ಡಿಯರ್ ಜಿಂದಗಿ... ನೀರಸ ಕಥೆಗೆ ಅಭಿನಯವೇ ಜೀವಾಳ

Update: 2016-11-26 18:30 GMT

ಗೌರಿ ಶಿಂಧೆ ತನ್ನ ಚೊಚ್ಚಲ ನಿರ್ದೇಶನದ ಚಿತ್ರ ಇಂಗ್ಲಿಷ್ ವಿಂಗ್ಲಿಷ್‌ನಲ್ಲಿ, ಆಂಗ್ಲ ಭಾಷೆಯ ಬಗ್ಗೆ ಭಾರತೀಯರ ವ್ಯಾಮೋಹವನ್ನು ಅತ್ಯಂತ ಸುಂದರವಾಗಿ ಬೆಳ್ಳಿತೆರೆಯಲ್ಲಿ ಮೂಡಿಸಿದ್ದರು. ಇದೀಗ ಡಿಯರ್ ಝಿಂದಗಿ ಚಿತ್ರದ ಮೂಲಕ ಅವರು ಹೊಸ ತಲೆಮಾರಿನ ಯುವಜನಾಂಗದ ಬದುಕು, ಆಶೋತ್ತರಗಳ ಬಗ್ಗೆ ಬೆಳಕು ಚೆಲ್ಲುವ ಯತ್ನ ಮಾಡಿದ್ದಾರೆ.

ಯಾರಿಗಾದರೂ ಬದುಕಿನ ಕಹಿ ಅನುಭವದಿಂದ ಹೊರಬರುವುದು ತೀರಾ ಕಷ್ಟ. ಭಗ್ನಪ್ರೇಮ, ನಿರಂತರವಾದ ಏಕಾಂಗಿತನ, ನಿರಾಶೆಯು ಓರ್ವ ವ್ಯಕ್ತಿಯ ಬದುಕನ್ನು ಹಾಳುಗೆಡವಬಲ್ಲುದು ಎಂಬ ಸಂದೇಶವನ್ನು ಡಿಯರ್‌ಝಿಂದಗಿ ಪ್ರೇಕ್ಷಕರಿಗೆ ನೀಡುತ್ತದೆ.

ಚಿತ್ರದ ನಾಯಕಿ ಕೈರಾ (ಆಲಿಯಾಭಟ್) ವೃತ್ತಿಯಲ್ಲಿ ಸಿನೆಮಾ ಛಾಯಾಗ್ರಾಹಕಿ. ಕಿರುಚಿತ್ರಗಳು ಹಾಗೂ ಜಾಹೀರಾತು ಚಿತ್ರಗಳಲ್ಲಿ ಕೆಲಸ ಮಾಡುವ ಆಕೆೆ ಒಂದು ಪೂರ್ಣ ಪ್ರಮಾಣದ ಕಥಾಚಿತ್ರಕ್ಕೆ ಛಾಯಾಗ್ರಾಹಕಿಯಾಗಬೇಕೆಂಬ ಹಂಬಲ ಹೊಂದಿರುತ್ತಾಳೆ. ನಿರ್ಮಾಪಕ ರಘು (ಕುನಾಲ್ ಕಪೂರ್) ಜೊತೆ ಸ್ನೇಹಕ್ಕೆ ಆಕೆ ಹಾತೊರೆಯುತ್ತಾಳೆ. ಆದರೆ ಈ ಹಿಂದೆ ಸಿದ್ (ಅಂಗದ್ ಬೇಡಿ) ಎಂಬ ರೆಸ್ಟಾರೆಂಟ್ ಮಾಲಕನ ಜೊತೆಗಿನ ತನ್ನ ಪ್ರೇಮಸಂಬಂಧ ಮುರಿದುಬಿದ್ದ ಕಹಿನೆನಪು ಆಕೆಯನ್ನು ಹೊಸ ಪ್ರೇಮಕ್ಕೆ ಹಿಂಜರಿಯುವಂತೆ ಮಾಡುತ್ತದೆ.

ಈ ಮಧ್ಯೆ ರಘು ಆಕೆಗೆ ಒಂದು ಬಿಗ್‌ಬಜೆಟ್ ಚಿತ್ರಕ್ಕೆ ಛಾಯಾಗ್ರಾಹಕಿಯಾಗುವ ಕೊಡುಗೆಯನ್ನು ನೀಡುತ್ತಾನೆ. ಚಿತ್ರದ ಶೂಟಿಂಗ್‌ಗಾಗಿ ತನ್ನೊಂದಿಗೆ ನ್ಯೂಯಾರ್ಕ್‌ಗೆ ಬರುವಂತೆ ತಿಳಿಸುತ್ತಾನೆ. ಅದನ್ನವಳು ಸಂತೋಷದಿಂದ ಒಪ್ಪಿಕೊಳ್ಳುತ್ತಾಳೆ. ಇಬ್ಬರ ನಡುವೆ ಅರಳಿದ ಪ್ರೇಮ ಹೆಮ್ಮರವಾಗುತ್ತದೆ. ಆದರೆ ರಘು, ಮತ್ತೊಬ್ಬಳನ್ನು ಪ್ರೇಮಿಸತೊಡಗಿದಾಗ ಕೈರಾಗೆ ಆಕಾಶವೇ ಕಳಚಿಬಿದ್ದಂತಾಗುತ್ತದೆ.

ಭಗ್ನ ಹೃದಯದೊಂದಿಗೆ ಕೈರಾ,ಮುಂಬೈಯನ್ನು ತೊರೆದು ಹೆತ್ತವರೊಂದಿಗೆ ವಾಸಿಸಲು ಗೋವಾಕ್ಕೆ ವಾಪಸಾಗುತ್ತಾಳೆ. ಗೋವಾದ ಸುಂದರ ಪ್ರಕೃತಿಯ ಮಡಿಲಲ್ಲಿ ಆಕೆ ಸಾಂತ್ವನ ಕಂಡುಕೊಳ್ಳತೊಡಗುತ್ತಾಳೆ. ಇಂತಹ ಸಂದರ್ಭದಲ್ಲಿ ಆಕೆಗೆ ರೂಮಿ (ಅಲಿ ಝಫರ್ ) ಎಂಬ ಯುವಕನ ಪರಿಚಯವಾಗುತ್ತದೆ. ಗಾಯಕ ಹಾಗೂ ಸಂಗೀತಕಲಾವಿನಾದ ರೂಮಿ, ಕೈರಾಳಲ್ಲಿ ಅನುರಕ್ತನಾಗುತ್ತಾನೆ. ಆದರೆ ತನ್ನ ಹಿಂದಿನ ಭಗ್ನ ಪ್ರೇಮದಿಂದ ಬೆಂದಿರುವ ಕೈರಾಗೆ, ಆತನ ಬಗ್ಗೆ ಪ್ರೀತಿಯ ಭಾವನೆಗಳೇ ಅರಳುವುದಿಲ್ಲ. ಆಕೆಯನ್ನು ಖಿನ್ನತೆ ಆವರಿಸತೊಡಗುತ್ತದೆ. ಇಂತಹ ಸಂದರ್ಭದಲ್ಲಿ ಕೈರಾ ಮನೋವೈದ್ಯಕೀಯ ಸಮಾಲೋಚನೆ (ಕೌನ್ಸೆಲಿಂಗ್)ಗಾಗಿ ಡಾ. ಜಹಾಂಗೀರ್ ಖಾನ್ (ಶಾರುಕ್ ಖಾನ್)ನನ್ನು ಭೇಟಿಯಾಗುತ್ತಾಳೆ. ಜಹಾಂಗೀರ್‌ನ ಆಗಮನದ ಬಳಿಕ ಆಕೆಯ ಜೀವನದಲ್ಲಿ ಯಾವ ರೀತಿಯ ತಿರುವುಗಳಾಗುತ್ತವೆ ಎಂಬುದೇ ಈ ಚಿತ್ರದ ಮುಖ್ಯ ತಿರುಳಾಗಿದೆ. ಕೈರಾ ತನ್ನ ಬದುಕಿನ ಗುರಿಯನ್ನು ಸಾಧಿಸುವಳೇ? ಆಕೆಗೆ ನಿಜವಾದ ಪ್ರೇಮ ದೊರೆಯುವುದೇ? ಇವೆಲ್ಲವುಗಳಿಗೆ ಉತ್ತರ ತಿಳಿಯಲು ಡಿಯರ್ ಝಿಂದಗಿ ನೋಡಲೇಬೇಕು.

ಚಿತ್ರದ ಮೊದಲಾರ್ಧ ಮಾಮೂಲಿ ಚಿತ್ರಗಳಂತೆ ಯಾವುದೇ ತಿರುವುಗಳಿಲ್ಲದೆ ಸಾಗುತ್ತದೆ. ಚಿತ್ರದ ಪಾತ್ರಗಳನ್ನು ಪರಿಚಯಿಸುವುದರಲ್ಲೇ ಹೆಚ್ಚಿನ ಸಮಯ ಕಳೆದು ಹೋಗುತ್ತದೆ. ಆದರೆ ಇಂಟರ್‌ವಲ್ ಬಳಿಕ ಚಿತ್ರವು ಚುರುಕುಗೊಳ್ಳುತ್ತದೆ. ದ್ವಿತೀಯಾರ್ಧದಲ್ಲಿ ಬರುವ ಹೃದಯಸ್ಪರ್ಶಿ ಸನ್ನಿವೇಶಗಳು ಪ್ರೇಕ್ಷಕರನ್ನು ಭಾವುಕಗೊಳಿಸುತ್ತವೆ. ಚಿತ್ರದ ಕಥಾಹಂದರವು ತೀರಾ ದುರ್ಬಲವೆಂದು ಅನಿಸಿದರೂ, ಶಾರುಕ್,ಅಲಿಯಾ ತಮ್ಮ ಲವಲವಿಕೆಯ ಅಭಿನಯದ ಮೂಲಕ ಈ ಲೋಪವನ್ನು ಮರೆಮಾಚುವಲ್ಲಿ ಯಶಸ್ವಿಯಾಗಿದ್ದಾರೆ.

ಗೌರಿ ಶಿಂಧೆ ಚೊಚ್ಚಲ ನಿರ್ದೇಶನದ ಇಂಗ್ಲೀಷ್ ವಿಂಗ್ಲೀಷ್‌ಗೆ ಹೋಲಿಸಿದರೆ, ಕಥೆ ಹಾಗೂ ನಿರೂಪಣೆಯಲ್ಲಿ ಡಿಯರ್ ಝಿಂದಗಿ ಅದರ ಸನ್ನಿಹಕ್ಕೆ ಬರಲೂ ವಿಫಲವಾಗಿದೆಯೆಂಬ ಕಟು ಸತ್ಯವನ್ನು ಇಲ್ಲಿ ಹೇಳಲೇಬೇಕು. ಚಿತ್ರದಲ್ಲಿ ಶಾರುಕ್ ಹಾಗೂ ಆಲಿಯಾ ನಡುವಿನ ಸಂಭಾಷಣೆಗಳು ದೀರ್ಘವಾಗಿರುವುದು ಈ ಚಿತ್ರದ ಇನ್ನೊಂದು ಮೈನಸ್ ಪಾಯಿಂಟ್. ಕೆಲವು ಸನ್ನಿವೇಶಗಳಲ್ಲಿ ಬರುವ ಸಂಭಾಷಣೆಗಳಂತೂ ಕೇಳಲು ಉಪದೇಶದಂತಿವೆ. ಆದಾಗ್ಯೂ ಕಥೆಗೆ ಪೂರಕವಾಗಿರುವುದರಿಂದ ಅದನ್ನು ಪ್ರೇಕ್ಷಕರು ಸಹಿಸಿಕೊಳ್ಳಬೇಕಾಗುತ್ತದೆ. ಈ ಹಿಂದೆ ಬಿಡುಗಡೆಯಾದ ‘ತಮಾಷಾ’, ‘ಕಪೂರ್ ಆ್ಯಂಡ್ ಸನ್ಸ್’ ನಂತಹ ಚಿತ್ರಗಳು ಕೂಡಾ ಬದುಕಿನಲ್ಲಿ ಕಹಿಯುಂಡ ವ್ಯಕ್ತಿಗಳು ಅಂತಿಮವಾಗಿ ತಮ್ಮತನವನ್ನು ಕಂಡುಕೊಳ್ಳುವ ಕುರಿತಾದ ಕಥೆಗಳನ್ನು ಹೊಂದಿದ್ದವು. ಈ ಎರಡೂ ಚಿತ್ರಗಳು ಸಂಕೀರ್ಣ ಕಥಾವಸ್ತುವನ್ನು ಹೊಂದಿದ್ದರೂ ಉತ್ತಮ ಕಥಾನಿರೂಪಣೆಯಿಂದಾಗಿ ಪ್ರೇಕ್ಷಕರಿಗೆ ಆಪ್ತವಾಗಿದ್ದವು. ಆದರೆ ಡಿಯರ್ ಝಿಂದಗಿ, ದುರ್ಬಲ ನಿರೂಪಣೆಯಿಂದಾಗಿ ಪ್ರೇಕ್ಷಕನ ಹೃದಯಕ್ಕೆ ಲಗ್ಗೆ ಹಾಕುವಲ್ಲಿ ವಿಫಲವಾಗಿದೆ.

ಮನೋವೈದ್ಯನ ಪಾತ್ರಕ್ಕೆ ಶಾರುಕ್‌ಖಾನ್ ಸರಿಯಾಗಿ ಒಪ್ಪುತ್ತಾರೆ. ತನ್ನ ವಯಸ್ಸಿಗೆ ಸಮಂಜಸವೆನಿಸಿದ ಪಾತ್ರಗಳನ್ನು ಮಾಡುವುದು ಉತ್ತಮವೆಂದು ಅವರಿಗೆ ಮನವರಿಕೆಯಾದಂತಿದೆ. ಇನ್ನು ಆಲಿಯಾ ಅಭಿನಯದ ಬಗ್ಗೆ ಎರಡು ಮಾತಿಲ್ಲ. ತನ್ನ ಲವಲವಿಕೆಯ ಅಭಿನಯದ ಮೂಲಕ ಇಡೀ ಚಿತ್ರವನ್ನು ಆಕೆ ಅವರಿಸಿಕೊಳ್ಳುತ್ತಾಳೆ. ಹಾಲಿ ತಲೆಮಾರಿನ ಬಾಲಿವುಡ್ ನಟಿಯರಲ್ಲಿ ತಾನೊಂದು ಅಪ್ಪಟ ಪ್ರತಿಭೆಯೆಂಬುದನ್ನು ಆಕೆ ಈ ಚಿತ್ರದಲ್ಲಿ ಸಾಬೀತುಪಡಿಸಿದ್ದಾಳೆ. ಕೈರಾ ಪಾತ್ರದಲ್ಲಿ ಆಲಿಯಾ ಬದಲಿಗೆ ಇನ್ನೋರ್ವ ನಟಿಯನ್ನು ಕಲ್ಪಿಸಲು ಸಾಧ್ಯವೇ ಇಲ್ಲ ಎಂಬಷ್ಟು ಸಹಜವಾಗಿ ಆಕೆ ನಟಿಸಿದ್ದಾಳೆ. ಆ್ಯಂಟಿ ಕ್ಲೈಮಾಕ್ಸ್‌ನ ದೃಶ್ಯವೊಂದರಲ್ಲಿ ಆಕೆ ಪಾರ್ಟಿಯೊಂದರಲ್ಲಿ ತನ್ನ ಭಗ್ನಕನಸುಗಳನ್ನು ನಿವೇದಿಸುವ ದೃಶ್ಯವು ನಿಜಕ್ಕೂ ಆಕೆಯ ಅಭಿನಯ ಪ್ರೌಢಿಮೆಗೆ ಸಾಕ್ಷಿಯಾಗಿದೆ.

ಚಿತ್ರದಲ್ಲಿ ಅಂಗದ್‌ಬೇಡಿಗೆ ಅಭಿನಯಕ್ಕೆ ಹೆಚ್ಚಿನ ಅವಕಾಶವಿಲ್ಲವಾದರೂ,ಆ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಕುನಾಲ್ ಕಪೂರ್ ಹಾಗೂ ಅಲಿ ಝಫರ್ ಕೂಡಾ ಉತ್ತಮವಾಗಿ ನಟಿಸಿದ್ದು, ತಮ್ಮ ಪಾತ್ರಗಳಿಗೆ ಜೀವತುಂಬಿದ್ದಾರೆ. ಇರಾ ದುಬೆ ನಟನೆಯೂ ಮನಸ್ಸಿಗೆ ಮುದ ನೀಡುತ್ತದೆ. ಕ್ಲೈಮಾಕ್ಸ್‌ನ ಒಂದೇ ಒಂದು ದೃಶ್ಯದಲ್ಲಿ ಆದಿತ್ಯ ರಾಯ್ ಕಪೂರ್ ತನ್ನ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರ ಸಿಳ್ಳೆ,ಕರತಾಡನಗಳನ್ನು ಗಿಟ್ಟಿಸಿಕೊಳ್ಳುತ್ತಾರೆ.

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News