸಿದೆ ಎನ್ನುತ್ತಾರೆ ದ್ರವ್ಯ.

 ಕೃಪೆ: khaleejtimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News