ಈದ್ ಆಚರಿಸಿದ ಶಾಲೆಗೆ ಐದೂವರೆ ಲಕ್ಷ ದಂಡ !
ಈದ್ ಹಬ್ಬದಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಹರಿಯಾಣದ ಶಾಲೆಯೊಂದಕ್ಕೆ ಪಂಚಾಯತ್ ರೂ. 5 ಲಕ್ಷ ದಂಡ ಹೇರಿದೆ. ಗ್ರೀನ್ ಡೇಲ್ಸ್ ಪಬ್ಲಿಕ್ ಸ್ಕೂಲ್ನಿಂದ ಮುಸ್ಲಿಂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ನಿವಾರಿಸುವಂತೆಯೂ ಪಂಚಾಯತ್ ಹೇಳಿದೆ. ಅಲ್ಲದೆ ಬಾಲಕಿಯರು ಸಲ್ವಾರ್ ಕಮೀಜ್ ಹಾಕಬೇಕು ಮತ್ತು 2 ವರ್ಷಗಳ ಕಾಲ ಶಾಲಾ ಶುಲ್ಕ ಏರಿಸುವಂತಿಲ್ಲ ಎಂದೂ ಪಂಚಾಯತ್ ಆದೇಶಿಸಿದೆ.
ಗುರುಗಾಂವ್ನಿಂದ 39 ಕಿಮೀ ದೂರದ ಮೇವಾತ್ ಜಿಲ್ಲೆಯ ತೌರು ಪಟ್ಟಣದಲ್ಲಿ ಹಿಂದೂಗಳೇ ಬಹುಸಂಖ್ಯಾತ ನಿವಾಸಿಗಳು. ಶಾಲಾ ಆಡಳಿತ ಇಸ್ಲಾಂ ಪ್ರಚಾರ ಮಾಡುತ್ತಿದೆ ಮತ್ತು ವಿದ್ಯಾರ್ಥಿಗಳಿಗೆ ಇಸ್ಲಾಂ ಧಾರ್ಮಿಕ ವಿಧಿಗಳನ್ನು ಆಚರಿಸುವಂತೆ ಒತ್ತಡ ಹೇರುತ್ತಿದೆ ಎಂದು ಪಟ್ಟಣದ ನಿವಾಸಿಗಳು ದೂರಿದ್ದಾರೆ. ಈದ್ ಸಭೆಯ ನಂತರ ಸಮೂಹವೊಂದು ಕೋಲು ಮತ್ತು ಇಟ್ಟಿಗೆ ಹಿಡಿದು ಶಾಲೆಯ ಗೇಟುಗಳ ಬಳಿ ಸೇರಿತ್ತು. ಪಂಚಾಯತ್ ಆದೇಶದ ಮೇಲೆ ನೇಮಕಗೊಂಡಿದ್ದ ಒಬ್ಬನೇ ಒಬ್ಬ ಮುಸ್ಲಿಂ ಅಧ್ಯಾಪಕನೂ ಉದ್ಯೋಗ ಕಳೆದುಕೊಂಡಿದ್ದಾನೆ.
ಪೊಲೀಸರು ಮತ್ತು ಸ್ಥಳೀಯ ಶಾಸಕ ಪ್ರಕಾರ ಪಂಚಾಯತ್ ಆದೇಶಕ್ಕೆ ಬೆಲೆ ಇಲ್ಲ. ಈ ಶಾಲೆಯನ್ನು ಪಾಲಿಕೆಯ ಸಮಿತಿ ನಡೆಸುತ್ತಿದೆ. “ಸರ್ಕಾರ ಯಾವುದೇ ಪಂಚಾಯತ್ ಮಾತು ಕೇಳುವುದಿಲ್ಲ. ಸ್ಥಳೀಯ ಮಂಡಳಿ ಅಂತಹ ಸಮೂಹಗಳ ಚಟುವಟಿಕೆಗಳಿಗೆ ಬೆಂಬಲಿಸುವುದಿಲ್ಲ” ಎಂದು ತಹಶೀಲ್ದಾರ್ ಪೂನಂ ಬಬ್ಬರ್ ಹೇಳಿದ್ದಾರೆ. ಪೊಲೀಸರ ಪ್ರಕಾರ ಪ್ರಾಂತದಲ್ಲಿ ಈಗ ಶಾಂತಿ ನೆಲೆಯೂರಿದೆ.
“ಶಾಲೆ ನಮ್ಮ ಮಕ್ಕಳನ್ನು ಮತಾಂತರಿಸಲು ಪ್ರಯತ್ನಿಸುತ್ತಿದೆ. ಮಕ್ಕಳಿಗೆ ನಮಾಜ್ ಮಾಡಲು ಮತ್ತು ಕುರಾನ್ ಬಾಯಿಪಾಠ ಮಾಡಿಸಿದೆ. ಇದಕ್ಕೆ ಇನ್ನೇನು ಹೇಳಬಹುದು? ಹೆತ್ತವರು ನಮ್ಮ ಕಡೆಗೆ ಬಂದು ದೂರು ಕೊಟ್ಟ ಮೇಲೆ ಶಾಲಾ ಪ್ರಾಧಿಕಾರವನ್ನು ಪ್ರಶ್ನಿಸಿದ್ದೇವೆ ಎನ್ನುತ್ತಾರೆ ಪಂಚಾಯತ್ ಸದಸ್ಯ ಟೇಕ್ ಚಂದ್ ಸೈನಿ. ಹೆಸರು ಹೇಳಲಿಚ್ಛಿಸದ ಹೆತ್ತವರೊಬ್ಬರು ಇದನ್ನೇ ಹೇಳಿದರು. ನನ್ನ ಮಗ ಇದೇ ಶಾಲೆಯಲ್ಲಿ ಕಲಿಯುತ್ತಾನೆ. ನಮಗೆ ಧರ್ಮ ಬಹಳ ಮುಖ್ಯ” ಎನ್ನುತ್ತಾರೆ. ಆದರೆ ಶಾಲಾ ಆಡಳಿತ ಈ ಆರೋಪ ನಿರಾಕರಿಸಿದೆ. “ಮಕ್ಕಳು ಹಾಡು ಹಾಡಿ, ನೃತ್ಯ ಮಾಡಿ ಪ್ರಾರ್ಥನೆ ಮಾಡಿದರು. ಪರಸ್ಪರರ ಧರ್ಮವನ್ನು ಗೌರವಿಸುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಈ ವಿಷಯಕ್ಕೆ ಕೋಮು ಬಣ್ಣ ಕೊಡುವುದು ತಪ್ಪು” ಎನ್ನುತ್ತಾರೆ ಶಾಲೆಯ ವ್ಯವಸ್ಥಾಪಕರು. ನಾಲ್ಕನೇ ತರಗತಿ ವಿದ್ಯಾರ್ಥಿ ಪ್ರಕಾರ ಹಾಡು ಹಿಂದಿ ಸಿನಿಮಾದ್ದಾಗಿತ್ತು. ಪ್ರಾರ್ಥನೆಯೂ ಹಿಂದಿಯಲ್ಲಿತ್ತು. ಹೆತ್ತವರು ತಡೆಯದಿದ್ದರೆ ಪ್ರತಿಭಟನಾಕಾರರು ಶಾಲೆಯ ಮೇಲೆ ದಾಳಿ ಮಾಡುತ್ತಿದ್ದರು ಎಂದು 8ನೇ ತರಗತಿ ವಿದ್ಯಾರ್ಥಿ ಹೇಳುತ್ತಾರೆ. ಶಾಸಕ ಚೌಧರಿ ಝಕೀರ್ ಹುಸೇನ್ ಪ್ರಕಾರ ಯಾವುದೇ ನಮಾಜ್ ಆಗಿಲ್ಲ. ಕೆೀವಲ ಸಂಭ್ರಮಾಚರಣೆಯಾಗಿದೆ.
ಹಲವಾರು ಬಲಪಂಥೀಯ ಸಂಘಟನೆಯ ಸದಸ್ಯರೂ ಶಾಲಾ ಆಡಳಿತದ ಮೇಲೆ ಊಹಾಪೋಹದಿಂದ ಆರೋಪ ಹೊರಿಸಲಾಗುತ್ತದೆ ಎಂದಿದ್ದಾರೆ. "ನನ್ನ ಮಕ್ಕಳು ಅಲ್ಲೇ ಕಲಿತದ್ದು. ಈಗ ಮೊಮ್ಮಕ್ಕಳೂ ಇದೇ ಶಾಲೆಯಲ್ಲಿದ್ದಾರೆ. ನಿವಾಸಿಗಳಿಗೆ ಇಂತಹ ಸನ್ನಿವೇಶ ಯಾವತ್ತೂ ಬಂದಿರಲಿಲ್ಲ. ಪ್ರಕರಣದ ಆರೋಪಗಳು ಸುಳ್ಳು" ಎಂದು ವಿಶ್ವ ಹಿಂದೂ ಪರಿಷತ್ನ ಪವನ್ ಭಾರದ್ವಾಜ್ ಹೇಳಿದ್ದಾರೆ. ಶಾಲೆಯ ಪ್ರಕಾರ ಇಲೆಕ್ಟ್ರಿಶಿಯನ್ ಒಬ್ಬ ಈ ಸುಳ್ಳುಗಳನ್ನು ಹರಡಿದ್ದಾನೆ. ವಯರಿಂಗ್ ಸರಿ ಮಾಡಲು ಬಂದ ಇಲೆಕ್ಟ್ರಿಶಿಯನ್ನ್ನು ಕಾವಲುಗಾರರು ಒಳಬಿಡದೆ ಇದ್ದಾಗ ನಮಾಝ್ ಓದುತ್ತಿದ್ದಾರೆ ಎಂದು ಸುಳ್ಳು ಬಿಟ್ಟಿದ್ದ ಎನ್ನಲಾಗಿದೆ.
ಕೃಪೆ: www.hindustantimes.com