ಅಮಿತಾಭ್ - ಜಯಾ ಕುರಿತು ಸ್ಪೋಟಕ ಹೇಳಿಕೆ ನೀಡಿದ ಅಮರ್ ಸಿಂಗ್

Update: 2017-01-23 15:25 GMT

ಮುಂಬೈ, ಜ. 23 : ಒಂದಾನೊಂದು ಕಾಲದ ಅಮಿತಾಭ್ ಕುಟುಂಬದ ಆಪ್ತ ರಾಜಕಾರಣಿ ಅಮರ್ ಸಿಂಗ್ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಸಮಾಜವಾದಿ ಪಕ್ಷದಲ್ಲಿ ಉಂಟಾಗಿರುವ ಒಳಜಗಳಕ್ಕೆ ತಾನೇ ಕಾರಣ ಎಂಬ ವದಂತಿಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅಮಿತಾಭ್ ಬಚ್ಚನ್ ಕುಟುಂಬದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. 

ಅಮಿತಾಭ್ ಹಾಗು ಜಯಾ ಬಚ್ಚನ್ ಈಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಅಮರ್ ಸಿಂಗ್ ಈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. " ದೇಶದಲ್ಲಿ ಏನು ನಡೆದರೂ ಜನರು ನನ್ನನ್ನೇ ದೂರುತ್ತಾರೆ. ಅಂಬಾನಿ ಸೋದರರು ಬೇರೆ ಬೇರೆಯಾದಾಗ ಅದಕ್ಕೂ ನನ್ನ ಮೇಲೆ ದೂರು ಹಾಕಿದ್ದರು. ಆದರೆ ನಾನು ಅದರಲ್ಲಿ ಯಾವುದೇ ಪಾತ್ರ ವಹಿಸಿಲ್ಲ. ಬಚ್ಚನ್ ವಿಷಯದಲ್ಲೂ ನನ್ನ ಮೇಲೆ ಇದೇ ರೀತಿ ಅಪವಾದ ಬಂತು. ಅದರೆ ನಾನು ಅಮಿತಾಭ್ ರನ್ನು ಭೇಟಿಯಾಗುವ ಮೊದಲೇ ಅವರು ಹಾಗು ಜಯಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಒಬ್ಬರು ' ಪ್ರತೀಕ್ಷಾ' ದಲ್ಲಿ ಹಾಗು ಇನ್ನೊಬ್ಬರು 'ಜನಕ್ ' ನಲ್ಲಿ ವಾಸಿಸುತ್ತಿದ್ದರು. ಹಾಗೆ ಐಶ್ವರ್ಯಾ ರೈ ಹಾಗು ಜಯಾ ನಡುವೆ ಸಮಸ್ಯೆ ಇದೆ ಎಂದು ವದಂತಿ ಹರಡಿತ್ತು. ಅದರಲ್ಲೂ ನನ್ನ ಪಾತ್ರವಿಲ್ಲ" ಎಂದು ಅಮರ್ ಸಿಂಗ್ ಅವರನ್ನು ಉಲ್ಲೇಖಿಸಿ ಎಬಿಪಿ ಮಾಂಜಾ ವರದಿ ಮಾಡಿದೆ. 

ಈ ಗಂಭೀರ ಆರೋಪಕ್ಕೆ ಬಚ್ಚನ್ ಕುಟುಂಬ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News