ಗೋ ರಕ್ಷಕರ ಗೂಂಡಾಗಿರಿ ಬಗ್ಗೆ ಮೋದಿ ಮೌನ ನಾಚಿಕೆಗೇಡು

Update: 2016-08-04 09:36 GMT

ಭಾರತದ ಗುಜರಾತ್ ರಾಜ್ಯದ ಅತಿ ದೊಡ್ಡ ನಗರ ಅಹ್ಮದಾಬಾದ್‌ನಲ್ಲಿ ರವಿವಾರ ದೇಶದ ಅತ್ಯಂತ ಕೆಳ ವರ್ಗದ ಸದಸ್ಯರಾದ ಸಾವಿರಾರು ದಲಿತರು ನಡೆಸಿದ ಪ್ರತಿಭಟನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳ ಭರವಸೆ ಹಾಗೂ ಬಲಪಂಥೀಯ ಹಿಂದೂ ಸಿದ್ಧಾಂತವಾದಿಗಳ ವಿಭಜನಾತ್ಮಕ ರಾಜಕೀಯದ ನಡುವಿರುವ ವೈರುಧ್ಯತೆಯನ್ನು ಬಹಿರಂಗ ಪಡಿಸಿದೆ.

ತುಳಿತಕ್ಕೊಳಗಾದ ಸಮಾಜ ಬಹಳ ಹಿಂದಿನಿಂದಲೂ ನಡೆಸಿಕೊಂಡು ಬಂದಂತಹ ದನದ ಚರ್ಮವನ್ನು ಸುಲಿಯುವ ಕೆಲಸ ಮಾಡುತ್ತಿದ್ದ ನಾಲ್ಕು ಮಂದಿ ದಲಿತರ ಮೇಲೆ ಗೋ ರಕ್ಷಕರೆನಿಸಿಕೊಂಡವರು ಜುಲೈ 11 ರಂದು ಗುಜರಾತ್ ರಾಜ್ಯದ ಉನಾ ಸಮೀಪ ನಡೆಸಿದ ಹಲ್ಲೆಯನ್ನು ವಿರೋಧಿಸಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಹಲ್ಲೆಕೋರರು ದಲಿತ ಯುವಕರನ್ನು ಸೊಂಟದ ತನಕ ವಿವಸ್ತ್ರಗೊಳಿಸಿ ಕಾರೊಂದಕ್ಕೆ ಅವರನ್ನು ಕಟ್ಟಿ ಪೊಲೀಸರು ಹಾಗೂ ಇತರರು ನೋಡುತ್ತಿರುವಂತೆಯೇ ಅವರಿಗೆ ಗಂಟೆಗಟ್ಟಲೆ ಹೊಡೆದಿದ್ದರು.

ಹಿಂದೂಗಳಿಗೆ ಪವಿತ್ರವಾಗಿರುವ ಗೋವು ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ಹಿಂದೂ ಬಲಪಂಥೀಯರಿಗೆ ಮಿಂಚಿನ ರಾಡ್ ಆಗಿ ಪರಿಣಮಿಸಿದೆ. ಗೋಹತ್ಯೆ ವಿಚಾರವನ್ನು ಸ್ವತಹ ಪ್ರಧಾನಿ ಮೋದಿಯವರೇ ಕೆಲ ರ್ಯಾಲಿಗಳಲ್ಲಿ ದುರ್ಬಳಕೆ ಮಾಡಿದ್ದಾರೆ. ‘‘ಬಿಜೆಪಿ ಸರಕಾರ ಇದ್ದಾಗಲೆಲ್ಲಾ ಗೋಮಾಂಸದ ಮೇಲೆ ನಿಷೇಧವಿರುವುದು,’’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಹೇಳಿಕೊಂಡಿದ್ದರು. ‘‘ಆ ಕೆಲ ದಲಿತರಿಗೆ ಒಳ್ಳೆಯ ಪಾಠ ಕಲಿಸುವ ಯಾರಿಗೇ ಆದರೂ ನಾನು ನನ್ನ ಸಂಪೂರ್ಣ ಬೆಂಬಲ ನೀಡುತ್ತೇನೆ,’’ಎಂದು ಬಿಜೆಪಿ ಸಂಸದ ರಾಜಾ ಸಿಂಗ್ ರವಿವಾರ ಘೋಷಿಸಿದ್ದರು. ಇದರ ಪರಿಣಾಮವೇ ನೈತಿಕ ಪೊಲೀಸರ ಅರಾಜಕತೆ ಸೃಷ್ಟಿಯಾಗಿದೆ. ಮಾರ್ಚ್ ತಿಂಗಳಲ್ಲಿ ಇಬ್ಬರು ಗೋ ಮಾರಾಟಗಾರರ ಮೇಲೆ ಜಾರ್ಖಂಡ್ ರಾಜ್ಯದಲ್ಲಿ ಗಂಭೀರ ಹಲ್ಲೆ ನಡೆದಿತ್ತು.

ತಮ್ಮ ಮೇಲೆ ಹಲ್ಲೆ ನಡೆಯುವುದಿಲ್ಲ ಹಾಗೂ ತಲೆತಲಾಂತರದಿಂದ ತಮ್ಮ ಸಮಾಜದ ಮೇಲೆ ನಡೆಯುತ್ತಿರುವ ಶೋಷಣೆಗೆ ಅಂತ್ಯ ಕಾಣಿಸದ ಹೊರತು ದಲಿತರು ಸತ್ತ ದನಗಳ ದೇಹಗಳನ್ನು ವಿಲೇವಾರಿ ಮಾಡಲು ನಿರಾಕರಿಸುತ್ತಿದ್ದು, ಸತ್ತ ದನಗಳ ದೇಹಗಳು ಕೊಳೆತು ನಾರುತ್ತಿವೆ. ದಲಿತರಲ್ಲಿ ಶಿಕ್ಷಣ ಮಟ್ಟ ಹಾಗೂ ನಿರೀಕ್ಷೆಗಳು ಹೆಚ್ಚಾಗಿದ್ದರೂ ಅವರು ಈಗಲೂ ವಿಪರೀತ ತಾರತಮ್ಯ ನೀತಿಯಿಂದ ತೊಂದರೆಗೀಡಾಗಿದ್ದಾರೆ. ಜನವರಿ ತಿಂಗಳಲ್ಲಿ ಜಾತಿ ಆಧರಿತ ಬೆದರಿಕೆಗಳಿಂದ ಒಬ್ಬ ದಲಿತ ಪಿಎಚ್‌ಡಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಗುಜರಾತ್ ರಾಜ್ಯವನ್ನು 12 ವರ್ಷಗಳ ಕಾಲ ಆಳಿದ್ದ ಮೋದಿ 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ದಾಖಲಿಸಿ ಇಡೀ ಭಾರತವನ್ನು ಗುಜರಾತ್ ಮಾದರಿಯಲ್ಲಿ ಆರ್ಥಿಕ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದಾಗಿ ಭರವಸೆ ನೀಡಿದ್ದರು. ಆದರೆ ಕಳೆದ ಸೆಪ್ಟೆಂಬರ್‌ತಿಂಗಳಿನಲ್ಲಿ ಗುಜರಾತ್ ರಾಜ್ಯದಲ್ಲಿ ಮಧ್ಯಮ ವರ್ಗದ ಪಟೇಲ್ ಸಮುದಾಯ ನಿರುದ್ಯೋಗ ಸಮಸ್ಯೆಯಿಂದ ಆಕ್ರೋಶಗೊಂಡು ಆಯೋಜಿಸಿದ್ದ ಪ್ರತಿಭಟನೆಗಳಿಂದ ಗುಜರಾತ್‌ನಲ್ಲಿ ಉತ್ತಮವಾಗಿ ಜೀವಿಸುತ್ತಿದ್ದಾರೆಂದುಕೊಂಡವರೂ ಒದ್ದಾಡುತ್ತಿದ್ದಾರೆಂದು ತಿಳಿದು ಬಂದಿತ್ತು.

ಸೋಮವಾರ, ಸ್ವತಹ ಮೋದಿಯವರೇ ಗುಜರಾತ್‌ನಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಆರಿಸಿದ್ದ ಅಲ್ಲಿನ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ರಾಜೀನಾಮೆ ನೀಡಿದ್ದರು. ಗುಜರಾತ್ ನಲ್ಲಿರುವ ಗೊಂದಲ ಹಾಗೂ ಗದ್ದಲಗಳು ಮುಂದಿನ ವರ್ಷ ರಾಜ್ಯದಲ್ಲಿ ನಡೆಯುವ ಚುನಾವಣೆಗಳಲ್ಲಿ ಹಾಗೂ 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿಗೆ ಮುಳುವಾಗಬಹುದೋ ಎಂಬ ಭಯದ ಸಂಕೇತವೇ ಈ ಬೆಳವಣಿಗೆಯಾಗಿದೆ. ಮೋದಿ ಗೋ ರರಕ್ಷಕರ ಅಟ್ಟಹಾಸದ ಬಗ್ಗೆ ತಮ್ಮ ನಾಚಿಕೆಗೇಡು ಮೌನ ಮುರಿಯದಿದ್ದರೆ ಹಾಗೂ ಆರ್ಥಿಕ ಅವಕಾಶಗಳು, ಆತ್ಮಗೌರವ ಹಾಗೂ ನ್ಯಾಯದೆಡೆಗೆ ತಮ್ಮ ರಾಜಕೀಯ ಗುರಿಯನ್ನು ನೆಡದೇ ಹೋದರೆ ಬಿಜೆಪಿಯ ಈಗಿನ ಭಯ ನಿಜವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News